ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಎಂ.ಆರ್.ದೇವರಾಜ ಶೆಟ್ಟಿ ಮರು ಆಯ್ಕೆಯಾಗಿದ್ದು, ನೂತನ ಜಿಲ್ಲಾ ಪ್ರತಿನಿಧಿಯಾಗಿ ಕೆ.ಪಿ.ವೆಂಕಟೇಶ್ ಆಯ್ಕೆಯಾಗಿದ್ದಾರೆ.
ಬುಧವಾರ ಜಿಲ್ಲಾ ಬಿಪೆಪಿ ಕಚೇರಿ ಪಾಂಚಜನ್ಯದಲ್ಲಿ ನಡೆದ ಚುನಾವಣೆಯಲ್ಲಿ ಸಂಸದರು, ಮಾಜಿ ಶಾಸಕರು, ಕೋರ್ ಕಮಿಟಿ ಸದಸ್ಯರು ಜಿಲ್ಲಾ ಮುಖಂಡರು, ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು.
ಈ ವೇಳೆ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಮುಂದೆ ದೇವರಾಜ್ ಶೆಟ್ಟಿ ಅವರ ನೇತೃತ್ವದಲ್ಲೇ ಜಿಲ್ಲೆಯ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವಂತಾಗಲಿ, ಹಾಗೆಯೇ ಈ ಬಾರಿಯೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲೂ ಬಿಜೆಪಿ ಅಧಿಕಾರ ಹಿಡಿಯುವ ಲಕ್ಷಣ ಕಂಡುಬಂದಿದೆ. ಎಲ್ಲಾ ತಾಲ್ಲೂಕುಗಳಲ್ಲಿ ಸಹಕಾರ ಸಂಘಗಳ ಗೆಲುವುಗಳನ್ನು ಆಧರಿಸಿ ಹೇಳುವುದಾದರೆ ಡಿಸಿಸಿ ಬ್ಯಾಂಕ್ ಅಧಿಕಾರ ಮರಳಿ ನಮ್ಮ ಕೈಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ಕಾರ್ಯಕರ್ತರು ಯಾವುದೇ ಊಹಾಪೋಹಗಳಿಗೆ ಕವಿಗೊಡದೆ ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಐದಕ್ಕೆ ಐದೂ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲ್ಲಬಹುದು. ಇದು ದೇವರಾಜ ಶೆಟ್ಟಿ ಅವರ ನೇತೃತ್ವದಲ್ಲಿ ಆಗಬೇಕು. ಇದೇ ವೇಳೆ ಜಿ.ಪಂ., ತಾ.ಪಂ.ಗಳಲ್ಲಿ ನಮ್ಮ ಅಭ್ಯರ್ಥಿಗಳು ಆಯ್ಕೆಯಾಗಿ ಅಧಿಕಾರ ಹಿಡಿಯುವಂತಾಗಲಿ. ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಎಲ್ಲರ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಗಟ್ಟಿಗೊಳಿಸಬೇಕು ಎಂದು ಕರೆ ನೀಡಿದರು.
ಇನ್ನೋರ್ವ ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ತರೀಕರೆಯ ಡಿ.ಎಸ್.ಸುರೇಶ್ ಮಾತನಾಡಿ, ಸಧ್ಯದಲ್ಲೇ ಜಿ.ಪಂ., ತಾ.ಪಂ. ಚುನಾವಣೆಗಳು ಬರಲಿವೆ. ಇದು ಕಾರ್ಯಕರ್ತರ ಚುನಾವಣೆ ಅದರಲ್ಲಿ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸುವ ಜವಾಬ್ದಾರಿ ನೂತನ ಅಧ್ಯಕ್ಷರ ಮೇಲಿದೆ. ಅದನ್ನು ಯಶಸ್ವಿಯಾಗಿ ನಿಭಾಯಿಸಬೇಕು. ಅದಕ್ಕೆ ನಮ್ಮೆಲ್ಲರ ಸಹಕಾರ ಇರುತ್ತದೆ. ಮುಂದೆ ಜಿಲ್ಲೆಯ ಐದೂ ಶಾಸಕರನ್ನು ಗೆಲ್ಲುವಂತಾಗಬೇಕು ಎಂದು ಹೇಳಿದರು.
ಜಿಲ್ಲಾಧ್ಯಕ್ಷರಾಗಿ ಮರು ಆಯ್ಕೆಯಾದ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ಪಕ್ಷ ನೀಡಿರುವ ಜವಾಬ್ದಾರಿಯನ್ನು ಎಲ್ಲ ಹಿರಿಯರ ಮಾರ್ಗದರ್ಶನ, ಸಲಹೆ ಪಡೆದು ಪಕ್ಷವನ್ನು ಸದೃಢವಾಗಿ ಕಟ್ಟಲಾಗುವುದು. ಜಿಲ್ಲಾ ತಂಡ, ವಿವಿಧ ಮೋರ್ಚಾಗಳ ರಚನೆ, ಪದಾಧಿಕಾರಿಗಳ ಬದಲಾವಣೆ ಇನ್ನಿತರೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ನನ್ನ ತಂಡದಲ್ಲಿ ಕೆಲಸ ಮಾಡದೆ ಇರುವರಿಗೆ ಸ್ಥಾನವಿಲ್ಲ. ಕೆಲಸ ಮಾಡದವರು ಇದ್ದಲ್ಲಿ ವಿಸಿಟಿಂಗ್ ಕಾರ್ಡ್ಗಾಗಿ, ನಾಯಕರ ಹಿಂದೆ ಓಡಾಡುವ ಸಲುವಾಗಿ ಸ್ಥಾನ ಬೇಕೆಂದರೆ ಅದಕ್ಕೆ ಅವಕಾಶ ಇರುವುದಿಲ್ಲ. ಮುಂದೆ ಬರುವ ಎಲ್ಲಾ ಚುನಾವಣೆಗಳನ್ನು ಗೆಲ್ಲಬೇಕೆಂದರೆ ಬಲಿಷ್ಟ ತಂಡ ಕಟ್ಟಬೇಕಿದೆ. ಪ್ರತಿ ಮಹಾ ಶಕ್ತಿ ಕೇಂದ್ರವನ್ನು ಪ್ರವಾಸ ಮಾಡಿ ಸಂಘಟನೆ ಗಟ್ಟಿಗೊಳಿಸುವ ಯೋಜನೆ ಇದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಚುನಾವಣಾಧಿಕಾರಿ ಹಾಸನದ ಚೇತನ್ ಕುಮಾರ್, ಸಹ ಚುನಾವಣಾಧಿಕಾರಿ ವೀಣಾ ಶೆಟ್ಟಿ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಕೆ.ಮಹೇಶ್, ಕಾಫಿ ಮಂಡಳಿ ಅಧ್ಯಕ್ಷ ದೇವವೃಂದ ದಿನೇಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಹಿರಿಯ ಮುಖಂಡ ಕೋಟೆ ರಂಗನಾಥ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಿಂತ ಅನಿಲ್ ಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾದ್ಯಕ್ಷ ಕೆ.ಪಿ.ವೆಂಕಟೇಶ್ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ೯ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.



