ಸಿರಿಗನ್ನಡ ವೇದಿಕೆಯನ್ನು 2003 ರಲ್ಲಿ ಪ್ರಾರಂಭಿಸಿ ಈ ನಾಡಿನ ನೆಲ, ಜಲ, ಸಂಸ್ಕೃತಿ, ಭಾಷೆ ಉಳಿವಿಗಾಗಿ ಶ್ರಮಿಸುತ್ತಿದ್ದು, ಇದೀಗ ಮೂಡಿಗೆರೆ ತಾಲೂಕು ಘಟಕದ ಪದಗ್ರಹಣ ಹಾಗೂ ನುಡಿ ನಿತ್ಯೋತ್ಸವ ಕಾರ್ಯಕ್ರಮ ಇದೇ ತಿಂಗಳು ನವೆಂಬರ್ 18 ರಂದು ಸಂಜೆ 4 ಗಂಟೆಗೆ ಪಟ್ಟಣದ ಮಹಂತೀನ ಮಠ ಸಮುದಾಯಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನೂತನ ಅಧ್ಯಕ್ಷ ಎಂ.ಆರ್.ಪೂರ್ಣೇಶ್ಮೂರ್ತಿ ಹೇಳಿದರು.
ಅವರು ಸೋಮವಾರ ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ನಾಡಿನ ಸಂಸ್ಕೃತಿ ಉಳಿಯುವ ಹಿನ್ನಲೆಯಲ್ಲಿ ಈ ಸಂಘಟನೆ ಪ್ರಾರಂಭಿಸಲಾಗಿದೆ. ನಮ್ಮ ತಾಲೂಕಿನಲ್ಲಿ ತಾಂಡವವಾಡುತ್ತಿದ್ದ ಕಲೆ, ಸಂಸ್ಕೃತಿ ಇದೀಗ ವಿನಾಶದತ್ತ ತೆರಳಿದೆ. ಈ ಹಿನ್ನಲೆಯಲ್ಲಿ ತಮ್ಮ ತಾಲೂಕಿನಲ್ಲಿರುವ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಂಘಟನೆಯಿಂದ ಶಕ್ತಿ ಮೀರಿ ಪ್ರಯತ್ನಿಸಲಾಗುವುದು. ರಾಜ್ಯಾಧ್ಯಂತ ಅನ್ಯಭಾಷೆಯ ವ್ಯಾಮೋಹಕ್ಕೆ ಮಾರು ಹೋಗಿ ಇಂದು ಕನ್ನಡ ಭಾಷೆ ನಿಶಿಸುತ್ತಿದೆ. ಹೀಗೆ ಮುಂದುವರೆದರೆ ರಾಜ್ಯದಲ್ಲಿ ಕನ್ನಡ ಭಾಷೆಗೆ ಮಾನ್ಯತೆ ಕಡಿಮೆಯಾಗುತ್ತದೆ. ಇದನ್ನು ಮನಗೊಂಡು ಕನ್ನಡ ಭಾಷೆ ಉಳಿವಿಗಾಗಿ ಹೆಚ್ಚು ಒತ್ತು ನೀಡುತ್ತದೆ ಎಂದು ಹೇಳಿದರು.
ಗೌರವಾಧ್ಯಕ್ಷ ಜಿ.ಎಚ್.ಹಾಲಪ್ಪಗೌಡ ಮಾತನಾಡಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಹಳೆಕೋಟೆ ರಮೇಶ್ ವಹಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್ ನೆರವೇರಿಸಲಿದ್ದಾರೆ. ಸಾಹಿತಿ ಮಾಸ್ತಿ ವೆಂಕಟೇಶ್ ಅಯ್ಯಂಗರ್ ಅವರ ಜೀವನಾಧಾರಿತ ಕಥೆಯನ್ನು ಕನ್ನಡ ಉಪನ್ಯಾಸಕ ಡಾ.ಸಂಪತ್ ಬೆಟ್ಟಗೆರೆ ಬಣ್ಣಿಸಲಿದ್ದಾರೆ. ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ.ಆರ್.ಪೂರ್ಣೇಶ್ಮೂರ್ತಿ, ಮುಖ್ಯ ಅತಿಥಿಗಳಾಗಿ ಮಗ್ಗಲಮಕ್ಕಿ ಗಣೇಶ್, ಬಕ್ಕಿ ರವೀಂದ್ರ, ರಾಜಲಕ್ಷ್ಮಿ ಕಾಂತರಾಜ್ ಭಾಗವಹಸಲಿದ್ದಾರೆ.
ಬಕ್ಕಿ ಮಂಜುನಾಥ್ ತಂಡದಿಂದ ನುಡಿ ನಿತ್ಯೋತ್ಸವ ಗೀತಗಾಯನ ನಡೆಯಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ.ಮೋಹನ್ರಾಜಣ್ಣ, ಕೋಶಾಧ್ಯಕ್ಷ ಹಮೀದ್ ಸಬ್ಬೇನಹಳ್ಳಿ, ಉಪಾಧ್ಯಕ್ಷ ಮೋಹಿದ್ದೀನ್ ಸೇಠ್ ಉಪಸ್ಥಿತರಿದ್ದರು.


