ತಾಲೂಕು ಮಟ್ಟದ ಗ್ಯಾರೆಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಂಗೌಡ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಗುರುವಾರ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಸಭೆಯಲ್ಲಿ ಸದಸ್ಯರು ಹಾಗೂ ಅಧಿಕಾರಿಗಳಿಂದ ವಿವಿಧ ವಿಚಾರ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಕೆಲ ಸದಸ್ಯರು, ಬಹುತೇಕ ಕಡೆಯಲ್ಲಿ ವಿದ್ಯಾರ್ಥಿಗಳಿಗೆ ಬಸ್ಸಿನ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಅಂತಹ ಪ್ರದೇಶಕ್ಕೆ ಹೆಚ್ಚುವರಿ ಬಸ್ ಬಿಡಿಸಬೇಕು. 200 ಯೂನಿಟ್ ಬದಲು ಪ್ರತಿ ಮನೆಯಲ್ಲಿ ಬರುವ ಸರಾಸರಿ ವಿದ್ಯುತ್ ಬಿಲ್ಲಿನಂತೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಪಡಿತರ ಚೀಟಿ ಸಮಸ್ಯೆಯಿಂದ ಕೆಲವರಿಗೆ ಇಂದಿಗೂ ಗೃಹಲಕ್ಷಿ ಯೋಜನೆ ಸಿಗದಂತಾಗಿದೆ. ಈ ಎಲ್ಲಾ ಗೊಂದಲಗಳನ್ನು ನಿವಾರಿಸಲು ನಿರ್ಣಯ ಕೈಗೊಳ್ಳಬೇಕು. ಅಲ್ಲದೇ ತಾಲೂಕಿನಲ್ಲಿ ನಡೆಯುವ ಎಲ್ಲಾ ಗ್ರಾಮಸಭೆಗಳಿಗೆ ನಮ್ಮನ್ನು ಆಹ್ವಾನಿಸಲು ಸೂಚಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.

ಬಳಿಕ ಗ್ಯಾರೆಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಂಗೌಡ ಮಾತನಾಡಿ, ಗ್ಯಾರಂಟಿ ಯೋಜನೆ ನಮ್ಮ ತಾಲುಕಿನಲ್ಲಿ ಶೇ.90ರಷ್ಟು ಗುರಿ ಸಾಧಿಸಿರುವುದು ಉತ್ತಮ ಬೆಳವಣಿಗೆ. ಆದರೂ ಶೇ.100 ಆಗುವವರೆಗೂ ನಮ್ಮ ಜವಾಬ್ದಾರಿ ಮರೆಯಬಾರದು. ಪ್ರತಿ ತಿಂಗಳಿಗೆ 2 ಸಭೆ ಹಾಗೂ ಎಲ್ಲಾ ಹೋಬಳಿ ವ್ಯಾಪ್ತಿಯಲ್ಲಿ ಕಾರ್ಯಕ್ರಮ ರೂಪಿಸಿ ಯೋಜನೆಯಿಂದ ವಂಚಿತರಾದ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ದಕ್ಕಲು ಎಲ್ಲಾ ಸದಸ್ಯರು ಶಕ್ತಿ ಮೀರಿ ಪ್ರಯತ್ನಿಸಬೇಕು. ಸಭೆಯಲ್ಲಿ ಚರ್ಚಿಸಲಾದ ಜನರ ಸಮಸ್ಯೆಗಳನ್ನು ಜಿಲ್ಲಾ ಮಟ್ಟದ ಸಭೆ ಗಮನಕ್ಕೆ ತರುವ ಮೂಲಕ ಸರಕಾರದಿಂದ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಸಮಿತಿ ಕಾರ್ಯದರ್ಶಿ ಹಾಗೂ ತಾ.ಪಂ. ಇಒ ದಯಾವತಿ, ಸದಸ್ಯರಾದ ಎಚ್.ಪಿ.ರಮೇಶ್, ಚಂದ್ರಯ್ಯ ಸಬ್ಲಿ, ಗುರುವಪ್ಪ, ನಾರಾಯಣ ನಿಡಗೂಡು, ಶ್ರೀನಿವಾಸ್ ಕುನ್ನಳ್ಳಿ, ನವೀನ್ ಕೆಂಜಿಗೆ, ಲೀಲಾವತಿ ಬಣಕಲ್, ದೀಕ್ಷಿತ್ ಹಾಲೂರು, ಬಿ.ಕೆ.ಜಯಮ್ಮ, ಇರ್ಫಾನ್ ಬಣಕಲ್, ಮೆಲ್ವಿನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.



