ಮೂಡಿಗೆರೆ ಪಟ್ಟಣ ಪಂಚಾಯಿತಿ ಆಸ್ತಿಯನ್ನು ಹಿರಿಯ ಸದಸ್ಯರಿಬ್ಬರು ಅಕ್ರಮವಾಗಿ ಖಾತೆ ಮಾಡಿಸಿಕೊಟ್ಟಿದ್ದಾರೆಂದು ಇತ್ತೀಚೆಗೆ ಪ.ಪಂ. ಸದಸ್ಯ ಮನೋಜ್ ಸೇರಿದಂತೆ ಬಿಜೆಪಿ ಮುಖಂಡರು ಮಾಧ್ಯಮಕ್ಕೆ ನೀಡಿರುವ ಮಾಹಿತಿ ಶುದ್ಧ ಸುಳ್ಳು ಎಂದು ಪ.ಪಂ. ಹಿರಿಯ ಸದಸ್ಯ, ಮಾಜಿ ಅಧ್ಯಕ್ಷ ಕೆ.ವೆಂಕಟೇಶ್ ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಸಬಾ ಹೋಬಳಿ ಸರ್ವೆ ನಂ 54/2ರಲ್ಲಿ 1.10 ಎಕರೆ ಜಾಗವನ್ನು ಮುಸ್ತಾಕ್ ಅಹಮ್ಮದ್ ಹಾಗೂ ಸರ್ವೆ ನಂ 135/1ರಲ್ಲಿ 1.12 ಎಕರೆ ಜಾಗವನ್ನು ಜಾಹಿದ್ ಹುಸೇನ್ ಅವರು ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಭೂ ಪರಿವರ್ತನೆ ಮಾಡಿಕೊಂಡು, ಅದನ್ನು ಅಭಿವೃದ್ಧಿಪಡಿಸಿ ಖಾತೆಗಾಗಿ ಪ.ಪಂ.ಗೆ ಅರ್ಜಿ ಸಲ್ಲಿಸಿದ್ದರು. ನಿಯಮದ ಪ್ರಕಾರವರು ಶೇ.4ರಷ್ಟು ಸರಕಾರಕ್ಕೆ ಕಟ್ಟಬೇಕಾದ ಹಣವನ್ನು ಸಂದಾಯ ಮಾಡಿದ್ದಾರೆ. ಖಾತೆ ಮಾಡುವಾಗ ಪಂಚಾಯಿತಿ ಸದಸ್ಯರ ಹಾಗೂ ಸಾರ್ವಜನಿಕರ ತಕರಾರು ಇದ್ದರೆ ಮಾತ್ರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಆದರೆ ಯಾವುದೇ ತಕರಾರು ಇಲ್ಲದಿದ್ದರೆ ಮುಖ್ಯಾಧಿಕಾರಿ ನೇರವಾಗಿ ಖಾತೆ ಮಾಡಿಕೊಡಬಹುದು. ಇಲ್ಲಿ ಯಾವ ಅಕ್ರಮವೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಲೇಯೌಟ್ ಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿಕೊಳ್ಳುವುದರಿಂದ ಪಟ್ಟಣ ಪಂಚಾಯಿತಿಗೆ ಆದಾಯ ಬರುತ್ತದೆ. ಪಟ್ಟಣ ಪಂಚಾಯತಿ ಹಿತದೃಷ್ಟಿಯಿಂದ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೆ ಸದಸ್ಯರು ಬೆಂಬಲ ನೀಡಬೇಕು ಎಂದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಛತ್ರಮೈದಾನದಲ್ಲಿ ಸುನಿತಾ ಎಂಬುವರಿಗೆ ಪಟ್ಟಣ ಪಂಚಾಯಿತಿ ನಿವೇಶವನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆಂದು ಕೂಡ ಆರೋಪ ಮಾಡಿದ್ದಾರೆ. ಈ ಬಗ್ಗೆ ಸತ್ಯಾಸತ್ಯತೆ ಅರಿಯಲು ಅಧ್ಯಕ್ಷರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಮೂಡಿಗೆರೆ ಬಸ್ ಸ್ಟ್ಯಾಂಡ್ ಸಮೀಪ ಸಂತೃಪ್ತಿ ಬಾರ್ ಪಕ್ಕದಲ್ಲಿರುವ ಪ.ಪಂ. ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಸತ್ಯಕ್ಕೆ ದೂವರಾದ ವಿಚಾರ. ಒಂದು ಅಡಿ ಕೂಡ ಪ.ಪಂ. ಆಸ್ತಿ ಬೇರೆಯವರ ಹೆಸರಿಗೆ ಮಾಡಲು ಬರುವುದಿಲ್ಲ ಎಂದರು.
ಪ.ಪಂ. ಸದಸ್ಯ, ಮಾಜಿ ಅಧ್ಯಕ್ಷ ಜಿ.ಬಿ. ಧರ್ಮಪಾಲ್ ಮಾತನಾಡಿ ಹೂವಿನ ಅಂಗಡಿಗಳ ಹಂಚಿಕೆಯಲ್ಲಿ ಅವ್ಯವಹಾರ ಆಗಿದೆ ಆರೋಪಿಸಿದ್ದಾರೆ. ಇದಕ್ಕೆ ಸೂಕ್ತ ದಾಖಲೆಗಳಿದ್ದರೆ ಅದನ್ನು ತೋರಿಸಲಿ, ಇಷ್ಟು ದಿನ ಸುಮ್ಮನ್ನಿದ್ದು ಇದೀಗ ಕಾಂಗ್ರೇಸ್ ಪಕ್ಷದ ತೆಕ್ಕೆಗೆ ಅಧಿಕಾರ ಬಂದಿರುವಾಗ ರಾಜಕೀಯ ಉದ್ದೇಶದಿಂದ ಆರೋಪ ಮಾಡಲಾಗುತ್ತಿದೆ ಎಂದು ದೂರಿದರು.
ಪ.ಪಂ. ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್ ಮಾತನಾಡಿ ಮೂಡಿಗೆರೆ ತತ್ಕೋಳ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ, ಅಮೃತಧಾರೆ ಯೋಜನೆಯಲ್ಲಿ ಕುಡಿಯುವ ನೀರಿನ ಯೋಜನೆಗೆ 19 ಕೋಟಿ ಅನುದಾನ ಶಾಸಕರ ಶ್ರಮದಿಂದ ಬಿಡುಗಡೆಯಾಗಿದೆ. ಹಾಗೂ ಮೂಡಿಗೆರೆ ಪ.ಪಂ ಯನ್ನು ಪುರಸಭೆ ಮಾಡಲು ಶಾಸಕಿ ನಯನಾ ಮೋಟಮ್ಮ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ.ಪಂ. ಉಪಾಧ್ಯಕ್ಷ ಎಚ್.ಪಿ.ರಮೇಶ್ ಉಪಸ್ಥಿತರಿದ್ದರು.



