ಮೊನ್ನೆ ಸೋಮವಾರ ಸಕಲೇಶಪುರ ತಾಲ್ಲೂಕಿನ ಯಸಳೂರು ಸಮೀಪ ತಂಬಲಗೇರಿ ಗ್ರಾಮದಲ್ಲಿ ಮೀನು ಶಿಕಾರಿಗೆ ತೆರಳಿದ್ದ ವ್ಯಕ್ತಿಯೊಬ್ಬರು ಗುಂಡೇಟಿನಿಂದ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದ ಪ್ರಕರಣ ನಡೆದಿತ್ತು.
ಸ್ಥಳೀಯ ಬಿ.ಜೆ.ಪಿ. ಮುಖಂಡ
ನವೀನ್ (36 ವರ್ಷ) ಸ್ನೇಹಿತರೊಂದಿಗೆ ಹೇಮಾವತಿ ನದಿಯಲ್ಲಿ ರಾತ್ರಿವೇಳೆ ಮೀನು ಹಿಡಿಯಲು ತೆರಳಿದ್ದ ಸಂದರ್ಭದಲ್ಲಿ ಗುಂಡೇಟು ತಗುಲಿ ಸಾವನ್ನಪ್ಪಿದ್ದರು. ಅವರ ಜೊತೆಗಿದ್ದ ಮೂವರಲ್ಲಿ ಇನ್ನಿಬ್ಬರು ಗಾಯಗೊಂಡಿದ್ದರು.
ಆರಂಭದಲ್ಲಿ ಇದು ಆಕಸ್ಮಿಕ ಸಾವೆಂದು ಮಾತುಗಳು ಕೇಳಿಬಂದಿದ್ದವು. ಶಿಕಾರಿಯವರು ಹಾರಿಸಿದ ಗುಂಡು ಆಕಸ್ಮಿಕವಾಗಿ ತಗುಲಿರಬಹುದೆಂದು ಭಾವಿಸಲಾಗಿತ್ತು. ಆದರೆ ಅದು ಆಕಸ್ಮಿಕವಲ್ಲ. ಉದ್ದೇಶಪೂರ್ವಕ ಕೃತ್ಯವೆಂದು ತಿಳಿದುಬಂದಿದ್ದು ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸ್ ಇಲಾಖೆ ತೀವ್ರ ತನಿಖೆ ನಡೆಸಿತ್ತು. ಸ್ಥಳಕ್ಕೆ ಐಜಿಪಿ ಪ್ರವೀಣ್ ಮಧುಕರ್, ಎಸ್ಪಿ ಹರಿರಾಂ ಶಂಕರ್ ಹಾಗೂ ಎಫ್.ಎಸ್.ಎಲ್. ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅನುಮಾನಿತರನ್ನು ವಿಚಾರಣೆಗೆ ಒಳಪಡಿಸಿದಾಗ ಇದು ಉದ್ದೇಶಪೂರ್ವಕವಾಗಿ ನಡೆದ ಕೊಲೆ ಎಂಬುದನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ.
ಮರಳು ವಿಚಾರದಲ್ಲಿ ಮನಸ್ತಾಪವಿತ್ತು.
ಕೊಲೆ ಸಂಬಂಧ ಗ್ರಾಮದ ನಾಗರಾಜು ಮತ್ತು ಅನಿಲ್ ಇವರುಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ನವೀನ್ ಮತ್ತು ಕೊಲೆ ಆರೋಪಿ ನಾಗರಾಜು ನಡುವೆ ಹೇಮಾವತಿ ನದಿಯಲ್ಲಿ ಮರಳು ಸಾಗಣೆ ವಿಚಾರದಲ್ಲಿ ಮನಸ್ತಾಪವಿತ್ತೆಂದು ತಿಳಿದುಬಂದಿದೆ. ಇದು ತಾರಕಕ್ಕೆ ಏರಿ ಪರಸ್ಪರ ದ್ವೇಷ ಮನೋಭಾವನೆ ಬೆಳೆಸಿಕೊಂಡಿದ್ದರು ಎನ್ನಲಾಗಿದೆ. ನಾಗರಾಜು ಅನಿಲ್ ಎಂಬುವವನ ಜೊತೆ ಸೇರಿ ನವೀನ್ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.
ನವೀನ್ ತನ್ನ ಸ್ನೇಹಿತರೊಂದಿಗೆ ಮೀನು ಶಿಕಾರಿಗೆ ತೆರಳಿರುವ ವಿಚಾರ ತಿಳಿದು ನಾಗರಾಜು ಮತ್ತು ಅನಿಲ್ ಬಂದೂಕಿನೊಂದಿಗೆ ತೆರಳಿ ಕಾಡಿನ ಮರೆಯಲ್ಲಿ ಕುಳಿತು ನವೀನ್ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ತಾನೇ ಆಸ್ಪತ್ರೆಗೆ ಸೇರಿಸಿದ್ದ
ಗುಂಡು ಹಾರಿಸಿದ ನಂತರ ನಾಗರಾಜು ತನ್ನ ಪರಿಚಯದ ಚಾಲಕನೊಬ್ಬನಿಗೆ ಕರೆ ಮಾಡಿ ವಾಹನ ತರಿಸಿ ಮೂವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ. ಪ್ರಕರಣದಿಂದ ತಪ್ಪಿಸಿಕೊಳ್ಳಲು ಸಿನಿಮೀಯ ಶೈಲಿಯಲ್ಲಿ ಪ್ರಯತ್ನ ನಡೆಸಿದ್ದ.
ಘಟನೆ ನಡೆದ ದಿನ ನಾಗರಾಜು ಬಂದೂಕಿನೊಂದಿಗೆ ಹೋಗುತ್ತಿದ್ದುದನ್ನು ನೋಡಿದ್ದವರು ನೀಡಿದ ಸುಳಿವಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.





