ಕಾಡಾನೆ ದಾಳಿಯಿಂದ ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಅಡಿಬೈಲು ಗ್ರಾಮದಲ್ಲಿ ಕಾರ್ಮಿಕರೋರ್ವರನ್ನು ಕಾಡಾನೆ ತುಳಿದು ಸಾಯಿಸಿದೆ. ಗ್ರಾಮದ ಪುಟ್ಟಯ್ಯ (75) ಎಂಬುವವರನ್ನು ಸೊಂಡಿಲಿನಿಂದ ಹೊಸಕಿ ಹತ್ಯೆಗೈದಿರುವ ಕಾಡಾನೆ ಶವದ ಮೇಲೆ ಕಾಫಿ ಗಿಡಗಳನ್ನು ಹಾಕಿ ತೆರಳಿದೆ.
ಮಂಗಳವಾರ ಸಂಚೆ ಆಲೂರು ತಾಲ್ಲೂಕು ಮಗ್ಗೆಯಿಂದ ಅಡಿಬೈಲು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಆನೆ ದಾಳಿ ಮಾಡಿದೆ.

ಕಾಲಿನಿಂದ ತುಳಿದು ಮರಕ್ಕೆ ಅಪ್ಪಳಿಸಿ ಕಾಫಿ ತೋಟದೊಳಗೆ ಬಿಸಾಡಿದೆ, ನಂತರ ಶವಕ್ಕೆ ಕಾಫಿ ಗಿಡದ ಕೊಂಬೆಗಳನ್ನು ಮುಚ್ಚಿ ಹೋಗಿದೆ.
ಪುಟ್ಟಯ್ಯ ಮನೆಗೆ ಬಾರದ ಹಿನ್ನಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಬುಧವಾರ ಬೆಳಿಗ್ಗೆ ಕಾಫಿ ತೋಟದಲ್ಲಿ ಶವ ಪತ್ತೆಯಾಗಿದೆ.
ಮೊನ್ನೆ ತಾನೆ ಸಕಲೇಶಪುರ ಸಮೀಪ ಕಾಫಿ ತೋಟದಲ್ಲಿ ರೈತರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ ಗಾಯಗೊಳಿಸಿತ್ತು. ಇದೀಗ ವ್ಯಕ್ತಿಯೊಬ್ಬರನ್ನು ತುಳಿದು ಸಾಯಿಸಿದೆ. ಈ ಭಾಗದಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿದ್ದು, ಜನರು ಆತಂಕದಿಂದ ಜೀವನ ನಡೆಸುವಂತಾಗಿದೆ.



