ಜಿಲ್ಲೆಯಲ್ಲಿ ಬಿಎಸ್ಎನ್ಎಲ್ ಸೇವೆಯನ್ನು ಇನ್ನಷ್ಟು ಉನ್ನತೀಕರಣಗೊಳಿಸಲು ಯೋಜಿಸಲಾಗಿದ್ದು, ಈ ಸಂಬಂಧ ಇಲಾಖೆಯ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳನ್ನು ನಗರಕ್ಕೆ ಕರೆಸಿ ಸಭೆ ನಡೆಸಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಶುಕ್ರವಾರ ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಬಿಎಸ್ಎನ್ಎಲ್ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು, 9 ತಾಲ್ಲೂಕುಗಳ ಜೆಟಿಓಗಳು, ಸಲಹಾ ಸಮಿತಿ ಸದಸ್ಯರುಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 2,56,456 ಬಿಎಸ್ಎನ್ಎಲ್ ಸಿಮ್ಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೊಂದು ವರ್ಷದಲ್ಲಿ ಎಲ್ಲಾ ಟವರ್ಗಳನ್ನು ಸುಸ್ಥಿತಿಗೆ ತಂದು ಜನರೇಟರ್, ಬ್ಯಾಟರಿ ಹಾಗೂ ವಿದ್ಯುತ್ ಸಂಪರ್ಕವನ್ನು ಸಮರ್ಪಕಗೊಳಿಸಿದಲ್ಲಿ ದುಪ್ಪಟ್ಟು ಸಿಮ್ಗಳಿಗೆ ಬೇಡಿಕೆ ಬರಬಹುದು. ಅದಕ್ಕೆ ಪೂರ್ವಭಾವಿ ತಯಾರಿಗಳನ್ನು ಮಾಡುತ್ತೇವೆ ಎಂದರು.
ಪ್ರತಿ ತಾಲ್ಲೂಕು ಮಟ್ಟದಲ್ಲಿ ಜೆಟಿಓಗಳು ಹಾಗೂ ನಾಮನಿರ್ದೇಶಿತ ಸದಸ್ಯರ ಸಮಕ್ಷಮದಲ್ಲಿ ಗ್ರಾಹಕರ ಕುಂದು ಕೊರತೆಗಳನ್ನು ಕೇಳಲಾಗುವುದು. ಈಗ ಇರುವ 217 ಟವರ್ಗಳ ಪೈಕಿ 171 ಕ್ಕೆ 4ಜಿ ಮಾಡಲು ಪ್ರಸ್ತಾವನೆ ಇದೆ. ಈ ಪೈಕಿ ಈಗಾಗಲೆ 165 ಟವರ್ಗಳು 4ಜಿ ಆಗಿ ಕಾರ್ಯ ನಿರ್ವಹಿಸುತ್ತಿವೆ. 6 ಟವರ್ಗಳಿಗೆ 4ಜಿ ಉಪಕರಣಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಇನ್ನೂ 46 ಟವರ್ಗಳಿಗೆ 4ಜಿ ಅಳವಡಿಸಬೇಕು ಎಂದು ಪ್ರಸ್ತಾವನೆ ಇದೆ ಎಂದು ತಿಳಿಸಿದರು.
ಈಗ ಜಿಲ್ಲೆಗೆ 78 ಹೊಸ ಬ್ಯಾಟರಿಗಳು ಮಂಜೂರಾಗಿವೆ. ಅದರಲ್ಲಿ 51 ಅಳವಡಿಕೆ ಆಗಿದೆ, 11 ಪ್ರಗತಿಯಲ್ಲಿದೆ 18 ಬ್ಯಾಟರಿಗಳು ಬರಬೇಕಿದೆ. ಇನ್ನೂ 25 ಕ್ಕೆ ಬೇಡಿಕೆ ಇಟ್ಟಿದ್ದೇವೆ ಎಂದು ತಿಳಿಸಿದರು.
ಎಲ್ಲಾ 217 ಟವರ್ಗಳು ಬ್ಯಾಟರಿ ಮತ್ತು ಜನರೇಟರ್ಗಳೊಂದಿಗೆ ವ್ಯವಸ್ಥಿತವಾಗಿ ಕೆಲಸ ಮಾಡುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ಹೊಸದಾಗಿ 28 ಟವರ್ಗಳು ಮಂಜೂರಾಗಿದ್ದು, 21 ಕಾರ್ಯಾರಂಭಗೊಂಡಿದೆ. 3 ಕ್ಕೆ ಸ್ಥಳ ನೀಡುವ ಕೆಲಸ ಆಗುತ್ತಿದೆ. ಉಳಿದವರನ್ನು ಮುಂದಿನ 15 ದಿನಗಳಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.
ಎಲ್ಲ ಟವರ್ಗಳಿಗೆ ವಿದ್ಯುತ್ ಸಂಪರ್ಕ ಕೊಡಿಸುವ ಸಂಬಂಧ ಮೆಸ್ಕಾಂ ಎಂಡಿ ಅವರೊಂದಿಗೆ ಚರ್ಚಿಸಿದ್ದೇವೆ. ನಿರಂತರ ಜ್ಯೋತಿಯನ್ನು ಇದಕ್ಕೆ ಕೊಡಬೇಕೆಂದು ಕೇಳಿದ್ದಾರೆ. ಅದಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು.
ಆನರೇಟರ್ಗಳನ್ನು ಪೂರ್ಣಪ್ರಮಾಣದಲ್ಲಿ ಅಳವಡಿಸಿದರೆ ಅನುಕೂಲವಾಗುತ್ತದೆ. ಜನರೇಟರ್ ಬೇಡಿಕೆ ಹೆಚ್ಚು ಮಾಡುತ್ತೇವೆ. ಗ್ರಾ.ಪಂ.ಗಳಲ್ಲಿ ಹೈಸ್ಪೀಡ್ ನೆಟ್ವರ್ಕ್ ಬಲ ಪಡಿಸಬೇಕಿದೆ. ಕೆಲವುಕಡೆ ಹೈಸ್ಪೀಡ್ ಸಂಪರ್ಕ ಸಿಗುತ್ತಿರಲಿಲ್ಲ ಮುಂದಿನ ಒಂದು ವಾರದಲ್ಲಿ ಎಲ್ಲಾ ಗ್ರಾ.ಪಂ.ಗಳಿಗೆ ಹೈಸ್ಪೀಡ್ ಸಂಕರ್ಪ ಕೊಡಿಸುವುದಾಗಿ ಅಧಿಕಾರಿಗಳು ಒಪ್ಪಿದ್ದಾರೆ ಎಂದರು.
ಸಂವೃದ್ಧಿ ಗ್ರಾಮ ಪಂಚಾಯ್ತಿ ಎನ್ನುವ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಈ ಎಲ್ಲಾ ಪಂಚಾಯ್ತಿಗಳಿಗೆ ಹೈಸ್ಪೀಡ್ ಸಂಪರ್ಕ ಕಲ್ಪಿಸಲಾಗುವುದು. ಒಟ್ಟಾರೆ ಬಿಎಸ್ಎನ್ಎಲ್ ಆಧುನೀಕರಣ ಮತ್ತು ಸಂಪರ್ಕದ ಕೊರತೆ ನಿವಾರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕದಾದ್ಯಂತ ಒಟ್ಟು 50 ಸಾವಿರ ಕಿ.ಮೀ. ಹೊಸ ಕೇಬಲ್ ಅಳವಡಿಸಲು ಮಂಜೂರಾತಿಗೆ ಪ್ರಸ್ತಾವನೆ ಹೋಗಿತ್ತು. ಈ ಪೈಕಿ 31 ಸಾವಿರ ಕಿ.ಮೀ. ಕೇಬಲ್ಗೆ ಮಂಜೂರಾತಿ ಸಿಕ್ಕಿದೆ. ಇದಿಷ್ಟೂ ಅಳವಡಿಸಿದಲ್ಲಿ ಅನುಕೂಲವಾಗಲಿದೆ ಎಂದರು.
ಮೂಡಿಬಿದರೆ, ಕಳಸಾಪುರ, ತರೀಕೆರೆ ತಾಲ್ಲೂಕಿನ ಚೀಕನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಪರ್ಕದ ತೊಂದರೆ ಇದ್ದು, ಅದೆಲ್ಲವನ್ನೂ ನಾಮ ನಿರ್ದೇಶಿತ ಸದಸ್ಯರು ಇಂದು ಸಭೆಯಲ್ಲಿ ತಿಳಿಸಿದ್ದಾರೆ. ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಳೆ ಸಂದರ್ಭದಲ್ಲಿ ಹಲವು ದಿನಗಳ ಕಾಲ ವಿದ್ಯುತ್ ಕಡಿತಗೊಂಡ ಪರಿಣಾಮ ಮತ್ತು ಭೂ ಕುಸಿತಗೊಮಡು ಟವರ್ಗಳಿಗೆ ಸಮಸ್ಯೆ ಆಗಿರುವುದರಿಂದ ಎಲ್ಲರೂ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಜೆಟಿಓ ಗಳಿಗೆ ನಿರ್ದೇಶನ ನೀಡಲಾಗಿದೆ. ಪದೇ ಪದೇ ಗ್ರಾಹಕರಿಗೆ ತೊಂದರೆ ಆದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ ಎಂದು ತಿಳಿಸಿದರು.
ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಆಲೆಕಾನು ಹೊರಟ್ಟಿ ಗ್ರಾಮದಲ್ಲಿ ಅಳವಡಿಸಲಾಗಿರುವ ಸ್ಯಾಟಲೈಟ್ ಟವರ್ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ತುಂಬಾ ಸಂಪರ್ಕದ ಸಮಸ್ಯೆ ಇರುವ ನಕ್ಸಲ್ ಬಾಧಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಅಲ್ಲಿಗೆ ಸ್ಯಾಟಲೈಟ್ ಸಂಪರ್ಕ ಕೊಡುವ ಆಲೋಚನೆ ಇದೆ. ಈಗಾಗಲೇ ಏಳೆಂಟು ಟವರ್ಗಳಿಗೆ ಬೇಡಿಕೆ ಇದೆ. ಸಾಧಕ-ಬಾಧಕ ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಸ್ಯಾಟಲೈಟ್ ಟವರ್ಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಭದ್ರತೆ ದೃಷ್ಠಿಯಿಂದ ತೊಂದರೆ ಆಗುತ್ತದೆ ಎನ್ನುವ ಪ್ರಮೇಯ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಅವಕಾಶಗಳಿದ್ದಲ್ಲಿ ನಮ್ಮ ಜಿಲ್ಲೆಗೆ ಆಧ್ಯತೆ ಮೇರೆಗೆ ಪ್ರಾಶಸ್ತ್ಯ ಕೊಡಬೇಕು ಎಂದು ಕೇಳಿದ್ದೇವೆ ಎಂದರು.
ಬಿಎಸ್ಎನ್ಎಲ್ ಸಂಪರ್ಕ ಪಡೆದ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಪ್ರತಿದಿನ 100 ರಿಂದ 200 ಬೇರೆ ಸಿಮ್ನ ಗ್ರಾಹಕರು ಬಿಎಸ್ಎನ್ಎಲ್ಗೆ ಪೋರ್ಟ್ ಆಗುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಮುಖಂಡರುಗಳಾದ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಸೇರಿದಂತೆ ಬಿಎಸ್ಎನ್ಎಲ್ ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.



