ಚಾಲಕನ ನಿಯಂತ್ರಣ ತಪ್ಪಿ ಹತ್ತು ಚಕ್ರದ ಲಾರಿಯೊಂದು ರಸ್ತೆ ಬದಿಯ ಕ್ಯಾಂಟಿನ್ಗೆ ನುಗ್ಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಗುಳಗಳಲೆ ಸಮೀಪ ನಡೆದಿದೆ.

ಕ್ಯಾಂಟೀನ್ ನಲ್ಲಿ ಟೀ ಕುಡಿಯುತ್ತ ಕುಳಿತ್ತಿದ್ದ ಸಕಲೇಶಪುರದ ತೌಷಿಫ್ (45) ಹಾಗೂ ಚಿತ್ರದುರ್ಗ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ವೀರೇಶ್ (48) ಸ್ಥಳದಲ್ಲೇ ಮೃತಪ್ಪಟ್ಟಿದ್ದರೆ, ತೀವ್ರವಾಗಿ ಗಾಯಗೊಂಡಿದ್ದ ಲಾರಿ ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಹಾಸನದಿಂದ ಮಂಗಳೂರಿಗೆ ಗೂಡ್ಸ್ ತುಂಬಿಕೊಂಡು ತೆರಳುತ್ತಿದ್ದ ವಿಆರ್ಎಲ್ ಲಾಜಿಸ್ಟಿಕ್ಸ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಗುಳಗಳಲೆಯ ಗ್ರಾಮದ ರಸ್ತೆ ಬದಿಯಲ್ಲಿದ್ದ ಮಹಮದ್ ಖಾದರ್ ಎಂಬುವರ ಕ್ಯಾಂಟಿನ್ಗೆ ನುಗ್ಗಿದೆ. ಲಾರಿ ತಾನು ಚಲಿಸುತ್ತಿದ್ದ ಮಾರ್ಗದಿಂದ ಡಿವೈಡರ್ ದಾಟಿ ಬಂದು ಬಲಭಾಗದ ರಸ್ತೆಬದಿಯಲ್ಲಿದ್ದ ಕ್ಯಾಂಟೀನ್ ಗೆ ಡಿಕ್ಕಿ ಹೊಡೆದಿದೆ.

ಏಕಾಏಕಿ ಲಾರಿ ಕ್ಯಾಂಟೀನ್ ಮೇಲೆ ನುಗ್ಗಿದ್ದರಿಂದ ಜಲಜೀವನ್ ನೀರು ಸರಬರಾಜು ಕೆಲಸ ಮಾಡಲು ಬಂದಿದ್ದ ಚಿತ್ರದುರ್ಗದ ವೀರೇಶ್ ಹಾಗೂ ಸಕಲೇಶಪುರ ಕುಶಾನಗರ ಬಡಾವಣೆಯ ಎಲೆಕ್ಟ್ರಿಷಿಯನ್ ತೌಷಿಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಾರಿ ಚಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇನ್ನೂ ಇಬ್ಬರಿಗೆ ಗಂಭೀರವಾದ ಗಾಯಗಳಾಗಿದ್ದು, ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟೀ ಅಂಗಡಿ ಮುಂದೆ ನಿಲ್ಲಿಸಿದ್ದ 2 ಬೈಕ್ಗಳು ಸಂಪೂರ್ಣ ಜಖಂಗೊಂಡಿವೆ. ಡಿಕ್ಕಿ ರಭಸಕ್ಕೆ ಕ್ಯಾಂಟಿನ್ ಸಂಪೂರ್ಣ ನೆಲಸಮವಾಗಿದೆ. ಕ್ಯಾಂಟಿನ್ ಬಳಿ ಹಲವು ಮಂದಿ ಟೀ ಕುಡಿಯುತ್ತಿದ್ದವರು ಘಟನೆಯ ಕೆಲ ಕ್ಷಣಗಳ ಹಿಂದೆಷ್ಟೇ ಅಲ್ಲಿಂದ ಎದ್ದು ಹೋಗಿದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



