ಇಂದು ಸಂಜೆ ಮೂಡಿಗೆರೆ ಪಟ್ಟಣದ ಸುತ್ತಮುತ್ತ ಬಿರುಗಾಳಿ ಸಹಿತ ಬಾರಿ ಮಳೆಸುರಿದಿದ್ದು, ಚಲಿಸುತ್ತಿದ್ದ ಸ್ಕೂಟಿ ಮೇಲೆ ಮರ ಉರುಳಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುತ್ತಾರೆ
ಮೂಡಿಗೆರೆ ಪಟ್ಟಣದ ನಿವಾಸಿ ವೇಣುಗೋಪಾಲ್(65 ವರ್ಷ) ಮೃತ ದುರ್ದೈವಿ. ಅವರು ಮೂಡಿಗೆರೆ ಸಮೀಪದ ಚಿಕ್ಕಳ್ಳ ಎಂಬಲ್ಲಿ ಇರುವ ತಮ್ಮ ಮಧುವನ ಹೋಂ ಸ್ಟೇ ಗೆ ಸ್ಕೂಟಿಯಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ.

ಇಂದು ಸಂಜೆ ಸುಮಾರು 4-45 ರ ಸಮಯದಲ್ಲಿ ಮಳೆಗಾಳಿಗೆ ದೊಡ್ಡ ಗಾತ್ರದ ಮರ ಒಂದು ಸ್ಕೂಟಿಯ ಮೇಲೆ ಉರುಳಿ ಬಿದ್ದ ಪರಿಣಾಮ ವೇಣುಗೋಪಾಲ್ ಅವರು ತೀವ್ರ ಗಾಯಗೊಂಡು ಮೃತಪಟ್ಟಿರುತ್ತಾರೆ.

ವೇಣುಗೋಪಾಲ್ ಅವರು ಮೂಲತಃ ಹಾಸನ ಮೂಲದವರಾಗಿದ್ದು ಮೂಡಿಗೆರೆ ತಾಲ್ಲೂಕು ಕೆಸವಳಲು ಗ್ರಾಮದ ರಾಧಾ ಅವರನ್ನು ವಿವಾಹವಾಗಿ ಮೂಡಿಗೆರೆಯಲ್ಲಿಯೇ ನೆಲೆಸಿದ್ದರು.
ಹಲವು ವರ್ಷಗಳಿಂದ ಮೂಡಿಗೆರೆಯಲ್ಲಿಯೇ ನೆಲಸಿದ್ದ ವೇಣುಗೋಪಾಲ್ ಪಟ್ಟಣದಲ್ಲಿ ಅಡ್ಯಂತಾಯ ರಂಗಮಂದಿರದ ಎದುರಿನಲ್ಲಿರುವ ಪ.ಪಂ.ಮಳಿಗೆಯಲ್ಲಿ ಈ ಹಿಂದೆ ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದರು.
ಸ್ನೇಹಜೀವಿಯಾಗಿದ್ದ ವೇಣು ಅವರು ಮೂಡಿಗೆರೆ ಜನತೆಗೆ ಚಿರಪರಿಚಿತರಾಗಿದ್ದರು. ಇತ್ತೀಚೆಗೆ ಚಿಕ್ಕಳ್ಳ ಸಮೀಪ ಮಧುವನ ಎಂಬ ಹೋಂ ಸ್ಟೇ ಪ್ರಾರಂಭಿಸಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಅಪಾರ ಬಂಧುಗಳನ್ನು ಅಗಲಿದ್ದಾರೆ.
ವೇಣು ಅವರ ದುರಂತ ಸಾವಿನ ಸುದ್ದಿ ತಿಳಿದು ಅವರ ಸ್ನೇಹಿತರು ಬಂಧುಗಳು ಸಾವಿರಾರು ಸಂಖ್ಯೆಯಲ್ಲಿ ಮೂಡಿಗೆರೆ ಎಂ.ಜಿ.ಎಂ.ಆಸ್ಪತ್ರೆ ಆವರಣದಲ್ಲಿ ನೆರೆದಿದ್ದಾರೆ.



