ತಮ್ಮನ್ನು ಒಬ್ಬ ಡ್ರಾಮಾ ಮಾಸ್ಟರ್ ಎಂದ್ದಿದ್ದ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಸಿ.ಟಿ. ರವಿ ಕಿಡಿ ಕಾರಿದ್ದಾರೆ. , ಡಿ.ಕೆ ಶಿವಕುಮಾರ್ ಅವರೇ ನೀವು ಉಪ ಮುಖ್ಯಮಂತ್ರಿ ಆಗಿದ್ದೀರಿ. ನಿಮ್ಮ ಘನತೆಗೆ ತಕ್ಕಂತೆ ಮಾತನಾಡಿ. ನೀವು ಮುಖ್ಯಮಂತ್ರಿಯಾಗುವ ಕನಸನ್ನು ಕಾಣುತ್ತಿದ್ದೀರಿ. ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿಕೊಳ್ಳಿ. ಯೋಗದಿಂದ ಮುಖ್ಯಮಂತ್ರಿಯಾಗಬಹುದು. ಯೋಗ್ಯತೆ ಇಲ್ಲ ಅಂದರೆ ಒಳ್ಳೆ ಮುಖ್ಯಮಂತ್ರಿ ಆಗುವುದಕ್ಕೆ ಆಗಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಸಿ.ಟಿ.ರವಿಯವರು ಡಿ.ಕೆ.ಶಿವಕುಮಾರ್ ಅವರಿಗೆ ಬರೆದ ಪತ್ರ ಹೀಗಿದೆ.
ಮಾನ್ಯ ಡಿ (ಡ್ರಾಮ) ಕೆ (ಕಿಂಗ್) ಶಿವಕುಮಾರ್ ಅವರೆ,
ನೀವು ಉಪಮುಖ್ಯಮಂತ್ರಿಗಳು ಎನ್ನುವುದನ್ನು ಮರೆತು ಬಿಟ್ಟಿದ್ದೀರಿ. ನೀವು ನ್ಯಾಯಾಧೀಶರ ಸ್ಥಾನದಲ್ಲಿ ಇದ್ದು, ಸತ್ಯಾಸತ್ಯತೆಯನ್ನು ವಿಚಾರ ಮಾಡಬೇಕಾದವರು ದುರದೃಷ್ಟವಾಶಾತ್ ಯಾರದ್ದೋ ವಕೀಲರಾಗಿಬಿಟ್ಟಿದ್ದೀರಿ. ಯಾರು ಮೋಹ ಮದ ಮಾತ್ಸರ್ಯಗಳಿಂದ ಹೊರಗಿದ್ದು ನೋಡುತ್ತಾರೋ ಅವರಿಗೆ ಸತ್ಯಾಸತ್ಯಾತೆ ಗೊತ್ತಾಗುತ್ತದೆ. ಮೋಹಪರವಶರಾದವರಿಗೆ, ಅಧಿಕಾರದ ಮದದಿಂದ ಕೂಡಿದವರಿಗೆ, ಮಾತ್ಸರ್ಯದ ರಾಜಕಾರಣ ಮಾಡುವವರಿಗೆ ಸತ್ಯ ಅರ್ಥ ಆಗಲಿಕ್ಕೆ ಸಾಧ್ಯವಿಲ್ಲ.
ಸಭಾಪತಿಗಳ ರೂಲಿಂಗ್ ನೀಡಿದ ನಂತರ ನೀವುಗಳು, ನಿಮ್ಮ ಪಕ್ಷದ ಶಾಸಕರು ನಡೆದುಕೊಂಡ ರೀತಿ ನಿಮಗುಚಿತವೇ? ಗೂoಡಾಗಳನ್ನೂ, ಜೊತೆಗಾರರನ್ನು ಎತ್ತಿಕಟ್ಟಿ, ಶಾಸಕಾಂಗದ ದೇಗುಲವಾದ “ಸುವರ್ಣ ಸೌಧದಲ್ಲಿ” ನನ್ನ ಮೇಲೆ ನಡೆದ ಹಲ್ಲೆಯನ್ನು ಯಾವ ದೃಷ್ಟಿಯಿಂದ ನೋಡುತ್ತೀರಿ? ಇದನ್ನು ಗಾಂಧಿಗಿರಿ ಎನ್ನಬೇಕೇ ಅಥವಾ ಗೂoಡಾಗಿರಿ ಎನ್ನಬೇಕೇ?
ನಿಮ್ಮ ಸರ್ಕಾರದ ಪೊಲೀಸರು ಮಾಡಿದ ಅಸಂವಿಧಾನಿಕ, ಅನೈತಿಕ ಬಂಧನವನ್ನು ಏನೆಂದು ಭಾವಿಸುತ್ತೀರಿ? ಪೊಲೀಸರು ರಾತ್ರಿ ಇಡೀ ನಡೆಸಿದ ದೌರ್ಜನ್ಯದ ಹಿಂದೆ ಯಾರ ಕುಮ್ಮಕ್ಕಿದೆ? ಯಾರ ಕಾಣದ ಕೈಗಳ ಪಾತ್ರವಿದೆ? ಇದನ್ನು ಮೋಹ ಮದ ಮಾತ್ಸರ್ಯಗಳಿಂದ ಹೊರಗಿದ್ದು ನೋಡಿ, ಸತ್ಯದರಿವು ನಿಮಗಾಗುತ್ತದೆ. ಕಪಟ ನಾಟಕ ಯಾರು ಮಾಡುತ್ತಿದ್ದಾರೆ ಎನ್ನುವುದೂ ಗೊತ್ತಾಗುತ್ತದೆ.
ಸಾರ್ವಜನಿಕ ಬದುಕಿನಲ್ಲಿ ಸಿ ಟಿ ರವಿಯನ್ನು ಹೋರಾಟಗಾರ ಎಂದು ಗುರುತಿಸಿದ್ದಾರೆ, ರವಿಯನ್ನು ಕೆಲಸಗಾರ ಎಂದು ಗುರುತಿಸಿದ್ದಾರೆ, ರವಿಯನ್ನ ಪಕ್ಷನಿಷ್ಠ, ಸಿದ್ಧಾಂತ ಬದ್ಧ ಎಂದು ಗುರುತಿಸುತ್ತಾರೆ ಎಂಬುದು ನನ್ನ ಕರ್ನಾಟಕದ ಜನತೆ ತಿಳಿದಿದೆ.
“ಯದ್ಭಾವಂ ತದ್ಭವತಿ” ಎಂಬ ಮಾತಿನಂತೆ “ಯಾರು ಹೇಗಿದ್ದಾರೋ ಇತರರೂ ಹಾಗೆ ಎಂದು ಭಾವಿಸುತ್ತಾರೆ” ಸನ್ಮಾನ್ಯ “ಉಪಮುಖ್ಯಮಂತ್ರಿ” ಯವರೆ. ಅಂದಹಾಗೆ ಕಾಂಗ್ರಸ್ಸಿನ ಕೆಲ ನಾಯಕರು “ನಮ್ಮ ಡ್ರಾಮ(D) ಕಿಂಗ್ (K) ಶಿವಕುಮಾರ್ ಅವರು ಇಷ್ಟೆಲ್ಲಾ ಡ್ರಾಮಾ ಮಾಡುತ್ತಿರುವುದು ಮುಖ್ಯಮಂತ್ರಿ ಗಾದಿಯನ್ನು ಏರುವ ಹಪಹಪಿಗಾಗಿ” ಎಂದು ರಾಜಕೀಯದ ಮೊಗಸಾಲೆಗಳಲ್ಲಿ ಹೇಳಿಕೊಂಡು ಸುತ್ತುತ್ತಿರುವುದು ನಿಜವೇ? ಎಂದು ಪ್ರಶ್ನಿಸಿದ್ದಾರೆ.
ಏನಿದು ವಿವಾದ ?
ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶೃಂಗೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಿ.ಟಿ.ರವಿಯವರಿಗೆ ಬಂದಿದ್ದ ಬೆದರಿಕೆ ಪತ್ರದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ‘ಸಿ.ಟಿ.ರವಿ ಒಬ್ಬ ದೊಡ್ಡ ಡ್ರಾಮಾ ಮಾಸ್ಟರ್’ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಅವರ ಆ ಹೇಳಿಕೆಗೆ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.



