ತಾನು ಸುಮಾರು 30 ವರ್ಷದಿಂದಲೂ ಬಿಜೆಪಿ ಪಕ್ಷದ ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ಶಕ್ತಿಮೀರಿ ದುಡಿದಿದ್ದೇನೆ. ತಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲವೆಂದು ಮೂಡಿಗೆರೆ ಪ.ಪಂ. ಸದಸ್ಯ ಪಿ.ಜಿ.ಅನುಕುಮಾರ್ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ.ಪಂ. ಅಧ್ಯಕ್ಷ ಸ್ಥಾನ ತೆರವಾದ ಬಳಿಕ ಮತ್ತೆ ಬಿಜೆಪಿ ಪಕ್ಷ ಅಧಿಕಾರ ಹಿಡಿಯಬೇಕೆಂದು 3 ಬಾರಿ ಪ.ಪಂ. ಬಿಜೆಪಿ ಸದಸ್ಯರೊಳಗೊಂಡಂತೆ ಮುಖಂಡರ ಸಭೆ ನಡೆಯಿತು. ತಾನು ಕೂಡ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬ ದೃಷ್ಟಿಯಿಂದ ಕಾರ್ಯಪ್ರವೃತ್ತನಾಗಿದ್ದೆ. ಆದರೆ ನಮ್ಮ ಪಕ್ಷದ ಬಿಜೆಪಿ ಸದಸ್ಯೆ ಕಮಲಮ್ಮ ಅವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದ ಆಡಿಯೋ ವೈರಲ್ ಆದ ಬಳಿಕ ತನ್ನ ಮನಸ್ಸಿಗೆ ತುಂಬಾ ನೋವುಂಟಾಯಿತು. ಈ ಕಾರಣದಿಂದ ಅಧ್ಯಕ್ಷರ ಚುನಾವಣೆಯಲ್ಲಿ ಹಿಂದುಳಿಯಬೇಕಾಯಿತು. ತಾನು ಹಣದ ಆಮಿಷಕ್ಕೆ ಬಲಿಯಾಗಿದ್ದೇನೆಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಯಾವ ದೇವಸ್ಥಾನಕ್ಕೆ ಕರೆದರೂ ಬಂದು ಪ್ರಮಾಣ ಮಾಡಲು ಸಿದ್ದವಿದ್ದೇನೆಂದು ಹೇಳಿದರು.
ಚುನಾವಣೆ ನಂತರ ಮಾರ್ಚ್ 10ಕ್ಕೆ ಪಕ್ಷದಿಂದ ತನಗೆ ನೋಟೀಸು ಕಳುಹಿಸಿದ್ದು, ಮಾ.14ಕ್ಕೆ ನನಗೆ ತಲುಪಿತ್ತು. ಕೂಡಲೇ ಪಕ್ಷಕ್ಕೆ ಮತ್ತು ಪಕ್ಷದ 25 ಮಂದಿ ಹಿರಿಯ ಮುಖಂಡರಿಗೆ ಉತ್ತರ ನೀಡಿದ್ದೇನೆ. ತಾನು ಆರಂಭದಲ್ಲಿ ಪ.ಪಂ. ಅಧ್ಯಕ್ಷನಾದಾಗ ಸದಸ್ಯೆ ಆಶಾ ಮೋಹನ್ ಅವರು ತನಗಾಗಿ ಮತ ಚಲಾಯಿಸಿದ್ದರು. ಅವರ ಋಣ ತೀರಿಸಬೇಕಿತ್ತೆಂಬ ಆರೋಪ ಮಾಡಲಾಗಿದೆ. ಆದರೆ ತನ್ನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ತಾನೊಬ್ಬನೇ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷ ಸ್ಥಾನ ದೊರಕಿತ್ತು.
ನಾನು ಪಕ್ಷದಲ್ಲಿ ಇದ್ದುಕೊಂಡು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಪ್ರಾಮಾಣಿಕವಾಗಿ ಕಾಫಿತೋಟ ಮಾಡಿ ಮುಂದೆ ಬಂದಿದ್ದೇನೆ. 1 ಕೆರೆ ಮಾಡಿ 3 ಕೆರೆಗೆ ಬಿಲ್, ಒಂದು ರಸ್ತೆ ಮಾಡಿ 3 ರಸ್ತೆಗೆ ಬಿಲ್ ಮಾಡಿಸಿಲ್ಲ. ಬಿಜೆಪಿಯಲ್ಲಿ ಕೆಲವರ ಕುತಂತ್ರದಿಂದಾಗಿ ಎಷ್ಟೋ ಮಂದಿ ಹಿರಿಯ ನಾಯಕರು ಮೂಲೆಗುಂಪಾಗಿದ್ದಾರೆ.
ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ಪ.ಪಂ. ಅಧ್ಯಕ್ಷ ಸ್ಥಾನ, ಸಾರ್ವಜನಿಕ ಮಹಾ ಗಣಪತಿ ಸೇವಾ ಸಮಿತಿಯಲ್ಲಿ ಅಧ್ಯಕ್ಷ ಸ್ಥಾನ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಹೋರಾಟ ಸೇರಿದಂತೆ ಅನೇಕ ಹೋರಾಟಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದೇನೆ. ಇದನ್ನು ಸಹಿಸದ ಕೆಲವರು, ಅಪಪ್ರಚಾರ ಮಾಡುವ ಮೂಲಕ ತನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಈಗಲೂ ತಾನು ಪಕ್ಷಕ್ಕೆ ನಿಷ್ಟೆಯಿಂದ ದುಡಿಯುತ್ತಿದ್ದೇನೆಂದು ಹೇಳಿದರು.



