ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕದ ವತಿಯಿಂದ ರಾಷ್ಟ್ರ ಕವಿ ಕುವೆಂಪು ರವರ 120ನೇ ವರ್ಷದ ಜನ್ಮ ದಿನಾಚರಣೆಯ ಅಂಗವಾಗಿ ಕೊಟ್ಟಿಗೆಹಾರ ಪ್ರೌಢ ಶಾಲೆಯಲ್ಲಿ ವಿಶ್ವ ಮಾನವ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಬಣಕಲ್ ಠಾಣೆಯ ಠಾಣಾಧಿಕಾರಿ ಶ್ರೀಮತಿ ರೇಣುಕ ಉದ್ಘಾಟನೆ ಮಾಡಿದರು.
ಕುವೆಂಪುರವರು ವಾಸ್ತವತೆಯ ಕುರಿತು ನೇರವಾಗಿ, ನಿಷ್ಟುರವಾಗಿ ತಮಗೆ ಅನಿಸಿದನ್ನು ವ್ಯಕ್ತಪಡಿಸುತ್ತಿದ್ದರು. ಈ ಸಮಾಜದಲ್ಲಿದ್ದ ಜಾತಿ, ಧರ್ಮ ಮೇಲು ಕೀಳು ಎಂಬ ತಾರತಮ್ಯಗಳನ್ನು ಕಟುವಾಗಿ ಟೀಕಿಸಿ, ತಮ್ಮ ಬರಹಗಳ ಮೂಲಕ ವಿರೋಧಿಸಿದರು. ವಿಶ್ವಮಾನವ ಸಂದೇಶವನ್ನು ಸಾರಿ ಇಡೀ ವಿಶ್ವಕ್ಕೆ ಮಾದರಿಯಾದರು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕರಾದ ಮಗ್ಗಲಮಕ್ಕಿ ಗಣೇಶ್ ಅವರು ಯುವ ಸಾಹಿತಿ ಹೆಸಗಲ್ ವೆಂಕಟೇಶ್ ರವರು ರಚಿಸಿರುವ ಕನ್ನಡ ನಾಡು ನುಡಿಯ ಕುರಿತಾಗಿರುವ ಹೃದಯದಿಂದ ಅರಳುವ ಹಾಡಿನ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು.
ಶಿಕ್ಷಕರಾದ ಭಕ್ತೇಶ್ ರವರು ಉಪನ್ಯಾಸವನ್ನು ನೀಡುತ್ತ ಕುವೆಂಪುರವರು ತಾವು ಬದುಕಿದಂತೆ ಬರೆದವರು ನುಡಿದಂತೆ ನಡೆದ ತತ್ವಜ್ಞಾನಿ. ಪ್ರಕೃತಿ ಪ್ರೇಮ, ಮಾನವ ಪ್ರೇಮವನ್ನು ಹೊಂದಿದ್ದ ಕುವೆಂಪುರವರು ಈ ಜಗತ್ತು ಕಂಡ ಶ್ರೇಷ್ಠ ಕವಿ, ಚಿಂತಕ, ಮಹಾ ಮಾನವತವಾದಿಯಾಗಿದ್ದು ಕುವೆಂಪುರವರು ಮಲೆನಾಡನ್ನು ತಾಯಿನಾಡು ಕಾಡನ್ನು ದೇವರ ಬೀಡು ಎಂದು ಬಣ್ಣಿಸಿದ್ದಾರೆ. ತಮ್ಮ ವಿಶಿಷ್ಟ ಬರವಣಿಗೆ ವೈಚಾರಿಕ ಚಿಂತನೆ ಕಾವ್ಯ ಕಲ್ಪನೆಯಿಂದ ಮಲೆನಾಡಿನ ಸೌಂದರ್ಯದ ಸೊಬಗನ್ನು ವರ್ಣನೆ ಮಾಡಿದ ಕಾರಣವಾಗಿಯೇ ಕುವೆಂಪು ರವರು ಕನ್ನಡದ ವಿಲಿಯಂ ವಡ್ರ್ಸ್ ವರ್ಥ್ ಎಂದು ಪ್ರಸಿದ್ದರಾಗಿದ್ದಾರೆ ಎಂದು ತಮ್ಮ ಉಪನ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಜನರ ಸೇವೆಯನ್ನು ಮಾಡುತ್ತಿರುವ ಸಮಾಜ ಸೇವಕ ಆರೀಫ್ ಬಣಕಲ್ ಇವರ ಸೇವೆಯನ್ನು ಪರಿಗಣಿಸಿ ವಿಶ್ವಮಾನವ ಪ್ರಶಸ್ತಿಯನ್ನು ನೀಡಿ ಇವರನ್ನು ಗೌರವಿಸಲಾಯಿತು ಹಾಗೂ ಪಶು ವೈಧ್ಯಕೀಯ ಕ್ಷೇತ್ರದಲ್ಲಿ ಸುಮಾರು 20ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬೆಟ್ಟಗೆರೆಯ ಪಶು ವೈದ್ಯಕೀಯ ಪರೀಕ್ಷರಾದ ನಾಗರಾಜ್ ರವರಿಗೆ ಕುವೆಂಪು ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗಾಯನ ಕ್ಷೇತ್ರದಲ್ಲಿ 12 ಗಂಟೆಗಳಲ್ಲಿ 105 ಹಾಡುಗಳನ್ನು ಹಾಡಿ ವಿಶ್ವ ದಾಖಲೆ ಮಾಡಿದ ಗಾಯಕರಾದ ಬಕ್ಕಿ ಮಂಜುನಾಥ್ ರವರಿಗೆ ಕುವೆಂಪು ಸಾಹಿತ್ಯ ಗಾನ ಸಿರಿ ಪ್ರಶಸ್ತಿಯನ್ನು ನೀಡಿ ಗೌವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಅಧ್ಯಕ್ಷರಾದ ಲೋಕೇಶ್ ಬೆಟ್ಟಗೆರೆ ವಹಿಸಿದ್ದರು. ಕೊಟ್ಟಿಗೆಹಾರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಭಾಗ್ಯ ಟಿ. ಎಸ್. ,ಮಾಜಿ ಎಸ್ ಡಿ ಎಂ.ಸಿ ಸದಸ್ಯರಾದ ಸಂಜಯ್ ಕೊಟ್ಟಿಗೆಹಾರ, ಕಿರಿಯ ಪಶು ವೈಧ್ಯಕೀಯ ಪರೀಕ್ಷರಾದ ಮಂಜುನಾಥ್ ರಾಥೋಡ್, ಕೋಶಾಧ್ಯಕ್ಷರಾದ ರಾಮಚಂದ್ರ, ಪ್ರಧಾನ ಸಂಚಾಲಕರಾದ ಸುಪ್ರೀತ್ ಬೆಟ್ಟಗೆರೆ, ಯುವ ಸಾಹಿತಿ ಪೂರ್ಣೇಶ್ ಹೆಬ್ಬರಿಗೆ, ಯುವ ಸಾಹಿತಿ ಹೆಸಗಲ್ ವೆಂಕಟೇಶ್, ಪ್ರೌಢಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.



