ಕನ್ನಡ ಭಾಷೆಯು ಹೃದಯ ಶ್ರೀಮಂತಿಕೆಯ ಭಾಷೆಯಾಗಿದೆ’ ಎಂದು ಬೆಟ್ಟಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಕೆ.ದಿನೇಶ್ ಹೇಳಿದರು.
ಅವರು ಮೂಡಿಗೆರೆ ತಾಲ್ಲೂಕಿನ ಬಣಕಲ್ ನಜರೆತ್ ಶಾಲೆಯಲ್ಲಿ ಬಣಕಲ್ ಕಸಾಪ ಘಟಕ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮನಸ್ಸಿನಲ್ಲಿ ಇತರ ಭಾಷೆಯನ್ನು ಗೌರವಿಸುವ ಹಾಗೂ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವ ರೂಢಿ ಬೆಳೆಸಿಕೊಂಡಾಗ ಮಾತ್ರ ಕನ್ನಡ ಭಾಷೆ ಬೆಳೆಯುತ್ತದೆ’ಎಂದರು.
ಕಸಾಪ ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಮಾತನಾಡಿ’ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಕನ್ನಡಕ್ಕೆ 2500 ವರ್ಷದ ಇತಿಹಾಸವಿದ್ದು ಕನ್ನಡ ಪರಂಪರೆ ಮುಂದಿನ ಪೀಳಿಗೆಗೂ ಉಳಿಯಬೇಕು’ಎಂದರು.
ಕಸಾಪ ಜಿಲ್ಲಾ ಪ್ರಧಾನ ಸಂಚಾಲಕ ಮಗ್ಗಲಮಕ್ಕಿ ಗಣೇಶ್ ಮಾತನಾಡಿ’ಕನ್ನಡ ಭಾಷೆ ಬೆಳೆಸಲು ಉತ್ತಮ ಚಟುವಟಿಕೆಗಳನ್ನು ನಡೆಸುವ ಅವಶ್ಯಕತೆಯಿದೆ.ಕನ್ನಡ ಸಾಹಿತ್ಯವನ್ನು ಪ್ರತಿಯೊಬ್ಬರೂ ಓದಿ ಅರಿತುಕೊಳ್ಳಬೇಕು’ಎಂದರು.
ಬಣಕಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ’ ಕನ್ನಡ ಭಾಷೆ ಅಭಿವೃದ್ದಿಯಾಗಬೇಕಾದರೆ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ ಕನ್ನಡದಲ್ಲಿಯೇ ಶಿಕ್ಷಣ ದೊರೆಯಬೇಕು’ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡೆಯನ್ನು ಚಿನ್ನದ ಪದಕ ಪಡೆದ ಕುಮಾರಿ ಶರಣ್ಯ,ಅಂಕಿತ, ಎಸ್.ಜಿ.ಧೃತಿ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಘಟಕದ ಅಧ್ಯಕ್ಷ ಬಿ.ಕೆ.ಲೋಕೇಶ್ ವಹಿಸಿದ್ದರು. ಸಮಾರಂಭದಲ್ಲಿ ಕನ್ನಡ ಪರ ಹೋರಾಟಗಾರ ಹೊರಟ್ಟಿ ರಘು, ನಜರೆತ್ ಶಾಲೆಯ ಆಡಳಿತ ಮಂಡಳಿಯ ಲವಕುಮಾರ್, ಮುಖಂಡರಾದ ಬಿ.ಎಸ್.ವಿಕ್ರಂ, ಮಂಜುನಾಥ ರಾಥೋಡ್, ಮುಖ್ಯ ಶಿಕ್ಷಕ ಶಿವರಾಮೇಗೌಡ, ಶಿಕ್ಷಕ ಸುರೇಶ್, ಬಿ.ಎ.ಯತೀಶ್, ಶರತ್ ಫಲ್ಗುಣಿ, ಡಿ.ಕೆ.ಮಂಜುನಾಥ್, ಹೆಬ್ರಿಗೆ ಪೂರ್ಣೇಶ್, ಅರವಿಂದ ಕೋಳೂರು, ರಾಮಚಂದ್ರ, ಸುಪ್ರೀತ್ ಬೆಟ್ಟಗೆರೆ, ಶಿಕ್ಷಕ ಭಕ್ತೇಶ್ ಇದ್ದರು.



