ಜೀವನದ ಒಂದು ಭಾಗವಾಗಿ ಆತ್ಮವಿಶ್ವಾಸದ ಜೊತೆಗೆ ಗೌರವ ಹೆಚ್ಚಿಸುವುದೇ ಸಂಸ್ಕೃತಿ ಎಂದು ಚಿಕ್ಕಮಗಳೂರು ಶಾಸಕ ಹೆಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.
ಅವರು ಬುಧವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಚಿಕ್ಕಮಗಳೂರು ಮಹಿಳಾ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಜಾನಪದ ಉತ್ಸವ-2025 ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವೈವಿಧ್ಯಮಯ ಜೀವನದ ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡು ಭಾರತದ ಸಂಸ್ಕಾರ ಇಡೀ ವಿಶ್ವಕ್ಕೆ ಬಹಳ ದೊಡ್ಡ ಪಾತ್ರ ವಹಿಸಿ ಮಾದರಿಯಾಗಿದೆ ಎಂದು ಹೇಳಿದರು.
ನಾವು ಸಾಂಪ್ರದಾಯಿಕವಾಗಿ ಆಚರಿಸುವ ಪ್ರತಿಯೊಂದು ಹಬ್ಬಗಳು ಸಂಸ್ಕೃತಿಯನ್ನು ಜೀವಂತವಾಗಿ ಉಳಿಸಿವೆ. ಭಾರತದಂತ ಜಾತ್ಯಾತೀತ ರಾಷ್ಟ್ರದಲ್ಲಿ ವಿವಿಧ ಧರ್ಮಗಳ ಸಮುದಾಯದವರು ಆಚರಿಸುವ ಹಬ್ಬಗಳು ಜೊತೆಗೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ರೀತಿ ಸಂಸ್ಕೃತಿಯನ್ನು ಬಿಂಬಿಸುತ್ತಿವೆ ಎಂದು ತಿಳಿಸಿದರು.
ರೈತರ ಜೀವನಾಡಿಯಾಗಿರುವ ಭತ್ತ, ರಾಗಿ, ಏಲಕ್ಕಿ, ಅಡಿಕೆ, ಕಾಫಿ, ತೆಂಗು, ಮೆಣಸು ಜೋಡಿಸಿ ಸಿಂಗರಿಸಿರುವುದರ ಜೊತೆಗೆ ಕಾಲೇಜಿನ ಆವರಣದಲ್ಲಿ ವಿವಿಧ ರೀತಿಯ ಚಿತ್ರಾಕಾರದ ರಂಗೋಲಿಯನ್ನು ಬಿಡಿಸಿ ಕಂಗೊಳಿಸುವಂತೆ ಮಾಡಿದ್ದೀರಿ ಎಂದು ಶ್ಲಾಘಿಸಿದರು.
ಪೂರ್ವಜರು ಬಳಸುತ್ತಿದ್ದ ಸೇರು, ಪಾವು, ಚವೆ ಮಣಿ, ಬುಗುರಿ, ಕಡಗೋಲು ಮುಂತಾದ ಎಲ್ಲಾ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿರುವುದು ಆಧುನಿಕ ಜಗತ್ತಿಗೆ ಪರಿಚಯಿಸಲು ಸಹಕಾರಿಯಾಗಿರುವುದರ ಜೊತೆಗೆ ಜಾನಪದ ಉತ್ಸವಕ್ಕೆ ಮೆರಗು ನೀಡಿದೆ ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ಜನಿಸಿದ ಕವಿಶೈಲಕ್ಕೆ ವಿದ್ಯಾರ್ಥಿಗಳಾದ ನೀವು ಹೋಗಲು ವಾಹನ ವ್ಯವಸ್ಥೆ ಮಾಡಲು ಭರವಸೆ ನೀಡಿದ ಅವರು, ಕುವೆಂಪುರವರ ಮನೆ ಮುಂದೆ ಬರೆದಿರುವ ಮನೆಮನೆ ನಾನು ಹುಟ್ಟಿದ ಮನೆ, ಮನೆಮನೆ ನಾನು ಆಡಿ ಬೆಳೆದ ಮನೆ, ನಡೆದಾಡುವಾಗ ಎತ್ತಿ ಬೆಳೆಸಿದ ಮನೆ, ಬುಗುರಿ, ಗೋಲಿ ಆಡಿದ ಮನೆ ಎಂದು ವರ್ಣಿಸಲಾಗಿದೆ ಎಂದು ಬಣ್ಣಿಸಿದರು.
ಜಾನಪದ ಸೊಗಡು, ಜಾನಪದ ಗೀತೆ, ಜಾನಪದ ಆಟಗಳು ಸರಳವಾದ ಕೆಲಸದ ಸಮಯದಲ್ಲಿ ತಾಯಂದಿರ ಬಾಯಿಂದ ಬಂದ ನುಡಿಮುತ್ತುಗಳು ಎಂದ ಶಾಸಕರು, ಕಬ್ಬಡ್ಡಿ, ಲಗೋರಿ, ಕುಂಟೆಬಿಲ್ಲೆ, ಖೋಖೋ, ಕೂಸುಮರಿ ಮುಂತಾದ ಆಟಗಳು ಭಾರತದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದು ಹೇಳಿದರು.
ಮೊದಲು ತಾವು ಜನಿಸಿದ ಧರ್ಮವನ್ನು ಗೌರವಿಸಬೇಕು. ಇನ್ನೊಂದು ಸಮುದಾಯದ ಧರ್ಮವನ್ನು ದ್ವೇಷ ಮಾಡದೇ ಇರುವುದು ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ.ದಾಮೋದರ್ಗೌಡ ವಹಿಸಿ ಮಾತನಾಡಿದರು. ನಗರಸಭೆ ಸದಸ್ಯ ಶಾದಬ್ ಆಲಂಖಾನ್, ಮಹೇಶ್ವರಪ್ಪ, ಮೂಡಲಗಿರಿಯಪ್ಪ, ಡಾ. ಶ್ರೀನಿವಾಸ್, ಹೇಮ ಮಾಲಿನಿ ಸಿ.ಎನ್, ದೀಕ್ಷಿತ್ ಕುಮಾರ್, ಮತ್ತು ಬೋಧಕರು, ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು. ಹಂಪಾಪುರದಿಂದ ಎತ್ತಿನ ಗಾಡಿಯನ್ನು ನಿಖಿಲ್ ಸಹೋದರರು ತಂದಿದ್ದು ವಿಶೇಷ ಗಮನ ಸೆಳೆಯಿತು.



