ನಿರಂತರ ಮಳೆಯಿಂದ ಅನೇಕ ಕಡೆ ಅನಾಹುತಗಳು ಸಂಭವಿಸುತ್ತಿದ್ದು, ಚಿಕ್ಕಮಗಳೂರು ತಾಲ್ಲೂಕಿನ ಸಂಗಮೇಶ್ವರ ಪೇಟೆ ಸಮೀಪದ ಮಾಗಲು ಗ್ರಾಮದಲ್ಲಿ ಕೃಷಿಕರೊಬ್ಬರಿಗೆ ಸೇರಿದ ತಡೆಗೋಡೆ ಕುಸಿದು ಅಪಾರ ನಷ್ಟ ಸಂಭವಿಸಿದೆ.
ಮಾಗಲು ಗ್ರಾಮದ ರಮೇಶ್ ಎಂ.ಎಂ. ಎನ್ನುವವರ ಮನೆಯ ಬಳಿ ನಿರ್ಮಿಸಿದ್ದ ತಡೆಗೋಡೆ ಬಾರೀ ಮಳೆಯಿಂದ ಸಂಪೂರ್ಣ ಕುಸಿದಿದೆ.
ಸೋಮವಾರ ಸುರಿದ ಮಳೆಯಿಂದ ತಡೆಗೋಡೆ ಕುಸಿದಿದ್ದು, ರಮೇಶ್ ಅವರಿಗೆ ಸುಮಾರು 5 ಲಕ್ಷ ರೂ. ನಷ್ಟ ಸಂಭವಿಸಿದೆ.
ಮನೆಯ ಸುರಕ್ಷತೆಗೆಂದು ಮನೆಯ ಸುತ್ತಲ ಪ್ರದೇಶಕ್ಕೆ ಇಟ್ಟಿಗೆಯಿಂದ ತಡೆಗೋಡೆ ನಿರ್ಮಿಸಿದ್ದರು. ಇದಕ್ಕಾಗಿ ಅವರ ಪತ್ನಿ ಹೆಸರಿನಲ್ಲಿ ಧರ್ಮಸ್ಥಳ ಸಂಘದಲ್ಲಿ 3 ಲಕ್ಷ ಮತ್ತು ಸ್ತ್ರೀ ಶಕ್ತಿ ಸಂಘದಲ್ಲಿ 1 ಲಕ್ಷ ಸಾಲ ಮಾಡಿದ್ದರು.
ಇದೀಗ ಸಾಲ ಮಾಡಿ ಕಟ್ಟಿದ್ದ ತಡೆಗೋಡೆ ಸಂಪೂರ್ಣ ನೆಲಕಚ್ಚಿದ್ದು, ಸಣ್ಣ ರೈತರಾಗಿರುವ ರಮೇಶ್ ದಂಪತಿಗಳು ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ.
ತಮಗೆ ಸೂಕ್ತ ಪರಿಹಾರ ನೀಡಬೇಕೆಂದು, ಕುಸಿದಿರುವ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ನೀಡಬೇಕೆಂದು ಅವರು ಸ್ಥಳೀಯ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಮತ್ತು ಶಾಸಕರಲ್ಲಿ ಮನವಿ ಮಾಡಿದ್ಧಾರೆ.



