ಸೈಂಟ್ಪೀಟರ್ಚರ್ಚ್ನಿಂದ ಬಸ್ಸ್ಟಾಪ್ ನಿರ್ಮಾಣ, ಶಾಸಕಿ ನಯನಾ ಅವರಿಂದ ಉದ್ಘಾಟನೆ
ಮೂಡಿಗೆರೆ ತಾಲ್ಲೂಕಿನ ಕಸ್ಕೇಬೈಲ್ ಗ್ರಾಮದ ಸೈಂಟ್ ಪೀಟರ್ ಚರ್ಚಿನ ಆಡಳಿತ ಮಂಡಳಿ ವತಿಯಿಂದ ಗ್ರಾಮದಲ್ಲಿ ಹೊಸತಾಗಿ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿದ್ದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ತಂಗುದಾಣವನ್ನು ಉಧ್ಘಾಟಿಸಿ ಲೋಕಾರ್ಪಣೆ ಮಾಡಿದರು.
ಚರ್ಚ್ ವತಿಯಿಂದ ನೂತನವಾಗಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವನ್ನು ಉಧ್ಘಾಟಿಸಿ ಮಾತನಾಡಿದ ಶಾಸಕಿ ನಯನಾ ಮೋಟಮ್ಮ ಚರ್ಚ್ ಆಡಳಿತಮಂಡಳಿ ಉತ್ತಮ ಜನಾನುರಾಗಿ ಕೆಲಸ ಮಾಡಿದೆ. ಚರ್ಚ್ ಆಡಳಿತ ಮಂಡಳಿ ಬಸ್ ತಂಗುದಾಣ ನಿರ್ಮಿಸಿ ಸರ್ಕಾರಕ್ಕೆ ಹೊರೆಯಾಗುವುದನ್ನು ತಪ್ಪಿಸಿ ಜನರಿಗೂ ಒಳಿತು ಮಾಡಿದೆ ಎಂದು ಹೇಳಿದರು.

ಕಳೆದ 6 ತಿಂಗಳ ಹಿಂದೇ ಇದೇ ಹಾಲ್ನಲ್ಲಿ ಜಿಲ್ಲಾಡಳಿತದಿಂದ ಜನಸ್ಪಂದನ ಕಾರ್ಯಕ್ರಮ ನಡೆದಿತ್ತು. ಆಗ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಲಾಗಿದೆ. ಜನರ ಬೇಡಿಕೆಗಳನ್ನು ಆದಷ್ಟು ಮಟ್ಟಿಗೆ ಈಡೇರಿಸಲು ಶಕ್ತಿಮೀರಿ ಪ್ರಯತ್ನಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆಗೆ ಗೋಣೀಬೀಡು ಗ್ರಾ.ಪಂ.ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಜೆಜೆಎಂ ಯೋಜನೆಯಿಂದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಇನ್ನು ಕೆಲವು ಗ್ರಾಮಗಳಲ್ಲಿ ಸದ್ಯದಲ್ಲೇ ಜೆಜೆಎಂ ಕಾಮಗಾರಿ ನಡೆಯಲಿದೆ. ಗೋಣೀಬೀಡು ಭಾಗದಲ್ಲಿ ವಿದ್ಯುತ್ ಸಮಸ್ಯೆಯಿದೆ ಎಂದು ಜನರಿಂದ ದೂರು ಬರುತ್ತಿದೆ. ಜನ್ನಾಪುರದಲ್ಲಿ ವಿದ್ಯುತ್ ಪ್ರಸರಣಾ ಉಪ ಕೇಂದ್ರ ಸ್ಥಾಪನೆಗೆ ಜಾಗ ಗುರುತಿಸಲಾಗಿದ್ದು ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. ಉಪಕೇಂದ್ರ ಸ್ಥಾಪನೆಯಾದ ಬಳಿಕ ವಿದ್ಯುತ್ ಸಮಸ್ಯೆ ಮುಕ್ತಿಗೊಳ್ಳಲಿದೆ. ರಸ್ತೆಗಳ ಅಭಿವೃದ್ದಿಗೆ ಅನುದಾನದ ಕೊರತೆಯಿಲ್ಲ, ಎಲ್ಲಾ ರಸ್ತೆಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗೋಣೀಬಿಡು ಗ್ರಾ.ಪಂ.ಅಧ್ಯಕ್ಷ ಜಿ.ಎಸ್.ದಿನೇಶ್ ಮಾತನಾಡಿ ಗ್ರಾಪಂಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಬಹುತೇಕ ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗಿದೆ. ಗ್ರಾ.ಪಂ.ವ್ಯಾಪ್ತಿಯಲ್ಲಿ ಶೌಚಗೃಹ ನಿರ್ಮಾಣ ಬಹುತೇಕ ಮುಗಿದಿದೆ. ಹೆಚ್ಚಿನ ಶೌಚಗೃಹಕ್ಕೆ ಜನರಿಂದ ಬೇಡಿಕೆ ಬಂದಿಲ್ಲ. ಗ್ರಾಮಗಳ ಸ್ವಚ್ಛತೆಗೆ 2 ವಾಹನಗಳನ್ನು ಬಳಸಲಾಗುತ್ತಿದೆ. ಗ್ರಾ.ಪಂ.ನೊಂದಿಗೆ ಚರ್ಚ್ ಆಡಳಿತ, ಮತ್ತಿತರ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸುತ್ತಿರುವ ಕಾರಣದಿಂದಾಗಿ ಜನರ ಬೇಡಿಕೆಗಳು ಬೇಗನೆ ಈಡೇರುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೈಂಟ್ ಪೀಟರ್ ಚರ್ಚ್ ಧರ್ಮಗುರು ಫಾದರ್ ಬ್ರಾಂಕ್, ಕಾರ್ಯದರ್ಶಿ ದೀಪಕ್ಲೋಬೋ, ಖಜಾಂಚಿ ಫೆಲಿಕ್ಷ್ಸಾಲ್ದಾನಾ, ಪ.ಪಂ.ಉಪಾಧ್ಯಕ್ಷ ಹೊಸ್ಕೆರೆ ರಮೇಶ್, ಗ್ರಾ.ಪಂ.ಸದಸ್ಯರಾದ ರಾಧಾ ಮಿತ್ರೇಶ್, ಭಾರತಿ, ಮಾಜಿ ತಾ.ಪಂ.ಅಧ್ಯಕ್ಷ ಎ.ಜೆ.ಸುಬ್ರಾಯಗೌಡ, ಸಿರಿಲ್ ರೆಬೆಲ್ಲೋ ಸುಜಾತ, ರೇಣುಕಾ, ತಾಲೂಕು ಕೆಡಿಪಿ ಸದಸ್ಯ ಉಗ್ಗೇಹಳ್ಳಿ ಸುರೇಂದ್ರ ಮತ್ತಿತರರಿದ್ದರು.



