ಕುರಿ ಮಂದೆ ಮೇಲೆ ಚಿರತೆ ದಾಳಿ ನಡೆಸಿ 31 ಕುರಿಗಳನ್ನು ಕೊಂದಿರುವ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ಈ ಘಟನೆ ನಡೆದಿದೆ. ಕಡೂರು ತಾಲ್ಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
ಮಲ್ಲೇಶ್ವರ ಗ್ರಾಮದ ಚಂದ್ರು, ಬಸವರಾಜು, ಮಂಜು, ಲಕ್ಷ್ಮಣ್ ಎಂಬುವವರಿಗೆ ಸೇರಿದ 31 ಕುರಿಗಳು ಸಾವನ್ನಪ್ಪಿವೆ. ಸುಶೀಲಮ್ಮ ಎಂಬುವವರ ತೋಟದ ಮನೆಯಲ್ಲಿ ಇದ್ದ ಕುರಿಮಂದೆ ಮೇಲೆ ಚಿರತೆ ದಾಳಿ ನಡೆಸಿದ್ದು, ಚಿರತೆ ದಾಳಿಗೆ 17 ಕುರಿ ಮತ್ತು 14 ಮೇಕೆಗಳು ತಮ್ಮ ಪ್ರಾಣ ಕಳೆದುಕೊಂಡಿವೆ. ಸುಮಾರು 4 ಲಕ್ಷ ಮೌಲ್ಯದ ಕುರಿಗಳು ಪ್ರಾಣಬಿಟ್ಟಿವೆ.

ಚಿರತೆ ಕುರಿಗಳ ಕುತ್ತಿಗೆಗೆ ಬಾಯಿ ಹಾಕಿ ಅವುಗಳನ್ನು ಸಾಯಿಸಿದೆ ಎನ್ನಲಾಗಿದೆ. ಕೆಲವೊಂದು ಕುರಿಗಳನ್ನು ಅರ್ಧಂಬರ್ಧ ತಿಂದಿದ್ದು ಕೆಲವು ಕುರಿಗಳ ರಕ್ತವನ್ನು ಕುಡಿದಿದೆ ಎಂದು ತಿಳಿದುಬಂದಿದೆ.
ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುರಿಗಳು ಸಾವನ್ನಪ್ಪಿ ರಾಶಿಯಾಗಿ ಬಿದ್ದಿರುವ ದೃಶ್ಯ ಕರುಳು ಹಿಂಡುವಂತಿದೆ.



