ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರ ಜನಪರ ಆಡಳಿತದಿಂದಾಗಿ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಚುನಾವಣೆಯಲ್ಲಿ ಜನರು ಅಭೂತಪೂರ್ವವಾಗಿ ಬಿಜೆಪಿ ಬೆಂಬಲಿಸಿದ್ದಾರೆಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಸೋಮವಾರ ಸಂಜೆ ಮೂಡಿಗೆರೆ ಪಟ್ಟಣದ ಲಯನ್ಸ್ ವೃತ್ತದಲ್ಲಿ ಬಿಜೆಪಿ ಪಕ್ಷದಿಂದ ಏರ್ಪಡಿಸಿದ್ದ ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಪಂಚ ರಾಜ್ಯಗಳ ಫಲಿತಾಂಶ ಹೊರ ಬಿದ್ದಿದೆ. ಪಶ್ಚಿಮ ಬಂಗಾಳದಲ್ಲಿ ಭದ್ರಕೋಟೆಯಾಗಿದ್ದ ಮಮತಾ ಬ್ಯಾನರ್ಜಿ ಅವರ ಪಕ್ಷವನ್ನು ಬಿಜೆಪಿ ಸಂಪೂರ್ಣ ನೆಲ ಕಸಿಯುವಂತೆ ಮಾಡಿದೆ. ಪುದುಚೇರಿ, ಅಸ್ಸಾಂನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಅಲ್ಲದೇ ತಮಿಳುನಾಡಿನಲ್ಲೂ ಕೂಡ ಮಿತ್ರ ಪಕ್ಷ ಉತ್ತಮ ಸಾಧನೆ ಮಾಡಿದ್ದು, ಇದು ಮುಂದಿನ ಚುನಾವಣೆಗೆ ಬಿಜೆಪಿ ನೆಲೆಯೂರುವ ಸೂಚನೆಯಾಗಿದೆ. ಅಲ್ಲದೇ ಈ ಗೆಲುವಿನ ಗಾಳಿ ಮುಂದೆ ರಾಜ್ಯಕ್ಕೂ ಬೀಸಲಿದೆ ಎಂದು ಹೇಳಿದರು.
ಶೃಂಗೇರಿ ಕ್ಷೇತ್ರದಲ್ಲಿ ಅಂಚೆ ಮತಗಳನ್ನು ಚೋರಿ ಮಾಡಿ, ಡಿ.ಎನ್.ಜೀವರಾಜ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ನ್ಯಾಯಾಲಯ ಮತ್ತೆ ಮರು ಎಣಿಕೆಗಾಗಿ ಆದೇಶಿಸಿದ್ದರಿಂದ ಸತ್ಯಾಂಶ ಹೊರ ಬಂದಿದ್ದು, ಡಿ.ಎನ್.ಜೀವರಾಜ್ ಶಾಸಕರಾಗಲು ಸಾಧ್ಯವಾಗಿದೆ. ಇಂತಹ ಅಂಚೆ ಮತಗಳನ್ನು ಮುಚ್ಚಿಟ್ಟು ಗೊಂದಲ ಸೃಷ್ಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಮುಖಂಡರಾದ ಎಂ.ಆರ್.ಜಗದೀಶ್, ದೀಪಕ್ ದೊಡ್ಡಯ್ಯ ಮಾತನಾಡಿದರು. ಜೆ.ಎಸ್.ರಘು, ಮನೋಜ್ ಹಳೆಕೋಟೆ, ಭರತ್ ಬಾಳೂರು, ವಕೀಲ ಸಿದ್ದಯ್ಯ, ಪರೀಕ್ಷಿತ್ ಜಾವಳಿ, ವಿಕ್ರಮ್ ಬಣಕಲ್, ಪ್ರಮೋದ್ ದುಂಡುಗ, ಪಂಚಾಕ್ಷರಿ, ಸಂದೀಪ್, ಧನಿಕ್ ಕೊಡದಿಣ್ಣೆ, ನಯನ ತಳವಾರ, ಸಚಿನ್ ಬಾನಳ್ಳಿ, ಸುನೀಲ್ ಮಣ್ಣೀಕೆರೆ, ಲೋಕೇಶ್ ಮತ್ತಿತರರಿದ್ದರು.



