ಮೂಡಿಗೆರೆ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಮಾಜಿ ಉಪ ಮುಖ್ಯಮಂತ್ರಿ, ಬಿ.ಜೆ.ಪಿ. ಮುಖಂಡ ಡಾ. ಅಶ್ವಥ್ನಾರಾಯಣ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರು ನಮ್ಮ ಮನೆ ಮಳೆಯಿಂದ ಕುಸಿದಿದ್ದು, ಪರಿಹಾರ 1.2 ಲಕ್ಷ ರೂ ನೀಡಲಾಗಿದೆ. ಇದರಿಂದ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಮಗೆ ದಿಕ್ಕೇ ತೋಚದಂತಾಗಿದೆ ಎಂದು ಅಳಲು ತೋಡಿಕೊಂಡರು.
ನಿರಾಶ್ರಿತರ ಅಳಲು ಆಲಿಸಿದ ಅಶ್ವಥ್ ನಾರಾಯಣ್ ಅವರು, ನಮ್ಮ ಬಿಜೆಪಿ ಸರಕಾರ ಆಡಳಿತದಲ್ಲಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ ಪರಿಹಾರ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಯಿಂದ ಜನರ ಬದುಕನ್ನು ಕಿತ್ತುಕೊಂಡಿದೆ. ಮಳೆಯಿಂದ ಕುಸಿತಗೊಂಡಿದ್ದ ಮನೆಗಳಿಗೆ 1.2 ಲಕ್ಷ ರೂ ಪರಿಹಾರ ನೀಡಿದರೆ ಸಾಕಾಗುತ್ತದೆಯೇ ಎಂಬ ಸಾಮಾನ್ಯ ಜ್ಞಾನ ಕೂಡ ಇಲ್ಲದಂತಾಗಿದೆ. ಹಾಗಾಗಿ ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ ಪರಿಹಾರ ನೀಡಬೇಕು. ಅಥವಾ ಸರಕಾರವೇ ಸಂಪೂರ್ಣ ಮನೆ ಕಟ್ಟಿಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಇಲ್ಲವಾದರೆ ಬಿಜೆಪಿ ಪಕ್ಷದಿಂದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತರುವೆ ಗ್ರಾ.ಪಂ. ವ್ಯಾಪ್ತಿಯಲ್ಲಿ 4 ಎಕರೆ ಕಂದಾಯ ಭೂಮಿ ಇದೆ. ಅದಕ್ಕೆ ಅರಣ್ಯ ಇಲಾಖೆ ಗಿಡಗಳನ್ನು ನೆಟ್ಟಿದ್ದಾರೆ. ಮೊದಲೇ ನಿವೇಶನ ಸಮಸ್ಯೆ ಇದೆ. ಇದನ್ನು ಪರಿಹರಿಸಲು ಸುಲಭ ಮಾರ್ಗವನ್ನೇ ಮುಚ್ಚುವ ಮೂಲಕ ಅರಣ್ಯ ಇಲಾಖೆ ತೊಂದರೆ ಉಂಟು ಮಾಡುತ್ತಿದೆ ಎಂದು ದೂರವಾಣಿ ಮೂಲಕ ಡಿಸಿಎಫ್ಗೆ ಕರೆ ಮಾಡಿ ಕೂಡಲೇ ಮರ ತೆರವುಗೊಳಿಸಲು ಸೂಚಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ದೀಪಕ್ ದೊಡ್ಡಯ್ಯ, ಬಿ.ಜೆ.ಪಿ. ಮಂಡಲ ಅಧ್ಯಕ್ಷ ಟಿ.ಎಂ. ಗಜೇಂದ್ರ ಸೇರಿದಂತೆ ಬಿ.ಜೆ.ಪಿ. ಅನೇಕ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.




