ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೊಂದು ಜೀವ ಕಾಡಾನೆ ದಾಳಿಗೆ ಬಲಿಯಾಗಿದೆ. ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನಲ್ಲಿ ಕೃಷಿಕರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ತಾಲ್ಲೂಕಿನಲ್ಲಿ ಕಳೆದ 20 ದಿನಗಳಲ್ಲಿ ಎರಡನೇ ಜೀವ ಕಾಡಾನೆಗೆ ಬಲಿಯಾಗಿದೆ.
ತೋಟಕ್ಕೆ ಹೋಗಿದ್ದ ತಂದೆ-ಮಗನ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು, ಮಗ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ, ತಂದೆ ಆನೆ ದಾಳಿಗೆ ಬಲಿಯಾಗಿದ್ದಾರೆ.
ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದ ಬಳಿ ಘಟನೆ ನಡೆದಿದೆ. ಗ್ರಾಮದ ಎಲಿಯಾಸ್ (75) ಮೃತ ದುರ್ದೈವಿ, ಮಗ ವರ್ಗೀಸ್ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಎಲಿಯಾಸ್ ಅವರನ್ನು ಸಾಯಿಸಿದ ಬಳಿಕ ಮೃತದೇಹಕ್ಕೆ ಒದೆಯುತ್ತಾ, ಘೀಳಿಡುತ್ತಾ ಸ್ಥಳದಲ್ಲೇ ಸುಮಾರು ಹೊತ್ತಿ ನಿಂತಿದ್ದ ಒಂಟಿಸಲಗ.
ಕೇರಳ ಮೂಲದ ಎಲಿಯಾಸ್ ತಮ್ಮ ಕುಟುಂಬದೊಂದಿಗೆ ಅನೇಕ ವರ್ಷಗಳಿಂದ ಮಡಬೂರಿನಲ್ಲಿ ಕೃಷಿ ಜಮೀನು ಖರೀದಿಸಿ ತೋಟಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.

ನವೆಂಬರ್ 30ರಂದು ತಾಲ್ಲೂಕಿನ ಸೀತೂರಲ್ಲಿ ಉಮೇಶ್ ಎಂಬುವರನ್ನ ಸಾಯಿಸಿದ್ದ ನೆನಪು ಮಾಸುವ ಮುನ್ನವೇ ಮತ್ತೊಂದು ಜೀವ ಕಾಡಾನೆಗೆ ಬಲಿಯಾಗಿದೆ.
ಮಲೆನಾಡಿನಲ್ಲಿ ಕಾಡಾನೆಗೆ ಬಲಿಯಾಗುವ ಸರಣಿ ಪ್ರಕರಣಗಳು ಮುಂದುವರಿದಿದ್ದು, ಜನರು ಜೀವಭಯದಲ್ಲಿ ಬದುಕುವಂತಾಗಿದೆ. ಅರಣ್ಯ ಇಲಾಖೆ ವಿರುದ್ಧ ಮಲೆನಾಡಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ.



