ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಪೈಸಸ್ ಪಾರ್ಕ್ ನಿರ್ಮಾಣಕ್ಕೆ ಅನುಮೋದನೆ ನೀಡಿರುವುದು ಸ್ವಾಗತಾರ್ಹ ನಡೆ ಎಂದು ಕಾಫಿ ಮಂಡಲಿ ಮಾಜಿ ಉಪಾಧ್ಯಕ್ಷ ಮತ್ತು ಬ್ಲಾಕ್ ಗೋಲ್ಡ್ ಲೀಗ್ ಸಂಸ್ಥಾಪಕ ಕೆಂಜಿಗೆ ಕೇಶವ್ ಹೇಳಿದ್ದಾರೆ.
ಅವರು ಈ ಬಗ್ಗೆ ಪತ್ರಿಕೆ ತಮ್ಮ ಹೇಳಿಕೆ ನೀಡಿದ್ದು, ಚಿಕ್ಕಮಗಳೂರು ನಗರದಲ್ಲಿ ಸ್ಪೈಸಸ್ ಪಾರ್ಕ್ ನಿರ್ಮಾಣ ಮಾಡಬೇಕು ಎಂದು ಹಲವಾರು ವರ್ಷಗಳಿಂದ ಪ್ರಯತ್ನ ನಡೆಸುತ್ತಾ ಬಂದಿದ್ದೆವು. ಈ ಹಿಂದೆ ಕಾಳುಮೆಣಸು ಬೆಳೆಗಾರರ ಸಂಘಟನೆ ಬ್ಲಾಕ್ ಗೋಲ್ಡ್ ಲೀಗ್ (ಬಿ.ಜಿ.ಎಲ್.) ಚಿಕ್ಕಮಗಳೂರು ಎ.ಐ.ಟಿ. ಸಭಾಂಗಣದಲ್ಲಿ ಬೃಹತ್ ಸಮಾವೇಶ ನಡೆಸಿ ಕೇಂದ್ರ ಮತ್ತು ರಾಜ್ಯ ಸಚಿವರುಗಳನ್ನು ಕರೆಸಿ ಚಿಕ್ಕಮಗಳೂರಿನಲ್ಲಿ ಸ್ಪೈಸಸ್ ಪಾರ್ಕ್ ನಿರ್ಮಾಣ ಮಾಡಬೇಕು ಎಂದು ಹಕ್ಕೊತ್ತಾಯ ಮಾಡಲಾಗಿತ್ತು.
ಅಂದಿನ ಸಮಾವೇಶದ ನಂತರ ಈ ನಿಟ್ಟಿನಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಿವೆ. ಸ್ಪೈಸಸ್ ಪಾರ್ಕ್ ನಿರ್ಮಾಣಕ್ಕೆ ಚಿಕ್ಕಮಗಳೂರು ನಗರದ ಸಮೀಪ ಜಾಗ ಮಂಜೂರು ಮಾಡಲಾಗಿದೆ. ಇದೀಗ ರಾಜ್ಯ ಬಜೆಟ್ ನಲ್ಲಿ ಈ ವಿಚಾರ ಪ್ರಸ್ತಾಪವಾಗಿದ್ದು, ಸ್ಪೈಸಸ್ ಪಾರ್ಕ್ ನಿರ್ಮಾಣಕ್ಕೆ ಅನುಮೋದನೆ ನೀಡಿರುವ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ತೀರ್ಮಾನ ಅಭಿನಂದನಾರ್ಹ. ಇದನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕು ಎಂದು ಕೇಶವ್ ಹೇಳಿದ್ದಾರೆ.
ಚಿಕ್ಕಮಗಳೂರು ಸೇರಿದಂತೆ ಕಾಫಿ ಹಾಗೂ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಮಿಶ್ರಬೆಳೆಯಾಗಿ ಕಾಳು ಮೆಣಸು, ಏಲಕ್ಕಿ ಮುಂತಾದ ಸಾಂಬಾರ ಬೆಳೆಗಳನ್ನು ಯಥೇಚ್ಚವಾಗಿ ಬೆಳೆಯಲಾಗುತ್ತಿದೆ. ಸ್ಪೈಸಸ್ ಪಾರ್ಕ್ ಸ್ಥಾಪನೆಯಾದರೆ ಈ ಬೆಳೆಗಳ ಸಂಶೋಧನೆ, ಸಾಗುವಳಿ, ಸಂಸ್ಕರಣೆ, ರಫ್ತು ಮಾರುಕಟ್ಟೆಗೆ ಹೆಚ್ಚಿನ ಅವಕಾಶ ಸಿಗುತ್ತದೆ. ಇದರಿಂದ ರೈತಾಪಿ ವರ್ಗಕ್ಕೆ ಹೆಚ್ಚಿನ ಅನುಕೂಲ ಆಗುತ್ತದೆ ಎಂದಿದ್ದಾರೆ.



