ರಾಜ್ಯದ ಜನಸಂಖ್ಯೆಯಲ್ಲಿ 2ನೇ ದೊಡ್ಡ ಸಂಖ್ಯೆಯಲ್ಲಿ ಇರುವ ಮುಸ್ಲಿಮರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ. ಜಾತಿ ಜನಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ, ರಾಜ್ಯ ಸರ್ಕಾರಕ್ಕೆ ಇಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ ‘ಮುಸ್ಲಿಂ ಸಮುದಾಯದಲ್ಲಿ 56 ಜಾತಿಗಳಿವೆ. ಅಲ್ಲಿಯೂ ಅಸ್ಪೃಶ್ಯರು ಇದ್ದಾರೆ. ಈ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ. ಪಸ್ಮಾಂಡ ಮುಸ್ಲಿಮರು ಇದ್ದಾರೆ. ಯಾರು ಪ್ರವಾದಿ ವಂಶಸ್ಥರು ಎಂದು ಭಾವಿಸಿದ್ದಾರೆಯೋ ಅವರು ಈ ಸಮುದಾಯವರಿಗೆ ಹೆಣ್ಣು ಕೊಡುವುದಿಲ್ಲ. ಮುಸ್ಲಿಮರನ್ನು ಇಡಿಯಾಗಿ ಇಡುವ ಹಾಗೂ ಹಿಂದೂಗಳನ್ನು ಒಡೆದಾಳುವ ನೀತಿಗೆ ನಾವು ಬೆಂಬಲ ನೀಡುವುದಿಲ್ಲ. ಸಾಮಾಜಿಕ ನ್ಯಾಯ ಬಿಜೆಪಿಯ ಬದ್ಧತೆ’ ಎಂದು
ಕಾಂಗ್ರೆಸ್ ನೇತೃತ್ವದ ಸರ್ಕಾರ ನಡೆಸಿದ್ದ ಜಾತಿಗಣತಿ ವರದಿ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ರಾಜ್ಯದಲ್ಲಿ ಅಲ್ಪಸಂಖ್ಯಾತರು ಯಾರು, ರಾಜ್ಯದ ಜನಸಂಖ್ಯೆಯಲ್ಲಿ ಎರಡನೇ ದೊಡ್ಡ ಸಂಖ್ಯೆಯಲ್ಲಿ ಇರುವ ಸಮುದಾಯ ಅಲ್ಪಸಂಖ್ಯಾತ ಎಂದರೆ ಹೇಗೆ. ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದಾಗ ಕೇಂದ್ರ ಸರ್ಕಾರ ಬಡ್ತಿ ಮೀಸಲಾತಿ ಪರ ಪ್ರಮಾಣ ಪತ್ರ ಸಲ್ಲಿಸಿತ್ತು. ಇದು ಮೀಸಲಾತಿ ಬಗ್ಗೆ ಬಿಜೆಪಿಗೆ ಇರುವ ಬದ್ಧತೆ ಎಂದರು.
ಕೆಲವರು ಹಿಂದೂ ಸಮಾಜವನ್ನು ಜಾತಿವಾರು ಒಡೆಯುವ ಕೆಲಸ ಮಾಡುತ್ತಿದ್ದಾರೆ. ವಕ್ಫ್ ಕಾಯ್ದೆ ವಿಷಯದಲ್ಲಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಹಿಂದೆ ಸಿಎಎ ವಿರುದ್ಧವು ಕಾಂಗ್ರೆಸ್ ಇದೇ ರೀತಿ ಅಪಪ್ರಚಾರ ಮಾಡಿತ್ತು. ಇಂಥವು ಕಾಂಗ್ರೆಸ್ ಪಕ್ಷದ ರಾಷ್ಟ್ರ ಘಾತುಕ ನಿಲುವುಗಳಾಗಿವೆ ಎಂದರು.
‘ವಕ್ಫ್ ಕಾಯ್ದೆ ವಿಷಯದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ನ್ಯಾಯಬದ್ಧವಾಗಿ ವಕ್ಫ್ಗೆ ಸೇರಿದ ಜಮೀನನ್ನು ಯಾರೂ ಕಿತ್ತುಕೊಳ್ಳುವುದಿಲ್ಲ. ಅಕ್ರಮವಾಗಿರುವ ಆಸ್ತಿಯನ್ನು ಯಾವುದೇ ಕಾರಣಕ್ಕೂ ಬಿಡಲೇಬೇಕು. ರೈತರ ಜಮೀನು, ಸಾವಿರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನದ ಜಮೀನನ್ನು ನಮ್ಮದೇ ಎನ್ನುತ್ತಾರೆ. ಇಂತಹ ಆಸ್ತಿಗಳನ್ನು ಬಿಡಲೇಬೇಕು. ವಿಧಾನಸೌಧ, ಸುಪ್ರೀಂ ಕೋರ್ಟ್, ಹೈಕೋರ್ಟ್ ಎಲ್ಲವೂ ನಮ್ಮದೇ ಎನ್ನಲು ಅವರಿಗೆ ಅವಕಾಶ ನೀಡಬೇಕೆ’ ಎಂದು ಪ್ರಶ್ನಿಸಿದರು.



