ವಿದ್ಯಾರ್ಥಿ ದೆಸೆಯಲ್ಲೇ ರಾಷ್ಟ್ರದ ಬಗ್ಗೆ ಮತ್ತು ದೇಶಕ್ಕಾಗಿ ಬಲಿದಾನಗೈದ ಶ್ರೇಷ್ಠ ವ್ಯಕ್ತಿಗಳನ್ನು ಪ್ರತಿ ದಿನ ಸ್ಮರಿಸಿದರೆ ಅವರ ತ್ಯಾಗಕ್ಕೆ ನಾವು ದೊಡ್ಡ ಗೌರವ ಕೊಟ್ಟಂತಾಗುತ್ತದೆ ಎಂದು ಮೂಡಿಗೆರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಆನಂದ ಕಣಚೂರು ಹೇಳಿದರು.
ಅವರು ಮಂಗಳವಾರ ಮೂಡಿಗೆರೆ ಪಟ್ಟಣದ ಸಂಟ್ ಮಾರ್ಥಾಸ್ ಪ್ರೌಢ ಸಭಾಂಗಣದಲ್ಲಿ ಸಚೇತನ ಯುವಕ ಸಂಘ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಹಾಗೂ 78ನೇ ಸ್ವಾತಂತ್ರೋತ್ಸವದ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಗೆ ದೇಶಭಕ್ತಿ ಗೀತೆ ಭಾಷಣ ಸ್ವರ್ಧೆ ಚಿತ್ರಕಲಾ ಸ್ವರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಯುವ ಪೀಳಿಗೆ ಸದಾ ರಾಷ್ಟ್ರದ ಬಗ್ಗೆ ಯೋಚಿಸುವ ಮಾನಸಿಕತೆಯನ್ನು ಬೆಳಿಸಿಕೊಳ್ಳಬೇಕು ದೇಶದ ಗಡಿ ಪ್ರದೇಶದಲ್ಲಿ ತಮ್ಮ ಯೌವ್ವನದ ಬದುಕನ್ನು ರಾಷ್ಟ್ರಕೋಸ್ಕರ ಸಮರ್ಪಣೆ ಮಾಡುತ್ತಿರುವ ಸೈನಿಕರನ್ನು ಸದಾ ಗೌರವಿಸಬೇಕು ಕೇವಲ ಸಭೆ ಸಮಾರಂಭಗಳಲ್ಲಿ ಮಾತ್ರ ಸೈನಿಕರ ಬಗ್ಗೆ ದೇಶದ ಸ್ವಾತಂತ್ರ್ಯಕ್ಕೋಸ್ಕರ ಮಡಿದ ಹಿರಿಯರ ಬಗ್ಗೆ ಮಾತನಾಡದೆ ಸದಾ ಅವರನ್ನು ನೆನೆಯುವಂತೆ ಆಗಬೇಕು ಆ ನಿಟ್ಟಿನಲ್ಲಿ ಸಚೇತನ ಯುವಕ ಸಂಘ ಕಳೆದ 25 ವರ್ಷದಿಂದ ಪಟ್ಟಣದಲ್ಲಿ ಸಮಾಜ ಮುಖಿ ಕೆಲಸ ಮಾಡಿಕೊಂಡು ಬರುತಿದ್ದು ಇವರ ಕಾರ್ಯ ಶ್ಲಾಘನೀಯ ಎಂದರು .
ಈ ವೇಳೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಂಸೆ ಪತ್ರದೊಂದಿಗೆ ನೆನಪಿನ ಕಾಣಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಸಚೇತನ ಯುವಕ ಸಂಘದ ಅಧ್ಯಕ್ಷ ರವಿರಾಜ್ , ಲೋಹಿತ್ ಬೀದರಹಳ್ಳಿ, ಟಿ ಹರೀಶ್ , ವಿಶ್ವಕುಮಾರ್ , ಮನೋಜ್, ನಿಶ್ಚಲ್, ಮಂಜುನಾಥ್ ವಿನ್ಸೆಂಟ್ , ಮಹಮದ್ ಷರೀಫ್ ಮತ್ತಿತರರಿದ್ದರು.



