ಪಾಳು ಬಿದ್ದಿದ್ದ ಕಟ್ಟಡ ಕುಸಿದು ಬಿದ್ದು ಇಬ್ಬರು ಸಾವನ್ನಪ್ಪಿರುವ ಮೂವರು ಗಾಯಗೊಂಡಿರುವ ದಾರುಣ ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ನಡೆದಿದೆ.
ಪಾಳು ಬಿದ್ದ ಕಟ್ಟಡದ ಕೆಳಗೆ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದ ವೇಳೆ ದಿಢೀರ್ ಕಟ್ಟಡ ಕುಸಿದಿದೆ. ಪರಿಣಾಮ ವ್ಯಾಪಾರಕ್ಕೆ ಬಂದಿದ್ದ ಒಬ್ಬ ಪುರುಷ ಮತ್ತು ವ್ಯಾಪಾರ ನಡೆಸುತ್ತಿದ್ದ ಒಬ್ಬ ಪುರುಷ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ವ್ಯಾಪಾರ ಮಾಡುತ್ತಿದ್ದ ಇಬ್ಬರ ಮಹಿಳೆಯರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಹಣ್ಣು ಖರೀದಿಗೆ ಬಂದಿದ್ದ ಬೇಲೂರಿನ ಅಮರನಾಥ್ ಹಾಗೂ ವ್ಯಾಪಾರ ನಡೆಸುತ್ತಿದ್ದ ನಜೀರ್ ಎಂಬುವವರು ಮೃತರು ಎನ್ನಲಾಗಿದೆ.
ಸತ್ಯನಾರಾಯಣ ಎಂಬುವರಿಗೆ ಸೇರಿದ್ದ ಎಂಟು ಮಳಿಗೆಗಳಿದ್ದ ಹಳೆಯ ಕಟ್ಟಡ ಇದಾಗಿದ್ದು, ಇದರಲ್ಲಿ ವ್ಯಾಪಾರ ನಡೆಯುತ್ತಿತ್ತು. ಹೀಗಾಗಿ ಅಮರನಾಥ್ ಹಣ್ಣು ಖರೀದಿ ಮಾಡಲು ಬಂದಿದ್ದರು, ಈ ವೇಳೆ ಕಟ್ಟಡದ ಸಜ್ಜಾ ಕುಸಿದುಬಿದ್ದಿದೆ. ಇ
ಇನ್ನು ಘಟನೆಯಲ್ಲಿ ಮಹಿಳಾ ವ್ಯಾಪಾರಿಗಳಾದ ನೀಲಮ್ಮ ಮತ್ತು ಜ್ಯೋತಿ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಹಣ್ಣು ಖರೀದಿಗೆ ಬಂದಿದ್ದ ಶಿಲ್ಪ ಎನ್ನುವವರ ಕಾಲಿಗೂ ಪೆಟ್ಟಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬೇಲೂರು ಪೊಲೀಸರು ಹಾಗೂ ಅಗ್ನಿಶಾಮಕ ದಳ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.



