ತೋಟದಲ್ಲಿ ಕಾಳುಮೆಣಸು ಕೊಯ್ಯುವಾಗ ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ತಗುಲಿ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲ್ಲೂಕಿನ ಬಾಳೆಹೊನ್ನೂರು ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ. ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಮೇಗರಮಕ್ಕಿ, ಕುರ್ಕವಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ಸಂಪತ್ ಕುಮಾರ್ (36) ಎಂಬ ಯುವಕ ಏಣಿಗೆ ವಿದ್ಯುತ್ ತಗುಲಿ ಮೃತಪಟ್ಟ ದುರ್ದೈವಿ. ಇಂದು ಮುಂಜಾನೆ 9 ಗಂಟೆಯ ಸಮಯದಲ್ಲಿ ಕುರ್ಕವಳ್ಳಿ ರಾಜಶೇಖರ್ ಎಂಬುವವರ ತೋಟದಲ್ಲಿ ಕಾಳುಮೆಣಸು ಕೊಯ್ಯುವಾಗ ಈ ಅವಘಡ ಸಂಭವಿಸಿದೆ.
ತೋಟದಲ್ಲಿ ಕಾಳುಮೆಣಸು ಕೊಯ್ಯುವ ವೇಳೆ ಅಲ್ಯೂಮಿನಿಯಂ ಏಣಿಯನ್ನು ಸಾಗಿಸುತ್ತಿದ್ದ ಸಂಪತ್, ಆ ಏಣಿ ಅಚಾನಕ್ ವಿದ್ಯುತ್ ತಂತಿಗೆ ತಗುಲಿ ತೀವ್ರ ಶಾಕ್ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೂರು ವರ್ಷಗಳ ಹಿಂದಷ್ಟೆ ಮದುವೆಯಾಗಿದ್ದ ಸಂಪತ್ ಅವರಿಗೆ ಚಿಕ್ಕ ಮಗು ಕೂಡ ಇದೆ.
ಈ ಬಗ್ಗೆ ಮೃತ ಸಂಪತ್ ಪತ್ನಿ ರಂಜಿತಾ ಬಾಳೆಹೊನ್ನೂರು ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ದುರಂತ ಘಟನೆಯಿಂದ ಸಂಪತ್ ಕುಟುಂಬ ತಬ್ಬಲಿಯಾಗಿದ್ದು, ಮೃತನ ಕುಟುಂಬ ಆಕ್ರಂದನ ಮುಗಿಲು ಮುಟ್ಟಿದೆ.



