ಶಾಲೆಗೆ ಹೋಗಲು ಬಸ್ ಕಾಯುತ್ತ ನಿಂತಿದ್ದ ಮಕ್ಕಳ ಮೇಲೆ ಖಾಸಗಿ ಬಸ್ ಒಂದು ಹರಿದು ಓರ್ವ ಬಾಲಕಿ ಮೃತಪಟ್ಟಿದ್ದು, ಮತ್ತೋರ್ವಳ ಸ್ಥಿತಿ ಗಂಭೀರವಾಗಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನಲ್ಲಿ ಈ ದುರ್ಘಟನೆ ನಡೆದಿದ್ದು ಘಟನೆಯಲ್ಲಿ ಇನ್ನೂ 5 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತರೀಕೆರೆ ತಾಲೂಕಿನ ಸೀತಾಪುರ ಕಾವಲ್ ದುಗ್ಲಾಪುರ ಗೇಟ್ ನಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ತುಳಸಿ (15) ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ನಿವೇದಿತ (14) ಸ್ಥಿತಿ ಗಂಭೀರವಾಗಿದೆ.
ಪ್ರತಿನಿತ್ಯದಂತೆ ಶಾಲೆಗೆ ಹೋಗಲು ನಿಗದಿತ ಸ್ಥಳದಲ್ಲಿ ಬಸ್ ಗಾಗಿ ಕಾಯುತ್ತ ನಿಂತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ವಿದ್ಯಾರ್ಥಿಗಳು ನಿಂತ ಕಡೆಯೇ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಚಲಿಸಿದೆ. ಈ ವೇಳೆ ಎಲ್ಲ ಮಕ್ಕಳು ಓಡಲು ಮುಂದಾದರು, ಇಬ್ಬರು ಮಕ್ಕಳಿಗೆ ಬಸ್ ಬಂದು ಗುದ್ದಿದೆ.
ಬಸ್ ಅತಿವೇಗದಲ್ಲಿ ಚಲಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದಾಟಿ ವಿದ್ಯಾರ್ಥಿಗಳ ಮೇಲೆ ಹರಿದಿದೆ ಎಂದು ಹೇಳಲಾಗಿದೆ.
ಮಕ್ಕಳಿಗೆ ಡಿಕ್ಕಿ ಹೊಡೆದ ನಂತರವೂ ಬಸ್ ನಿಯಂತ್ರಣಕ್ಕೆ ಸಿಗದೇ ರಸ್ತೆ ಬದಿಯಲ್ಲಿದ್ದ ಮರ ಹಾಗೂ ಮನೆಯ ಗೋಡೆಗೆ ಗುದ್ದಿದೆ. ಈ ಘಟನೆಯಲ್ಲಿ ರಸ್ತೆ ಬದಿಯಿದ್ದ ಮನೆಯ ಮುಂಭಾಗದ ಛಾವಣಿಯೂ ಸಂಪೂರ್ಣ ಜಖಂ ಆಗಿದೆ.

ಮೃತ ತುಳಸಿ ತರೀಕೆರೆ ತಾಲೂಕಿನ ಸೀತಾಪುರ ಕಾವಲಿನ ಮಂಜು ಲತಾ ದಂಪತಿಯ ಪುತ್ರಿಯಾಗಿದ್ದು, ಬಾವಿಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ 9 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ಮಾಡಿ ಗಾಜುಗಳನ್ನು ಪುಡಿಗೈದಿದ್ದಾರೆ.
ಈ ಭಾಗದಲ್ಲಿ ಸಾರಿಗೆ ಬಸ್ ಗಳ ಸೌಲಭ್ಯ ಇಲ್ಲ. ಜನರು ಓಡಾಟಕ್ಕೆ ಖಾಸಗಿ ಬಸ್ ಗಳನ್ನೆ ಅವಲಂಭಿಸಬೇಕಾಗಿದೆ. ಇಲ್ಲಿ ಸಂಚರಿಸುವ ಖಾಸಗಿ ಬಸ್ ಗಳು ಅತಿವೇಗ ಮತ್ತು ಮಿತಿಮೀರಿ ಜನರನ್ನು ತುಂಬಿಸಿಕೊಂಡು ಚಲಿಸುತ್ತಿದ್ದು, ಜನರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಇದರಿಂದ ಈಗ ಮುಗ್ದ ಬಾಲಕಿ ಬಲಿಯಾಗುವಂತಾಗಿದೆ.



