ಮೇಯಲು ಬಿಟ್ಟಿದ್ದ ಹಸುವನ್ನು ಹುಲಿಯೊಂದು ಕೊಂದು ಹಾಕಿರುವ ಘಟನೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರ್ಕಲ್ ಗ್ರಾಮದಲ್ಲಿ ನಡೆದಿದೆ.
ಮರ್ಕಲ್ ಗ್ರಾಮದ ನರೇಂದ್ರ ಗೌಡ ಅವರ ಹಸುವನ್ನು ತಮ್ಮ ತೋಟದಲ್ಲಿ ಮೇಯಲು ಬಿಟ್ಟಿದ್ದಾಗ ಹುಲಿ ದಾಳಿ ನಡೆಸಿದ್ದು ಹಸುವನ್ನು ಸಾಯಿಸಿ ಅರ್ಧ ದೇಹವನ್ನು ತಿಂದು ಹಾಕಿದೆ ಹಸು ಇತ್ತೀಚಿಗಷ್ಟೇ ಕರುವಿಗೆ ಜನ್ಮ ನೀಡಿತ್ತು ಕರುವಿನ ಆಕ್ರಂದನ ಹಸು ಸಾಕಿದ ಮಾಲೀಕರ ಮನಸ್ಸಿಗೆ ಅತೀವ ನೋವುಂಟು ಮಾಡಿದೆ.
ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಉದಯ್ ಅರಣ್ಯ ಅಧಿಕಾರಿ ಗಿರೀಶ್ ಮೊದಲಾದವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ಭಾಗದಲ್ಲಿ ಹುಲಿಗಳು ನಿರಂತರವಾಗಿ ಗೋವುಗಳ ಮೇಲೆ ದಾಳಿ ಮಾಡಿ ಕೊಂದು ತಿನ್ನುತ್ತಿವೆ. ಇತ್ತೀಚೆಗೆ ತಾನೆ ಬಣಕಲ್ ಸಮೀಪದ ಬಿ.ಹೊಸಳ್ಳಿ ಗ್ರಾಮದಲ್ಲಿ ಹುಲಿ ಹಸುವೊಂದನ್ನು ಕೊಂದು ತಿಂದಿತ್ತು. ಇದರಿಂದ ರೈತರಿಗೆ ಅಪಾರ ನಷ್ಟವಾಗುತ್ತಿದ್ದು, ಜನರು ಭಯದಿಂದ ಜಮೀನುಗಳಿಗೆ ತೆರಳುವಂತಾಗಿದೆ.



