ಸಕಲೇಶಪುರದಲ್ಲಿ ಕಾಫಿ ಎಸ್ಟೇಟ್ ಮನೆಯಲ್ಲಿ ದರೋಡೆಕೋರರು ತಮ್ಮ ಕೈಚಳಕ ತೋರಿಸಿದ್ದಾರೆ. ಸುಮಾರು ಹತ್ತು ಲಕ್ಷ ರೂ. ಮೌಲ್ಯದ ಆಭರಣ ದೋಚಿದ್ದಾರೆ. ಸಕಲೇಶಪುರ ಸಮೀಪದ ದೋಣಿಗಲ್ ಎಸ್ಟೇಟ್ನಲ್ಲಿ ಈ ಘಟನೆ ನಡೆದಿದೆ.
ಸುಲೋಚನಾ ಪ್ರಕಾಶ ಎಂಬುವವರಿಗೆ ಸೇರಿದ ದೋಣಿಗಲ್ ಎಸ್ಟೇಟ್ ಮನೆಯಲ್ಲಿ ಕಳ್ಳತನವಾಗಿದೆ. ಇತ್ತೀಚೆಗಷ್ಟೇ ಸುಲೋಚನಾ ಅವರ ಪತಿ ಹಾಗೂ ಮಗ ಸಾವನ್ನಪ್ಪಿದ್ದರು. ಆಗಸ್ಟ್ 8 ರಂದು ಸುಲೋಚನ ಬೆಂಗಳೂರಿನಲ್ಲಿರುವ ಸೊಸೆ ಹಾಗೂ ಮೊಮ್ಮಕ್ಕಳನ್ನು ನೋಡಲು ತೆರಳಿದ್ದರು, ಆಗಸ್ಟ್ 12ರಂದು ವಾಪಾಸ್ಸು ಬಂದು ನೋಡಿದಾಗ ಮನೆ ಬೀಗ ಮುರಿದು ಮನೆ ದರೋಡೆ ನಡೆಸಿರುವುದು ಬೆಳಕಿಗೆ ಬಂದಿದೆ. ದರೋಡೆಕೋರರು ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ ಮನೆಯೊಳಗಿದ್ದ ಗಾದ್ರೇಜ್ ಬೀರುಗಳನ್ನು ಹಾರೆ ಪಿಕ್ಕಾಸಿಯಿಂದ ಮೀಟಿ ಸುಮಾರು 10 ಲಕ್ಷ ಬೆಲೆಬಾಳುವ ಆಭರಣ ಮತ್ತು ಬೆಳ್ಳಿಯ ಪರಿಕರಗಳನ್ನು ಹೊತ್ತೊಯ್ದಿದ್ದಾರೆ.
ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


