ಚಿಕ್ಕಮಗಳೂರು ನಗರಸಭೆ ಅಧಿಕಾರಿ, ಸಿಬ್ಬಂದಿ ಅಸಡ್ಡೆಯಿಂದ ಒಂದು ವರ್ಷದಿಂದ ಕುಡಿಯುವ ನೀರಿನಲ್ಲಿ ಯುಜಿಡಿ ಕಲುಷಿತ ನೀರು ಮಿಶ್ರಣ ಆಗುತ್ತಿದ್ದು , ಸಾರ್ವಜನಿಕರು ಕಲುಷಿತ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರು ನಗರದ ಕೆಂಪನಹಳ್ಳಿಯ ಕಾವೇರಿ ಬಡಾವಣೆಯಲ್ಲಿನ ಪುನೀತ್ ರಾಜಕುಮಾರ್ ರಸ್ತೆಯಲ್ಲಿ ಕಳೆದ ಒಂದು ವರ್ಷದಿಂದ ಕುಡಿಯುವ ನೀರಿನಲ್ಲಿ ಯುಜಿಡಿ ಕಲುಷಿತ ನೀರು ನಿರ್ಮಿಶ್ರಣವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ . ಮಮತಾ ಲಾಯರ್ ಮನೆಯ ರಸ್ತೆಯ ಚರಂಡಿ ಕಾಮಗಾರಿಗಾಗಿ ಪೂರ್ಣ ರಸ್ತೆ ಮುಚ್ಚಿದ್ದು ,ಸಾರ್ವಜನಿಕರು ಓಡಾಡಲು ತೊಂದರೆಯಾಗಿ ನಗರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ನಗರ ಸಭೆ ಅಧಿಕಾರಿ ಮತ್ತು ಸಿಬ್ಬಂದಿ , ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದ ಚಿಕ್ಕಮಗಳೂರು ನಗರ ಕಳಪೆ ಕಾಮಗಾರಿಗಳತ್ತ ಹೆಸರು ಮಾಡಲು ದಾಪುಗಾಲು ಇಡುತ್ತಿದ್ದು ಇದಕ್ಕೆ ಈ ರಸ್ತೆ ಸಾಕ್ಷಿಯಾಗಿ ನಿಂತಿದೆ . ಕೆಂಪನಹಳ್ಳಿ ಮತ್ತು ಕಾಳಿದಾಸ ನಗರದ ಹಲವು ರಸ್ತೆಗಳಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಹಲವು ಪೈಪ್ಗಳನ್ನು ಒಡೆದು ಹಾಕಲಾಗಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸಲು ನಗರಸಭೆ ಅಸಡ್ಡೆಯೊಂದಿಗೆ ಅಖಾಡಕ್ಕೆ ಇಳಿದಿದ್ದು ಸಾರ್ವಜನಿಕರು ಓಡಾಡುವ ರಸ್ತೆಯನ್ನು ಸಂಪೂರ್ಣವಾಗಿ ಕಳೆದ ಎರಡು ದಿನಗಳಿಂದ ಮುಚ್ಚಿ ಇಲ್ಲಿನ ನಿವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ನಗರಸಭೆ ಸದಸ್ಯೆ ಲಲಿತಾ ರವಿ ನಾಯ್ಕ್ ಮಾತನಾಡಿ ನಗರಸಭೆಯ ಅಧಿಕಾರಿ ವರ್ಗ ಕೂಡಲೇ ಎಚ್ಚೆತ್ತುಕೊಂಡು ಈ ಅವ್ಯವಸ್ಥೆಯನ್ನು ಸರಿಪಡಿಸದೆ ಇದ್ದರೆ ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.



