ಉತ್ತಮ ಆರ್ಥಿಕ ಸ್ಥಿತಿಯ ಮೂಲಕ ಹಿಂದಿನ ಬಿಜೆಪಿ ಸರಕಾರ ರಾಜ್ಯವನ್ನು ಮುಂದಿನ ಪೀಳಿಗೆಗೆ ಕಟ್ಟು ಬೆಳಸಲು ಪ್ರಯತ್ನಿಸಿ ಯಶಸ್ವಿಯಾಗಿತ್ತು. ಅದನ್ನು ಈಗ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಸರಕಾರ ಬುಡ ಮೇಲು ಮಾಡಿ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ಮೂಲಕ ರಾಜ್ಯವನ್ನೇ ನಾಶ ಮಾಡಲು ಹೊರಟಿದೆ ಎಂದು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ದೂರಿದರು.
ಅವರು ಗುರುವಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪಕ್ಷದ ವತಿಯಿಂದ ಪಟ್ಟಣದ ಕೆ.ಎಂ.ರಸ್ತೆ ತಡೆಗೊಳಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ಈ ಹಿಂದೆ ಬಿಜೆಪಿ ಸರಕಾರ ಯಾವುದೇ ಬೆಲೆ ಏರಿಸದೇ, ಕಳೆದ 10 ವರ್ಷದ ಹಿಂದೆ ಇದ್ದ ತೆರಿಗೆಯನ್ನೇ ಮುಂದುವರೆಸಿ ಜನ ಸಾಮಾನ್ಯರ ಹಿತ ಕಾಯಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗೆ ಹಣ ಸಂಗ್ರಹಿಸಲು ಬಲೆ ಏರಿಕೆಯ ವಾಮ ಮಾರ್ಗದ ಮೂಲಕ ವಿದ್ಯುತ್, ಅಬಕಾರಿ, ಪೆಟ್ರೋಲಿಯಂ, ಕಂದಾಯ ಸೇರಿದಂತೆ ಎಲ್ಲವುದಕ್ಕೂ ದುಪ್ಪಟ್ಟು ತೆರಿಗೆ ವಿಧಿಸಿ ಜನಸಾಮಾನ್ಯರ ಬೇಬಿಗೆ ಕತ್ತರಿ ಹಾಕುತ್ತಿದೆ. ಇದು ಮುಂದಿನ ದಿನದಲ್ಲಿ ರಾಜ್ಯವನ್ನು ವಿನಾಶನಂಚಿಗೆ ತಳ್ಳುವ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಕೆ.ಸಿ.ರತನ್ ಮಾತನಾಡಿ, ಮುಖ್ಯಮಂತ್ರಿಗಳು ತೆರಿಗೆ ಏರಿಸುವಾಗ ಪಕ್ಕದ ರಾಜ್ಯಗಳಾದ ತೆಲಂಗಾಣ, ಕೇರಳ, ಆಂದ್ರಪ್ರದೇಶ, ತಮಿಳುನಾಡಿನ ಉದಾಹರಣೆ ನೀಡುತ್ತಿದ್ದಾರೆ. ಆ ರಾಜ್ಯಗಳ ಸರಕಾರ ಜನರಿಗೆ ಉದ್ಯೋಗ ಹಾಗೂ ಮೂಲ ಸೌಕರ್ಯ ನೀಡದೇ ಗ್ಯಾರಂಟಿ ಹೆಸರಿನಲ್ಲಿ ವಂಚಿಸಲಾಗುತ್ತಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಹೊರ ರಾಜ್ಯಗಳ ಸಾಲಿಗೆ ಕರ್ನಾಟಕವನ್ನು ಸೇರಿಸಲು ಹೊರಟಿರುವುದು ರಾಜ್ಯದ ಜನತೆಯ ದುರಂತ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಜೆ.ಎಸ್..ರಘು ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಪಕ್ಷ ಬೆಲೆ ಏರಿಕೆ ವಿರೋಧಿಸಿ ದರಣಿ, ಪ್ರತಿಭಟನೆ ನಡೆಸಿತ್ತು. ಈಗ ಪ್ರತಿಭಟನೆ ನಡೆಸಿದವರೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿ ರಾಝ್ಯದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಇಂತಹ ಸರಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಪ.ಪಂ. ಸದಸ್ಯರಾದ ಆಶಾ ಮೋಹನ್, ಸುಧೀರ್, ಕಮಲಾಕ್ಷಮ್ಮ, ಮುಖಂಡರಾಧ ಹಳಸೆ ಶಿವಣ್ಣ, ಕೆಂಜಿಗೆ ಕೇಶವ್, ಸಚಿನ್ ಬಾನಳ್ಳಿ, ಪ್ರಶಾಂತ್ ಬಿಳಗುಳ, ಧನಿಕ್ ಕೋಡದಿಣ್ಣೆ, ಎಂ.ಎಸ್.ಸುಜಿತ್, ನಯನ ತಳವಾರ, ವಿನಯ್ ಹಳೆಕೋಟೆ, ಸುನೀಲ್ ಮಣ್ಣಿಕೆರೆ, ಪಂಚಾಕ್ಷರಿ, ಪ್ರವೀಣ್, ಯೋಗೇಶ್ ಪೂಜಾರಿ, ತಾರೇಶ್ ಜೇನುಬೈಲ್ ರವಿ ಒಡೆಯರ್, ಹರ್ಷ ಬಂಕೇನಹಳ್ಳಿ ಮತ್ತಿತರರಿದ್ದರು.


