ನಟ ದರ್ಶನ್ʼನನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು, ಆತನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಿ ಎಂದು ಮೃತ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಪುತ್ರನನ್ನು ದರ್ಶನ್ ಹಾಗೂ ಅವರ ಆಪ್ತರು ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ರತ್ನಪ್ರಭಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡ ಮನುಷ್ಯನ ಗುಣ ದರ್ಶನ್ ಗಿಲ್ಲ, ಅವನು ಕಳ್ಳ. ಸಿನಿಮಾ ಇಂಡಸ್ಟ್ರಿಯಿಂದಲೇ ಆತನನ್ನು ಬ್ಯಾನ್ ಮಾಡಬೇಕು. ದರ್ಶನ್ ಯಾವುದೇ ಸಿನಿಮಾಗಳನ್ನ ರಿಲೀಸ್ ಮಾಡಬಾರದು. ಡಿ ಬಾಸ್ ಎನ್ನುವ ಅಭಿಮಾನಿಗಳು ಇವನ ಹೇಯ ಕೃತ್ಯವನ್ನು ನೋಡಿ ಕಲಿಯಲಿ. ನನ್ನ ಮಗನಿಗೆ ಆದ ಸ್ಥಿತಿಯೇ ದರ್ಶನ್ ಮಗನಿಗೆ ಆಗಬೇಕು. ಅವರ ಕುಟುಂಬವೇ ಸರ್ವನಾಶ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಎಂದು ತೋರಿಸಿಕೊಂಡಿಲ್ಲ. ಮೆಸೇಜ್ ಮಾಡಿದ ಕಾರಣಕ್ಕೆ ಅಪಹರಣ ಮಾಡಿ ಭೀಕರ ಕೊಲೆ ಮಾಡಿದ್ದಾರೆ. ಮುಖ, ಮರ್ಮಾಂಗಕ್ಕೆ ಭೀಕರ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಈ ಸಂಬಂಧ ಸರ್ಕಾರ ಸೂಕ್ತ ತನಿಖೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು. ಸಿಬಿಐ ತನಿಖೆ ಮೂಲಕ ನಟ ದರ್ಶನ್ & ಗ್ಯಾಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಮಗೆ ನ್ಯಾಯ ಬೇಕು: ಪತ್ನಿ ಸಹನಾ ಕಣ್ಣೀರು
ನನ್ನ ಗಂಡ ದರ್ಶನ್ ಅಭಿಮಾನಿಯಾಗಿರಲಿಲ್ಲ. ಅವರು ನನ್ನ ಜೊತೆ ಮೊನ್ನೆ ಕರೆ ಮಾಡಿ ಮಾತನಾಡಿದ್ದೇ ಕೊನೆ. ನಮಗೆ ನ್ಯಾಯ ಕೊಡಿಸಿ ಎಂದು ಮೃತ ರೇಣುಕಾಸ್ವಾಮಿ ಪತ್ನಿ ಸಹನಾ ಹೇಳಿದ್ದಾರೆ.
ನಮ್ಮ ಮನೆಯವರಿಗೆ ಹೀಗೆ ಆಗಿದೆ. ನಮಗೆ ನ್ಯಾಯ ಕೊಡಿಸಿ. ನಮ್ಮ ಮದುವೆಯಾಗಿ ಒಂದು ವರ್ಷ ಕಳೆದಿದೆ. ನಾನು ಗರ್ಭಿಣಿ. ಹೀಗಾಗಬಾರದಿತ್ತು. ತಾಯಿಯಾಗುತ್ತಿರುವ ಈ ವೇಳೆಯಲ್ಲಿ ಹೀಗಾದ್ರೆ ಏನ್ಮಾಡಲಿ ಎಂದು ಕಣ್ಣೀರಿಟ್ಟಿದ್ದಾರೆ.
ದರ್ಶನ್ ಮೇಲೆ ಆರೋಪ ಬಂದಿರುವಾಗ ನ್ಯಾಯ ಕೊಡಿಸಲು ಜನ ಇದ್ದಾರೆ. ನಾನು ಮುಂದೆ ಜೀವನ ಮಾಡೋದು ಹೇಗೆ. ಮುಂದೆ ಈ ಮಗುವಿಗೆ ಯಾರು ಬರ್ತಾರೆ. ನಮಗೆ ನ್ಯಾಯ ಬೇಕು ಎಂದು ಹೇಳಿದ್ದಾರೆ.



