ಇನ್ನೆರಡು ದಿನಗಳ ಗಡುವಿನೊಳಗೆ ಕಾಡಾನೆ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸದಿದ್ದರೆ ಚಿಕ್ಕಮಗಳೂರು ಅರಣ್ಯಾಧಿಕಾರಿಗಳ ಕಚೇರಿ ಎದುರು ಸರಣಿ ಅಹೋರಾತ್ರಿ ಧರಣಿ ನಡೆಸಲಾಗುವುದೆಂದು ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಕಾರ್ಯದರ್ಶಿ ಡಿ .ಮಹೇಶ್ ಎಚ್ಚರಿಸಿದರು.
ನಗರದಲ್ಲಿಂದು ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಡಾನೆಗಳು ನಾಡಿಗೆ ಬರದಂತೆ ಶಾಶ್ವತ ಪರಿಹಾರ ರೂಪಿಸಿ. ಕಾಡಾನೆಗಳಿಂದಾದ ಬೆಳೆಹಾನಿ ವೈಜ್ಞಾನಿಕ ಪರಿಹಾರ ಕೊಡಿಸಿ ಜೀವಹಾನಿ ಸಂಭವಿಸಿದಾಗ ಕೊಡುವ ಪರಿಹಾರ ಮೊತ್ತ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಕಳೆದ 25 ದಿನಗಳಿಂದ ಮಾರಿಕಟ್ಟೆ ಆಲದಗುಡ್ಡೆ, ಕೆಸವಿನಮನೆ, ಕದ್ರಿಮಿದ್ರಿ, ಕೆ.ಆರ್ಪೇಟೆ ಸುತ್ತ ಬೆಳೆ ಹಾಳುಮಾಡಿ ಭಯದ ವಾತಾವರಣ ಸೃಷ್ಟಿಸಿದ್ದ ಕಾಡಾನೆಗಳ ಹಾವಳಿಗೆ ತಾತ್ಕಾಲಿಕ ತೆರೆ ಬಿದ್ದಂತೆ ಕಾಣುತ್ತಿದೆ. ಆದರೆ ಉಳಿದ ನಾಲ್ಕು ಆನೆಗಳನ್ನು ತುರ್ತಾಗಿ ಅವರ ಸ್ವಸ್ಥಾನಕ್ಕೆ ಸೇರಿಸುವ ಪ್ರಯತ್ನವನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕು ಎಂದರು.
3 ಜನ ರೈತರು ಕಾಡಾನೆದಾಳಿಯಲ್ಲಿ ಅಸುನೀಗಿರುವುದನ್ನು ಮರೆಯುವ ಮುನ್ನವೆ ನರಸಿಂಹರಾಜಪುರ ತಾಲ್ಲೂಕಿನ ಸೀತೂರು ಗ್ರಾಮದ ರೈತ ಉಮೇಶ್ ಎಂಬುವವರನ್ನು ಕಾಡಾನೆ ಬಲಿಪಡೆದಿರುವುದು ಅತ್ಯಂತ ನೋವಿನ ಸಂಗತಿ. ಕೊಪ್ಪ ಸುತ್ತಮುತ್ತ ಕಾಡಾನೆ ಓಡಾಡುತ್ತಿರುವುದು ಗೊತ್ತಿದ್ದರೂ ಅರಣ್ಯ ಇಲಾಖೆ ನಿಗಾ ವಹಿಸದಿರುವುದು ಖಂಡನೀಯ ಎಂದರು.
ಸಂಘಟನೆಯ ತಾಲ್ಲೋಕು ಅಧ್ಯಕ್ಷ ವೈ.ಸಿ ಸುನೀಲ್ ಮಾತನಾಡಿ ಜಿಲ್ಲೆಯಲ್ಲಿ ಕಾಡಾನೆಗಳಿಂದ ಇಷ್ಟೆಲ್ಲಾ ಅವಾಂತರಗಳು ಸೃಷ್ಟಿಯಾಗಿದ್ದರೂ ಜಿಲ್ಲೆ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸದಿರುವುದು ಜಿಲ್ಲೆಯ ಬಗ್ಗೆ ಸಚಿವರಿಗಿರುವ ನಿರ್ಲಕ್ಷ ಧೋರಣೆಯನ್ನು ತೋರಿಸುತ್ತದೆ. ಚಿಕ್ಕಮಗಳುರು ಮತ್ತು ಮೂಡಿಗೆರೆ ಶಾಸಕರುಗಳು ತಮಗೂ ಈ ಸಮಸ್ಯೆಗೂ ಸಂಭಂಧವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಅಸಹನೆ ವ್ಯಕ್ತಪಡಿಸಿದರು.
ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ವಾಹನ ಮತ್ತು ಪರಿಣಿತ ಕಾರ್ಯಪಡೆಯನ್ನು ಕಾಡಾಂಚಿನ ಗ್ರಾಮಗಳಿಗೆ ಅರಣ್ಯ ಇಲಾಖೆ ನಿಯೋಜಿಸಬೇಕು. ಅರಣ್ಯ ಇಲಾಕೆ ವಿಶೇಷ ಕಾರ್ಯಪಡೆ ರಚಿಸಿ ಗಸ್ತು ತಿರುಗಲು ನೇಮಿಸಬೇಕೆಂದರು. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಎಲ್ಲಾಶಾಸಕರು ಒಗ್ಗಟ್ಟಾಗಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಧ್ವನಿ ಎತ್ತಬೇಕೆಂದರು.
ಸರ್ಕಾರಕ್ಕೆ ತಾಕಿತು ಮಾಡಬೇಕಾಗಿದೆ. ಈಗಿರುವ ಪರಿಹಾರದ ಮೊತ್ತ ರೈತರ ನಷ್ಟ ತುಂಬಲು ಸಾಧ್ಯವಿಲ್ಲವಾದ್ದರಿಂದ ರೈತರಿಗೆ ಆಗುವ ನಷ್ಟಕ್ಕೆ ಸರಿದೂಗಿಸುವಂತೆ ವೈಜ್ಞಾನಿಕ ಪರಿಹಾರ ಕೊಡಿಸುವತ್ತ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಜೀವಹಾನಿ ಆದ ಸಂದರ್ಭದಲ್ಲಿ ಕೊಡುವ 15 ಲಕ್ಷಕ್ಕೆ ಬದಲಾಗಿ ಕನಿಷ್ಟ 30 ಲಕ್ಷ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಲು ಒತ್ತಾಯಿಸಬೇಕೆಂದರು.
ಈ ಗೋಷ್ಟಿಯಲ್ಲಿ ರಾಜ್ಯ ಸಮಿತಿ ಸದಸ್ಯ ಕೆ.ಕೆ ಕೃಷ್ಣೇಗೌಡ, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ಮಹಿಳಾ ಘಟಕದ ಅಧ್ಯಕ್ಷೆ ನಜ್ಮಾಅಲಿ,ತಾ.ಪ್ರ ಕಾರ್ಯದರ್ಶಿಹೆಚ್.ಡಿ ಉಮೇಶ್.ಚಂದ್ರೇಗೌಡ, ಮುಖಂಡರಾದ ಮರ್ಲೆ ಶಂಕರ್,ಪುಟ್ಟೇಗೌಡ,ಲೋಕೇಶ್,ಇದ್ದರು.


