ತೀವ್ರ ಕುತೂಹಲ ಹಾಗೂ ಜಿದ್ದ ಜಿದ್ದಿಗೆ ಕಾರಣವಾಗಿದ್ದ ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ದೇವೇಂದ್ರ ಮರು ಆಯ್ಕೆ ಆಗಿದ್ದಾರೆ.
ಬುಧವಾರ ನಡೆದ ಚುನಾವಣೆಯಲ್ಲಿ ದೇವೇಂದ್ರ ತಮ್ಮ ಪ್ರತಿಸ್ಪರ್ಧಿ ಹೇಮಂತ್ ವಿರುದ್ಧ 20 ಮತಗಳ ಅಂತರದಿಂದ ಜಯ ಸಾಧಿಸಿದರು.
ದೇವೇಂದ್ರ 46 ಮತಗಳನ್ನು ಪಡೆದರೆ ಹೇಮಂತ್ ಕೇವಲ 26 ಮತ ಪಡೆಯಲು ಸಾಧ್ಯವಾಯಿತು.
ದೇವೇಂದ್ರ ಬಣದ ಪೂರ್ಣೇಶ್ ಖಜಾಂಚಿಯಾಗಿ ಆಯ್ಕೆಗೊಂಡಿದ್ದರೆ, ರಾಜ್ಯ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಚೇತನ್ ಸೋತಿದ್ದಾರೆ. ಹೇಮಂತ್ ಬಣದ ಮಂಜುನಾಥ್ ರಾಜ್ಯ ಪರಿಷತ್ತಿಗೆ ಆಯ್ಕೆಗೊಂಡಿದ್ದಾರೆ.
ಅಧ್ಯಕ್ಷ ಗಾದಿಗೆ ತೀವ್ರ ಸ್ಪರ್ಧೆ ನಡೆದಿದ್ದು, ರಾಜಕೀಯ ಹಸ್ತಕ್ಷೇಪ, ರೆಸಾರ್ಟ್ ರಾಜಕಾರಣ, ಆಮಿಷ ಆರೋಪ – ಪ್ರತ್ಯಾರೋಪಗಳ ಮೂಲಕ ಚುನಾವಣೆ ಕಣ ರಂಗೇರಿತ್ತು. ವಿಧಾನ ಪರಿಷತ್ ಎಸ್ .ಎಲ್. ಭೋಜೇಗೌಡ ರಾಜಕೀಯ ಹಸ್ತಕ್ಷೇಪ ಮಾಡಿ ನೌಕರರಿಗೆ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿ ಇವರ ವಿರುದ್ಧ ದೇವೇಂದ್ರ ದೂರನ್ನು ನೀಡಿದ್ದರು.
ವಿಜೇತ ದೇವೇಂದ್ರ ಮತ್ತವರ ತಂಡ ಸರ್ಕಾರಿ ನೌಕರರ ಭವನದಲ್ಲಿ ವಿಜಯೋತ್ಸವ ಆಚರಿಸಿತು.



