ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ನಮ್ಮ ಗ್ರಾ.ಪಂ. ವ್ಯಾಪ್ತಿಯ ಸರಕಾರಿ ಕೆರೆ ಹೂಳೆತ್ತಲು ಮುಂದಾಗಿರುವುದು ಶ್ಲಾಘನೀಯ ಎಂದು ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ್ ಹೇಳಿದರು.
ಅವರು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಮೂಡಿಗೆರೆ ತಾಲ್ಲೂಕಿನ ಹೆಸಗಲ್ ಗ್ರಾ.ಪಂ. ವ್ಯಾಪ್ತಿಯ ಶ್ರೀ ಕಲ್ಲೇಶ್ವರ ಸ್ವಾಮಿ ಗುಡಿಯ ಕೆರೆ ಹೂಳೆತ್ತುವ ಭೂಮಿ ಪೂಜೆ ಹಾಗೂ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮದರ್ಶಿ ಶ್ರೀ ಡಾ.ವೀರೇಂದ್ರ ಹೆಗಡೆ ಮತ್ತು ಮಾತೃಶ್ರೀ ಹೇಮಾವತಿ ವೀರೇಂದ್ರ ಹೆಗಡೆ ಅವರ ಮಾರ್ಗದರ್ಶನದಲ್ಲಿ 4.5 ಲಕ್ಷ ರೂ ವೆಚ್ಚದಲ್ಲಿ ಕೆರೆ ಹೂಳೆತ್ತಲು ಈಗಾಗಲೇ ಚಾಲನೆ ನೀಡಲಾಗಿದೆ. ಇದರಿಂದ ಬೇಸಿಗೆಯಲ್ಲಿ ನಮ್ಮ ಗ್ರಾಮದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಶಿವರಾಮ್ ಮಾತನಾಡಿ, ಪರಮ ಪೂಜ್ಯ ಡಾ.ವೀರೇಂದ್ರ ಹೆಗಡೆ ಅವರು ಬೇಸಿಗೆಯಲ್ಲಿ ಪ್ರಾಣಿ ಸಂಕುಲಕ್ಕೆ ಹಾಗೂ ಗ್ರಾಮದ ಜನರಿಗೆ ಕುಡಿಯುವ ನೀರು ಒದಗಿಸುವ ದೃಷ್ಟಿಯಿಂದ ರಾಜ್ಯಾಧ್ಯಂತ 800ಕ್ಕೂ ಅಧಿಕ ಕೆರೆ ಹೂಳೆತ್ತುವ ಯೋಜನೆ ರೂಪಿಸಲಾಗಿದೆ. ಅದರಂತೆ ಇಲ್ಲಿ ಕರೆ ಹೂಳೆತ್ತುವ ಮೂಲಕ 15 ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಗ್ರಾ.ಪಂ. ಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಸಗಲ್ ಗ್ರಾ.ಪಂ. ಅಧ್ಯಕ್ಷೆ ನಜ್ಮಾ ಬೇಗಮ್ ವಹಿಸಿದ್ದರು. ಸದಸ್ಯರಾದ ಸುಧಾ ಮಂಜುನಾಥ್, ಅರವಿಂದ್, ಪಿಡಿಒ ಸೌಮ್ಯ, ಜನಜಾಗೃತಿ ವೇದಿಕೆ ಸದಸ್ಯ ವೆಂಕಟೇಶ್, ಗ್ರಾಮಸ್ಥರಾದ ಎಚ್.ಎಂ.ಶಿವೇಗೌಡ, ಲೋಕೇಶ್, ಬಿ.ಎಸ್.ಗೋಪಾಲಗೌಡ, ಮೇಲ್ವಿಚಾರಕ ದಾಮೋದರ್ ಮತ್ತಿತರರಿದ್ದರು.



