ಹುಲಿ ಮತ್ತು ಆನೆ ಕಾರಿಡಾರ್ ವಲಯ ದಂತಹ ಪರಿಸರ ಸೂಕ್ಷ್ಮ ವಲಯದಲ್ಲಿ ಲೇಔಟ್ ನಿರ್ಮಾಣಕ್ಕೆ ಮುಂದಾಗಿರುವ ಪ್ರಭಾವಿ ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ನೋಟೀಸ್ ನೀಡಿದ್ದಾರೆ.
ಚಿಕ್ಕಮಗಳೂರು ಮುಳ್ಳಯ್ಯನಗಿರಿ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ ಭದ್ರಾ ಹುಲಿ ಸಂರಕ್ಷಿತ ಮತ್ತು ಕಾಮೇನಹಳ್ಳಿ ಮೀಸಲು ಅರಣ್ಯ ವ್ಯಾಪ್ತಿಯ ಬಫರ್ ಜೋನ್ ಗೆ ಹೊಂದಿಕೊಂಡಂತೆ ಲೇಔಟ್ ನಿರ್ಮಾಣಕ್ಕೆ ಮುಂದಾಗಿದ್ದು ಇದರ ನಕ್ಷೆಯನ್ನು ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕಂದಾಯ ಉಪವಿಭಾಗಾಧಿಕಾರಿಗಳ ವರದಿಯನ್ನು ಆಧರಿಸಿ ಆರು ಜನರಿಗೆ ನೋಟಿಸ್ ನೀಡಿರುವ ಜಿಲ್ಲಾಧಿಕಾರಿಗಳು ಉತ್ತರಿಸಲು ಏಳು ದಿನಗಳ ಗಡುವು ನೀಡಿದ್ದಾರೆ.
ಕೆಎಫ್ ಕಾಫಿ ಬೈದಿ ಸ್ಟ್ರೀಮ್ ಎಲ್ಎಲ್ಪಿ ಪಾಲುದಾರ ಎಂ. ಎನ್ .ಆದಿತ್ಯ, ಎಂ. ಎಸ್. ಜಯರಾಮ್, ಐಬಿಪಿ ಸಂಸ್ಥೆ ಜಿಪಿಎ ಪಡೆದಿರುವ ವಿ.ಬಾರಾಟೋ, ಅಭಿಷೇಕ್ ಜಿಂದಾಲ್, ಎಸ್. ಕೆ .ಮಹೇಂದ್ರ ಇವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಚಿಕ್ಕಮಗಳೂರು ತಾಲೂಕು ಜಾಗರ ಹೋಬಳಿ ಗೋಣಕ್ಕಲ್ ಮತ್ತು ಮೇಲು ಹುಲುವತ್ತಿಯ ಸುಮಾರು 242 ಎಕರೆ ಪ್ರದೇಶದಲ್ಲಿ ತುಂಡು ಭೂಮಿ ವಿಭಜಿಸಿ ಲೇಔಟ್ ನಿರ್ಮಿಸಿ ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಲು ಯತ್ನಿಸಿರುವ ಆರೋಪ ದ ಹಿನ್ನೆಲೆಯಲ್ಲಿ ಸುಧೀರ್ಘವಾದ ನೋಟಿಸ್ ಜಾರಿಗೊಳಿಸಲಾಗಿದೆ.
ಸಮರ್ಪಕ ದಾಖಲೆಗಳೊಂದಿಗೆ ಸಮಜಾಯಿಸಿ ನೀಡದೆ ಇದ್ದಲ್ಲಿ ಭೂಸುಧಾರಣೆ ಕಾಯ್ದೆಯ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.



