ಅಸ್ಸಾಂ ಮೂಲದ ಕಾರ್ಮಿರೊಂದಿಗೆ ಕಾಫಿ ತೋಟದ ಕೂಲಿ ವಿಚಾರಕ್ಕೆ ಪ್ರಾರಂಭವಾದ ಜಟಾಪಟಿ ವಿಕೋಪಕ್ಕೆ ತೆರಳಿ ಬಂದೂಕಿನಿಂದ ಹಾರಿದ ಗುಂಡಿನ ಚರೆ ತಗುಲಿ ಕಾರ್ಮಿಕರ ಮಗುವೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿದರಹಳ್ಳಿ ಸಮೀಪದ ಬಾಳೆಹಳ್ಳಿ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ.
ಈ ಸಂಬಂಧ ಗಾಯಗೊಂಡ ಮಗುವಿನ ಚಿಕ್ಕಪ್ಪ ಸುಲ್ತಾನ್ ಆಲಿ ಎಂಬುವವರು ಮೂಡಿಗೆರೆ ಠಾಣೆಗೆ ನೀಡಿರುವ ದೂರಿನ ಆದಾರದಲ್ಲಿ ಬಾಳೆಹಳ್ಳಿ ಗ್ರಾಮದ ಇಬ್ಬರು ಕಾಫಿ ಬೆಳೆಗಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಕಾರ್ಮಿಕರು ನೀಡಿರುವ ದೂರಿನಂತೆ ಕಳೆದ 9ದಿನಗಳ ಹಿಂದೆ ಬಾಳೆಹಳ್ಳಿಯ ಜಗದೀಶ್ ಗೌಡ ಎಂಬುವವರ ತೋಟಕ್ಕೆ ಕೆಲಸಕ್ಕೆಂದು ಬಂದಿದ್ದು, ದಿನಕ್ಕೆ 400 ರೂ. ಕೂಲಿ ನಿಗದಿಯಾಗಿತ್ತು. ಇಂದು ಶುಕ್ರವಾರ ಬೆಳಿಗ್ಗೆ ಮಾಲೀಕರ ಬಳಿ ಸಂಬಳಕ್ಕೆ ಹೋದಾಗ ಅವರು ತಲಾ 350 ರೂ ಈಗ ಕೊಡುತ್ತೇನೆ. ಉಳಿದ 50 ರೂಗಳನ್ನು ಕೊನೆಯಲ್ಲಿ ಲೆಕ್ಕಾಚಾರ ಮಾಡಿಕೊಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಕಾರ್ಮಿಕರು ಪೂರ್ತಿ 400 ರೂಪಾಯಿ ಈಗಲೇ ಬೇಕು ಎಂದು ಕೇಳಿದ್ದು ಮಾತಿನ ಚಕಮಕಿ ನಡೆದಿದೆ. ನಂತರ ನಾವು ನಿಮ್ಮಲ್ಲಿ ಕೆಲಸ ಮಾಡುವುದಿಲ್ಲ ಎಂದು ಅಲ್ಲಿಂದ ಹೊರಟು ಹೋಗಲು ಮುಂದಾದೆವು ಆಗ ಜಗದೀಶ್ ಅವರ ಸಹೋದರ ಪ್ರಭಾಕರ್ ಎಂಬುವವರು ನಮ್ಮನ್ನು ಬೆದರಿಸಲು ಬಂದೂಕಿನಿಂದ ಗುಂಡು ಹಾರಿಸಿದ್ದು ಗುಂಡಿನ ಚರೆಯೊಂದು ನನ್ನ ಅಣ್ಣನ ನಾಲ್ಕು ವರ್ಷದ ಮಗುವಿನ ತಲೆಗೆ ತಗುಲು ತೀವ್ರವಾಗಿ ಗಾಯಗೊಂಡಿದೆ ಎಂದು ದೂರು ನೀಡಿದ್ದಾರೆ.
ಕಾರ್ಮಿಕರು ನೀಡಿದ ದೂರಿನ ಆದಾರದ ಮೇಲೆ ಮೂಡಿಗೆರೆ ಪೊಲೀಸರು ಪ್ರಭಾಕರ್ ಗೌಡ ಮತ್ತು ಜಗದೀಶ್ ಗೌಡ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ 307 ಮತ್ತು ಅರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಸರ್ಕಲ್ ಇನ್ಸ್ ಪೆಕ್ಟರ್ ರಾಜಶೇಖರ್ ಮತ್ತು ಸಬ್ ಇನ್ಸ್ ಪೆಕ್ಟರ್ ಹರ್ಷವರ್ಧನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಗುವಿನ ತಲೆಗೆ ಬಂದೂಕಿನ ಚರೆಯೊಂದು ತಗುಲಿದ್ದು ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ ಎನ್ನಲಾಗಿದೆ.


