ಚಿಕ್ಕಮಗಳೂರಿನ ಬಸವನಹಳ್ಳಿ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಸಾಹಿತ್ಯ ವಿಮರ್ಶಕ ಡಾ.ಎಚ್.ಎಸ್. ಸತ್ಯನಾರಾಯಣ ಅವರ ‘ಕಣ್ಣೋಟ’ ವಿಮರ್ಶಾ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ.
2021ನೇ ಸಾಲಿನ ವಿಮರ್ಶಾ ಪ್ರಕಾರದ ಉತ್ತಮ ಕೃತಿಯೆಂದು ಸಾಹಿತ್ಯ ಅಕಾಡೆಮಿಯು ಈ ಬಹುಮಾನವನ್ನು ನೀಡಿದೆ.
ಡಾ.ಎಚ್.ಎಸ್. ಸತ್ಯನಾರಾಯಣ ಇವರು ಕನ್ನಡದ ವಿಮರ್ಶಕ ಮತ್ತು ಸಂಸ್ಕೃತಿ ಚಿಂತಕರಾಗಿದ್ದಾರೆ. ಇವರು ಕಳೆದ ಇಪ್ಪತ್ತೈದು ವರ್ಷಗಳಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ವಿದ್ಯಾರ್ಥಿಗಳ ನೆಚ್ಚಿನ ಮೇಷ್ಟ್ರು ಹಾಗೂ ಸಂಸ್ಕೃತಿ ಕುರಿತ ಯಾವುದೇ ವಿಚಾರದ ಮೇಲೆ ಅರ್ಥಪೂರ್ಣವಾಗಿ ಮಾತನಾಡಬಲ್ಲ ಕನ್ನಡದ ಸಾಹಿತಿ ಇವರು.
ಹೊಸ ತಲೆಮಾರಿನ ವಿಮರ್ಶಕರೂ ಆದ ಎಚ್.ಎಸ್. ಸತ್ಯನಾರಾಯಣ ಅವರು ಮೂಲತಃ ಮಲೆನಾಡಿನವರು. ಕುವೆಂಪು ಅವರ ಕುಪ್ಪಳಿಗೆ ಸಮೀಪವೇ ಇರುವ, ಚಿಕ್ಕಮಗಳೂರಿನ ಹೊಕ್ಕಳಿಕೆಯಲ್ಲಿ ಜನಿಸಿದ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿತರು.
ನಿತ್ಯ ಕನ್ನಡದ ಉಪಾಸಕರಾಗಿ, ಸಂಸ್ಕೃತಿ ಚಿಂತನೆಯೊಂದಿಗೆ ನಾಡಿನಾದ್ಯಂತ ಹಲವು ಉಪನ್ಯಾಸಗಳನ್ನು ನೀಡುತ್ತಾ, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕರಾಗಿ ಸದ್ಯ ಚಿಕ್ಕಮಗಳೂರಿನಲ್ಲಿ ವಾಸಿಸುತ್ತಿದ್ದಾರೆ. 'ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಥನ ಸಾಹಿತ್ಯದ ಸಾಂಸ್ಕೃತಿಕ ನೆಲೆಗಳು' ಎಂಬ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರೆತಿದೆ.
ಹೆಚ್.ಎಸ್. ಸತ್ಯನಾರಾಯಣ ಅವರ ಪ್ರಕಟಿತ ಕೃತಿಗಳು
೧. ಅಪೂರ್ವ ಒಡನಾಟ (ಕವಿಸಮಯದ ಬರಹಗಳು)
೨. ಕುವೆಂಪು: ಅಲಕ್ಷಿತರೆದೆಯ ದೀಪ (ವಿಮರ್ಶೆ)
೩. ಅಕ್ಷರ ಲೋಕದ ಆನೆ – ತೇಜಸ್ವಿ (ವಿಮರ್ಶೆ)
೪. ನುಡಿಚಿತ್ರ (ಅಂಕಣ ಬರಹಗಳು)
೫. ಕಣ್ಣೋಟ (ವಿಮರ್ಶೆ)
೬. ಗಿರೀಶ್ ಕಾರ್ನಾಡ್: ಬದುಕು – ಬರಹ (ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ)
೭. ನಗೆಮೊಗದ ಅಜ್ಜ-ಮಾಸ್ತಿ (ಜೀವನ ಚರಿತ್ರೆ)
೮. ಪನ್ನೇರಳೆ (ಲಲಿತ ಪ್ರಬಂಧಗಳು)
೯. ಅಧ್ಯಾಪಕನಾಗಿ ಕಾಲುಶತಮಾನ (ನೆನಪುಗಳ ಸಂಗ್ರಹ)
೧೦. ಬಿದಿರ ತಡಿಕೆ (ಲಲಿತ ಪ್ರಬಂಧ)
೧೧. ಗಿರೀಶ ಕಾರ್ನಾಡ (ಮೊನಾಗ್ರಾಫ್)
೧೨. ಮರ ಬರೆದ ರಂಗೋಲಿ (ಹಾಯ್ಕುಗಳು)
೧೩. ಮಾಂದಳಿರ ತೊಟ್ಟಿಲು (ಅನುದಿನ ಕಾವ್ಯ ವಿಮರ್ಶೆ)
೧೪. ತೇಜಸ್ವಿ ಕೆಲವು ಪ್ರಸಂಗಗಳು (ಚಿಟ್ಟೆ ಕತೆಗಳು)
೧೫. ಕವಿತೆಯ ಕನವರಿಕೆ (ಕವಿತೆಗಳು)
೧೬. ಸಂಗಾತಿ(ವ್ಯಕ್ತಿ ಚಿತ್ರಗಳು)
ಸಂಪಾದಿತ ಕೃತಿಗಳು
೧. ಕನ್ನಡ ಸಾಹಿತ್ಯ ಸಂಗಾತಿ (ಇತರರೊಂದಿಗೆ, ಕರ್ನಾಟಕ ಸಾಹಿತ್ಯ ಅಕಾಡೆಮಿ)
೨. ಸಾಹಿತ್ಯ ವಿಮರ್ಶೆ- ೨೦೧೬ (ಕರ್ನಾಟಕ ಸಾಹಿತ್ಯ ಅಕಾಡೆಮಿ)
೩. ದುಂಡಿಮಲ್ಲಿಗೆ (ಎಚ್. ಡುಂಡಿರಾಜ್ ಸಾಹಿತ್ಯ ಕುರಿತ ಪ್ರತಿಕ್ರಿಯೆ)
೪. ಗೆಳೆಯ ಲಕ್ಷ್ಮಣ (ಬಿ.ಆರ್. ಲಕ್ಷ್ಮಣರಾವ್ ಸಾಹಿತ್ಯ ಕುರಿತ ಪ್ರತಿಕ್ರಿಯೆ)
೫. ನಂಗ್ಲಿ-ಜಂಗ್ಲಿ (ವಿ. ಚಂದ್ರಶೇಖರ ನಂಗ್ಲಿಯವರ ಸಾಹಿತ್ಯ ಕುರಿತು)
೬. ಬತ್ತದ ಕಾವ್ಯದೊರತೆ (ಟಿ. ಯಲ್ಲಪ್ಪ ಅವರ ಕಾವ್ಯ ಕುರಿತು)
೭. ಬಾ.ರಾ.ಗೋಪಾಲ್ ಆಯ್ದ ಬರಹಗಳು
ಹೆಚ್.ಎಸ್. ಸತ್ಯನಾರಾಯಣ ಅವರ ಪ್ರಮುಖ ಸೇವೆಗಳು
೧. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಭಾಷಾ ವಿಷಯದ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ.
೨. ಇಲಾಖೆಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು.
೩. ಪ್ರಥಮ ಪಿ.ಯು.ಸಿ. ಐಚ್ಛಿಕ ಪಠ್ಯ ರಚನಾ ಸಮಿತಿಯ ಸದಸ್ಯರು.
೪. ದ್ವಿತೀಯ ಪಿ.ಯು.ಸಿ. ಕನ್ನಡ ಭಾಷಾ ಪಠ್ಯ ರಚನಾ ಸಮಿತಿಯ ಸಂಚಾಲಕರು.
೫. ಒಂದರಿಂದ ಹತ್ತನೇ ತರಗತಿವರೆಗಿನ ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ ಕನ್ನಡ ಪಠ್ಯ ಪುಸ್ತಕಗಳ ರಚನಾ ಸಮಿತಿಯಲ್ಲಿ ಉನ್ನತ ಮಟ್ಟದ ಸಲಹಾ ಸಮಿತಿ ಸದಸ್ಯರು
೬. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷಾ ಸಲಹಾ ಸಮಿತಿ ಸದಸ್ಯರು.
೭. ಗಮಕ ಪರಿಷತ್ತಿನ ಪರೀಕ್ಷಾ ವಿಭಾಗದ ಸದಸ್ಯರು.
೮. ಹಲವು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪಠ್ಯರಚನಾ ಸಮಿತಿಯ ಗೌರವ ಸಲಹೆಗಾರರು.
೯. ಇವರು ರಚಿಸಿದ ಸಂಗೊಳ್ಳಿರಾಯಣ್ಣ ವ್ಯಕ್ತಿ ಚಿತ್ರವು ಐದನೇ ತರಗತಿಗೆ ಕನ್ನಡ ಪಠ್ಯವಾಗಿದೆ.
೧೦. ೫ನೇ ತರಗತಿಯ ಪ್ರಥಮಭಾಷೆ ಕನ್ನಡ ಪಠ್ಯದಲ್ಲಿ ಸಂಗೊಳ್ಳಿ ರಾಯಣ್ಣ ಲೇಖನವು ಸೇರ್ಪಡೆಯಾಗಿದೆ.
೧೧. ೬ನೇತರಗತಿ ಪ್ರಥಮಭಾಷೆ ಕನ್ನಡದಲ್ಲಿ ‘ಡಾ. ರಾಜಕುಮಾರ್’ ಲೇಖನ ಪಠ್ಯವಾಗಿದೆ.
೧೨. ಕರ್ನಾಟಕ ಸರ್ಕಾರವು ಒಂದರಿಂದ ಹತ್ತನೇ ತರಗತಿವರೆಗಿನ ದ್ವಿತೀಯ ಭಾಷೆ ಕನ್ನಡ ಪಠ್ಯ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದೆ.
೧೩. ‘ಕನ್ನಡಕ್ಕೆ ಅನ್ನಬ್ರಹ್ಮನ ಸ್ಥಾನ’ ಲೇಖನವು ಬೆಂಗಳೂರು ವಿ ವಿಯ ಬಿಬಿಎ ತೃತೀಯ ಸೆಮಿಸ್ಟರ್ ಪಠ್ಯದಲ್ಲಿ ಸೇರಿದೆ.
೧೫. ‘ಯುವ ಜನಾಂಗ ಮತ್ತು ಧಾರ್ಮಿಕ ಸಾಮರಸ್ಯ’ ಎಂಬ ಲೇಖನವು ಬೆಂಗಳೂರು ವಿ.ವಿ.ಯ ಪದವಿ ತರಗತಿಗಳಿಗೆ, ಕುವೆಂಪು ವಿ ವಿಯ ಬಿಎಸ್ಸಿ. ತೃತೀಯ ಸೆಮಿಸ್ಟರ್ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಇದೇ ಪಠ್ಯವನ್ನು ಕ್ರಿಸ್ತು ಜಯಂತಿ ಕಾಲೇಜು, ಬೆಂಗಳೂರು ಇವರು 2020-22 ನೇ ಸಾಲಿನ ಬಿ.ಕಾಂ ಪಠ್ಯ, ನಂತರ 2021-23ನೇ ಸಾಲಿನ ಬಿಎಸ್.ಸಿ ಪಠ್ಯವನ್ನಾಗಿ ಸೇರ್ಪಡೆಗೊಳಿಸಿದ್ದಾರೆ.
ನಾಡಿನಾದ್ಯಂತ ಮೂರು ಸಾವಿರಕ್ಕೂ ಅಧಿಕ ಉಪನ್ಯಾಸ ನೀಡುವ ಮೂಲಕ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಪಸರಿಸುವ ‘ಸಾಹಿತ್ಯ ಪರಿಚಾರಿಕೆ’ಯಲ್ಲಿ ತೊಡಗಿದ್ದಾರೆ. ೨. ಹಲವು ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ೩. ದೆಹಲಿ ಕನ್ನಡ ಸಂಘದ, ಹೈದರಾಬಾದ್ ಕನ್ನಡ ಸಂಘ ಮುಂತಾದ ಹಲವಾರು ಹೊರನಾಡಿನ ಕನ್ನಡಪರ ಸಂಘಟನೆಗಳ ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ೪. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು, ಸುಚಿತ್ರಾ ಫಿಲಂ ಸೊಸೈಟಿ ಮುಂತಾದ ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ೫. ಹಲವು ರಾಷ್ಟ್ರಮಟ್ಟದ, ರಾಜ್ಯಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ೬. ಇಂದಿಗೂ ಸಾಹಿತ್ಯ ವಲಯದ ಹಿರಿಯರೊಂದಿಗೆ ಸಮಾನಾಂತರ ಸಂಬಂಧ ಸ್ಥಾಪಿಸಿಕೊಂಡು ಓದು ಬರಹ, ವಿಮರ್ಶೆಯ ಚಟುವಟಿಕೆಗಳಲ್ಲಿನ ಕ್ರಿಯಾಶೀಲರಾಗಿದ್ದಾರೆ.
ಇವರ ವಿಮರ್ಷಾ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಅವರ ಸಾಹಿತ್ಯ ಕ್ಷೇತ್ರದ ಸೇವೆಗೆ ಸಂದ ಗೌರವವಾಗಿದೆ.



