ಶಾಸ್ತ್ರೋಕ್ತವಾಗಿ ಆಗುವ ಮದುವೆಗಳಿಂದ ದೂರ ಸರಿದಿದ್ದ ಕುವೆಂಪು ಅವರೇ ಮಂತ್ರಮಾಂಗಲ್ಯವನ್ನು ರಚನೆ ಮಾಡಿದ್ದರು. ಅದರ ಮೊದಲ ಪ್ರಯೋಗ ಮಾಡಿದ್ದು ತಮ್ಮ ಮಗ ತೇಜಸ್ವಿ ಅವರ ಮೇಲೆ, ಕುವೆಂಪು ತಮ್ಮ ಬದುಕಿನುದ್ದಕ್ಕೂ ಸಮಾಜದಲ್ಲಿರುವ ಮೂಡನಂಬಿಕೆ, ಕಂದಾಚಾರಗಳನ್ನು ತೊಡೆದುಹಾಕಲು ಪ್ರಯತ್ನಿಸಿದರು ಎಂದು ಅಂಕಣಕಾರ ಬಿ.ಚಂದ್ರೇಗೌಡ ತಿಳಿಸಿದರು.
ಚಿಕ್ಕಮಗಳೂರು ನಗರದ ಬುದ್ಧವಿಹಾರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆಯಿಂದ ಭಾನುವಾರ ಏರ್ಪಡಿಸಿದ್ದ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಧಾನ ಉಪನ್ಯಾಸ ನೀಡಿ ಸಮಾಜದಲ್ಲಿರುವ ಮೂಢನಂಬಿಕೆ, ಕಂದಾಚಾರಗಳನ್ನು ಕಿತ್ತೊಗೆಯಬೇಕು ಎಂದು ರಾಷ್ಟ್ರಕವಿ ಕುವೆಂಪು ಅವರು ಅಂದೇ ಕರೆ ನೀಡಿದ್ದರು ಎಂದರು.
ತನ್ನ 22 ನೇ ವಯಸ್ಸಿನಲ್ಲಿ ಇಂಗ್ಲೀಷ್ನಲ್ಲಿ ಬರೆದಿದ್ದ ಕವನವನ್ನು ಐರಿಸ್ ಕವಿಗೆ ತೋರಿಸುತ್ತಾರೆ ಕುವೆಂಪು. ಆಗ ತಮ್ಮ ಮಾತೃಭಾಷೆಯಲ್ಲಿಯೇ ಕವನ ಬರೆಯಲು ಹೇಳಿದಾಗ 67 ಕವನವನ್ನು ಕನ್ನಡದಲ್ಲಿ ಬರೆಯುತ್ತಾರೆ. ಪುರೋಹಿತಶಾಹಿಯ ವಿರುದ್ಧ ಒಂದು ಪ್ರತಿಭಟನಾ ಸಾಹಿತ್ಯ ಆರಂಭಿಸಿದವರು
ಕುವೆಂಪು. ಪುರೋಹಿತಶಾಹಿ ಮನಸ್ಸಿನ ಬುರುಡೆಗೆ ಗುರಿಯಿಟ್ಟು ಗುಂಡು ಹೊಡೆಯದಿದ್ದರೆ ಅದು ನಿಮ್ಮನ್ನು ಬಲಿ ತೆಗೆದುಕೊಳ್ಳುತ್ತದೆ ಎಂದಿದ್ದಾರೆ. ಅದರ ಸೂಚನೆಯನ್ನು ಈಗ ಕಾಣಬಹುದಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಎಚ್.ಎಂ.ರುದ್ರಸ್ವಾಮಿ ಮಾತನಾಡಿ, ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಕ್ರಾಂತಿಕಾರಕ ವಿಚಾರಧಾರೆಗಳನ್ನು ಪ್ರತಿಪಾದನೆ ಮಾಡಿದ ಕುವೆಂಪು ಅವರು ಸಾಮಾಜಿಕ ಪರಿವರ್ತನೆಯ ಹರಿಕಾರ. ರೈತ ಕುಂಟುಂಬದಿಂದ ಬಂದಿದ್ದ ಅವರು ಶೋಷಣೆ ವಿರುದ್ಧ ಬಂಡಾಯವೆದ್ದ ಮಹಾಕವಿ. ಸಾಮಾಜಿಕ ಅನ್ಯಾಯ, ಶೋಷಣೆ, ದಬ್ಬಾಳಿಕೆ ವಿರುದ್ಧ ತಮ್ಮ ಕಥೆ, ಕಾವ್ಯ ಕವಿತೆಗಳಲ್ಲಿ ಪ್ರಸ್ತಾಪ ಮಾಡಿದ್ದಾರೆ. ರವೀಂದ್ರನಾಥ ಠಾಗೋರ್ ಮತ್ತು ಟಾಲ್ ಸ್ಟಾಯ್ ಅವರಿಗೆ ಸರಿಸಮನಾಗಿ ಕುವೆಂಪು ಬರೆದಿದ್ದಾರೆ. ಧಾರ್ಮಿಕ ಮೂಲಭೂತವಾದದ ವಿರುದ್ಧ ಬಂಡಾಯ ಏಳಬೇಕು ಎಂದು ಅವರು ಹೇಳಿದ್ದರು. ಸಾಂಸ್ಕೃತಿಕ ಬಂಡಾಯದ, ಆಧ್ಯಾತ್ಮಿಕ ಕ್ರಾಂತಿಕಾರಿ ಕವಿಕುವೆಂಪು ಎಂದು ಹೇಳಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ನಮ್ಮ ನಾಡಗೀತೆಯನ್ನು ಕನ್ನಡದಲ್ಲಿ ಬರೆದು ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ, ಪ್ರಪಂಚಕ್ಕೆ ವಿಶ್ವ ಮಾನವ ಸಂದೇಶ ಸಾರಿದ ಜಗದ, ಯುಗದ, ರಾಷ್ಟ್ರ ಕವಿ ಕುವೆಂಪು ಎಂದು ಬಣ್ಣಿಸಿದರು. ಅವರು ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯಲ್ಲಾದರೂ ಜನಿಸಿದ್ದು ಅವರ ತಾಯಿಯ ಊರು ಕೊಪ್ಪ ತಾಲೂಕಿನ ಹಿರೇಕೂಡಿಗೆಯಲ್ಲಿಎಂದರು. ವರ್ಣಾಶ್ರಮ ವ್ಯವಸ್ಥೆಯನ್ನು ಕ್ಕರಿಸುವ ಮೂಲಕ ಸ್ಪಷ್ಟ ಸಂದೇಶ ನೀಡಿದ ಕುವೆಂಪು ಅವರು ಅಸ್ಪ*ಶ್ಯತಾ ಆಚರಣೆ ಬಗ್ಗೆ ಬರೆದ ಗ್ರಂಥಗಳನ್ನು ತಿರಸ್ಕರಿಸಬೇಕು. ಮತಾಂಧತೆಯ ದುಷ್ಪರಿಣಾಮದ ಬಗ್ಗೆ ಬರೆದಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ಕಾರ್ಯಕ್ರಮ ನಡೆಯುತ್ತಿರುವ ಈ ಜಾಗವನ್ನು ಅಕೃತಗೊಳಿಸಿಕೊಡುವ ಜವಾಬ್ದಾರಿ ಶಾಸಕ ತಮ್ಮಯ್ಯ ಅವರ ಮೇಲಿದೆ. ಅಕೃತಗೊಳಿಸಿ ಸಾಗುವಳಿ ಚೀಟಿ ಕೊಡಿಸಿ. ಮುಖ್ಯಮಂತ್ರಿಗೆ ಈ ಬಗ್ಗೆಹೇಳಿದರೆ ಖಂಡಿತ ಒಪ್ಪಿಕೊಳ್ಳುತ್ತಾರೆ ಎಂದು ಮನವಿ ಮಾಡಿದರು.
ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಕುವೆಂಪು ಅವರು ನುಡಿದಂತೆ ನಡೆದ ವ್ಯಕ್ತಿ. ನನ್ನ ಆರಾಧ್ಯ ಕವಿ.ಅವರು ಬರೆದಿರುವ ಅನೇಕ ಕವಿತೆಗಳಿಗೆ ಖ್ಯಾತ ಗಾಯಕ ಅಶ್ವತ್ಥ ಕಂಠದಾನ ಮಾಡಿದ್ದಾರೆ. ಅಶ್ವತ್ಥ ಅವರು ಡಿ.29 ರಂದೇ ಇದೇ ದಿನ ತೀರಿಕೊಂಡರು ಎಂದು ಹೇಳಿದರು.
ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅರ್ಧಯಕ್ಷತೆ ವಹಿಸಿದ್ದರು.
ಮುಖಂಡರಾದ ಎ.ಎನ್.ಮಹೇಶ್, ಬಿ.ಎಚ್.ಹರೀಶ್, ಶಿವಾನಂದಸ್ವಾಮಿ, ಮಂಜೇಗೌಡ, ಗುರುಶಾಂತಪ್ಪ, ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ್, ಸೂರಿಶ್ರೀನಿವಾಸ್, ರವೀಶ್, ಪರಮೇಶ್ವರ್, ಅನಿಲ್ಕುಮಾರ್,ಅನಂತ್, ಲಕ್ಷ್ಮಣ,ಹರೀಶ್ ಮತ್ತಿತರರಿದ್ದರು. ಮರಿಯಪ್ಪಸ್ವಾಗತಿಸಿದರು.



