ಕಾಡುಕೋಣ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ಸರ್ವಪಕ್ಷಗಳು, ರೈತರು ಹಾಗೂ ವಿವಿಧ ಸಂಘಟನೆಗಳು ಶುಕ್ರವಾರ ಕರೆನೀಡಿದ್ದ ಕಳಸ ತಾಲೂಕು ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಗುರುವಾರ ಕಳಸದ ಹಳುವಳ್ಳಿ ಸಮೀಪ ರಘುಪತಿ ಹೆಬ್ಬಾರ್ ಎಂಬುವವರು ಕಾಟಿ ದಾಳಿ ಯಿಂದ ಮೃತಪಟ್ಟಿದ್ದರು. ಅಲ್ಲದೆ ಕಳೆದ 5 ವರ್ಷ ಗಳಿಂದ ತಾಲೂಕಿನಾದ್ಯಂತ ಕಾಟಿಗಳ ಹಾವಳಿಗೆ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದು ಈ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಸರ್ವಪಕ್ಷ ಗಳು, ಸಂಘಟನೆಗಳು ಕರೆನೀಡಿದ್ದ ಕಳಸ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಪಟ್ಟಣದಲ್ಲಿ ಖಾಸಗಿ ಶಾಲೆಗಳು ಸೇರಿದಂತೆ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದವು. ಬೆಳಗ್ಗೆ ಕೆಲಶೇಶ್ವರ ದೇವಸ್ಥಾನದ ಬಳಿಯಿಂದ ಸರ್ವಪಕ್ಷಗಳ ಹಾಗೂ ಸಂಘಟನೆಗಳ ಮುಖಂಡರು, ರೈತರು ಪ್ರತಿಭಟಣಾ ಮೆರವಣಿಗೆ ನಡೆಸಿ ತಾಲೂಕು ಚೇರಿಯಲ್ಲಿ ತಹಸೀಲ್ದಾರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ನಂತರ ವಲಯ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

‘ಕಳಸ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ಮಾತನಾಡಿ, ನಾವುಗಳು ಕಠಿಣ ನಿರ್ಧಾರ ತೆಗೆದುಕೊಂಡರಷ್ಟೇ ಸರಕಾರ ಎಚ್ಚೆತ್ತು ಕೊಳ್ಳುತ್ತದೆ. ಬೀದಿ ಹೋರಾಟ ಮಾಡುವುದರಿಂದ ಪ್ರಯೋಜನವಿಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡ ಶೇಷಗಿರಿ ಮಾತನಾಡಿ, ಕಾಟಿಗಳ ಹಾವಳಿ ಇದೇ ರೀತಿ ಮುಂದುವರಿದರೆ ಊರಲ್ಲಿ ರೈತರು ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಆನೆ ಕಾರಿಡಾರ್ ಮಾಡಿದಂತೆ ಕುದುರೆಮುಖದಲ್ಲಿ ಕಾಟಿ ಕಾರಿಡಾರ್ ಮಾಡಿ ಅಲ್ಲಿಗೆ ಈ ಭಾಗದ ಕಾಟಿಗಳನ್ನು ಸ್ಥಳಾಂತರ ಮಾಡಿ ಎಂದು ಒತ್ತಾಯಿಸಿದರು.
ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್ ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಹೆಚ್ಚಿನ ಸಿಬ್ಬಂದಿ ನೇಮಿಸಿ ಕಾಟಿಗಳನ್ನು ಸ್ಥಳಾಂತರ ಮಾಡಲು ಕ್ರಮ ತೆಗೆದುಕೊಳ್ಳ ಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ಕಾನೂನಿಗೆ ತಿದ್ದುಪಡಿ ತಂದು ಪಹಣಿ ಹೊಂದಿದವರಿಗೆ ಕೋವಿ ಹೊಂದಲು ಪರವಾನಗಿ ನೀಡಬೇಕು. ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಅರಣ್ಯ ಇಲಾಖೆ ಮಾಡಬೇಕು ಒತ್ತಾಯಿಸಿದರು.
ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಶ್ರೇಣಿಕ್, ಜೆಡಿಎಸ್ ಅಧ್ಯಕ್ಷ ಸಂತೋಷ್ ಹಿನಾರಿ, ಸಿಪಿಐ ತಾಲೂಕು ಕಾರ್ಯದರ್ಶಿ ಗೋಪಾಲ ಶೆಟ್ಟಿ ಕನ್ನಡ ಸಂಘದ ಅಧ್ಯಕ್ಷ ರಾಜು, ಮುಖಂಡರಾದ ಜ್ವಾಲನಯ್ಯ, ನಾಗಭೂಷಣ್, ಲಕ್ಷ್ಮಣಾಚಾರ್, ವೆಂಕಟಸುಬ್ಬಯ್ಯ, ಕೇಶವ ಗೌಡ, ಅಂಬರೀಶ್ ಭಟ್, ರಜಿತ್ ಕೆಳಗೂರು, ಬಿ.ಕೆ.ಮಹೇಶ್, ಸುಂದರ ಶೆಟ್ಟಿ ಕೆ.ಸಿ.ಮಹೇಶ್, ಆಶಾಲತಾ ಜೈನ್, ಉಷಾ ವಿಶ್ವನಾಥ್, ಮಮ್ರಾಜ್ ಬೇಗಂ ಹಾಗೂ ಇತರರಿದ್ದರು.



