ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಬೇಕೆಂಬ ಉದ್ದೇಶದೊಂದಿಗೆ ಟೂಲ್ಕಿಟ್ ವಿತರಣೆಯಂತಹ ಸಾರ್ವತ್ರಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಅವರು ಚಿಕ್ಕಮಗಳೂರು ನಗರಸಭೆ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಶ ಯೋಜನೆಯಾದ ಪಿ.ಎಂ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ಟೂಲ್ಕಿಟ್ ವಿತರಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವಿವಿಧ 18 ಕುಲ ಕಸುಬುಗಳ ಟೂಲ್ಕಿಟ್ಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೌಲಭ್ಯಗಳೇ ಆದರೂ ಎಲ್ಲರೂ ಒಟ್ಟಾಗಿ ಜನರಿಗೆ ತಲುಪಿಸಬೇಕು, ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕ ಸಬಲರಾಗಬೇಕೆಂದು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ ವಿಶ್ವಕರ್ಮ ಯೋಜನೆ ಅನುಷ್ಠಾನಕ್ಕೂ ಮೊದಲು 18 ವೃತ್ತಿಪರ ಕುಲ ಕಸುಬುಗಳನ್ನೊಳಗೊಂಡ ಈ ಕೆಲಸ ಕಾರ್ಯಗಳಿಗೆ ಆರ್ಥಿಕ ಶಕ್ತಿ ತುಂಬಿ, ತರಬೇತಿ ಕೊಟ್ಟು, ಸಾಲ ಸೌಲಭ್ಯ ನೀಡಿ ಸಲಕರಣೆಗಳನ್ನು ಕೊಟ್ಟು ಆಯಾ ವೃತ್ತಿಗೆ ಉತ್ತೇಜನ ನೀಡುವ ಸಲುವಾಗಿ ಸ್ವ-ಉದ್ಯೋಗ ಸ್ಥಾಪಿಸುವ ಆಲೋಚನೆಯ ಉದ್ದೇಶವೆ ವಿಶ್ವಕರ್ಮ ಯೋಜನೆ ಎಂದರು.
ಚಮ್ಮಾರಿಕೆ, ಕುಂಬಾರಿಕೆ, ಮೀನುಗಾರಿಕೆ, ಗಾರೆ ಕೆಲಸ ಸೇರಿದಂತೆ 18 ವಿವಿಧ ಕುಲ ಕಸುಬುಗಳಿಗೆ ಉತ್ತೇಜನ ಕೊಟ್ಟು ಆಧ್ಯತೆ ನೀಡಿದ್ದಾರೆ, ಇದಕ್ಕಾಗಿ 13 ಸಾವಿರ ಕೋಟಿ ರೂಗಳನ್ನು ಬ್ಯಾಂಕ್ಗಳಿಗೆ ಭದ್ರತೆಗಾಗಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವಿಶ್ವಕರ್ಮ ಯೋಜನೆಯನ್ನು ಅನುಷ್ಠಾನ ಮಾಡುತ್ತಿರುವ ಕಾಲಘಟ್ಟದಲ್ಲಿ ಇಂದು ನಾವು ಸುಮಾರು 15 ಜನರಿಗೆ ಉಚಿತವಾಗಿ ಟೂರ್ಕಿಟ್ ವಿತರಣೆ ಮಾಡುತ್ತಿದ್ದೇವೆ, ಶಿಷ್ಯ ವೇತನದೊಂದಿಗೆ ತರಬೇತಿ ಪಡೆದು ಫಲಾನುಭವಿಗಳು ಉದ್ಯೋಗ ಸ್ಥಾಪಿಸಲು ಅದಕ್ಕೆ ಪೂರಕವಾದ ಟೂಲ್ಕಿಟ್ಟನ್ನು ನೀಡುತ್ತಿದ್ದೇವೆ ಎಂದರು.
ಪ್ರಥಮವಾಗಿ ಶೇ 5.ರ ಬಡ್ಡಿ ದರದಲ್ಲಿ 1 ಲಕ್ಷ ರೂ ಸಾಲ ಸೌಲಭ್ಯವನ್ನು ನೀಡಿ 18 ತಿಂಗಳ ಕಾಲಾವಕಾಶದೊಳಗೆ ಮರು ಪಾವತಿ ಮಾಡಿದ ಫಲಾನುಭವಿಗಳಿಗೆ ಎರಡರಿಂದ ಮೂರು ಲಕ್ಷ ರೂ ಸಾಲ ವಿತರಿಸುವ ಯೋಜನೆ ಇದಾಗಿದೆ ಎಂದು ವಿವರಿಸಿದರು.
ಕುಂಬಾರರ ಕುಲ ಕಸುಬು ನಶಿಸಿ ಹೋಗಬಾರದೆಂಬ ಕಾರಣಕ್ಕೆ ಅಡುಗೆ ಮಾಡುತ್ತಿದ್ದ ಮಡಿಕೆ ಇಂದು ಅಲಂಕಾರಿಕ ಮಡಿಕೆಯಾಗಿ ಪರಿವರ್ತನೆಗೊಂಡು ವಿದೇಶಗಳಿಗೂ ರಫ್ತು ಮಾಡುವ ಮೂಲಕ ಕುಂಬಾರರನ್ನು ಆರ್ಥಿಕ ಸಬಲರನ್ನಾಗಿ ಮಾಡಲು ಗುರಿ ಹೊಂದಲಾಗಿದೆ ಎಂದು ಹೇಳಿದರು.
ವೃತ್ತಿಪರತೆಯಲ್ಲಿ ವಯಸ್ಸಾದವರಿಗೆ ಆಧುನಿಕ ಹೇರ್ ಕಟಿಂಗ್ ವ್ಯವಸ್ಥೆಗಳಲ್ಲಿ ತೊಂದರೆಯಾಗುತ್ತಿರುವುದನ್ನು ಮನಗಂಡು, ಕ್ಷೌರಿಕನಿಗೆ ಆಧುನಿಕತೆಗೆ ತಕ್ಕಂತೆ 1 ವಾರಗಳ ಕಾಲ ತರಬೇತಿ ನೀಡಲಾಗುವುದು, ಮೀನುಗಾರಿಕೆ ಮಾಡುವವರಿಗೂ ಇದೇ ಮಾದರಿ ಅನುಸರಿಸಲಾಗುತ್ತದೆ ಎಂದು ತಿಳಿಸಿದರು.
ಇಲ್ಲಿಯ ವರೆಗೆ 2153 ಫಲಾನುಭವಿಗಳಿಗೆ ತಲಾ 1 ಲಕ್ಷ ರೂಗಳಂತೆ ಅವರ ಖಾತೆಗೆ ಹಾಕಿ ಸಾಲ ಸೌಲಭ್ಯ ನೀಡಲಾಗಿದೆ, ಜಿಲ್ಲೆಯಲ್ಲಿ 18, 40, 59000 ರೂ ಪಾವತಿಸಲಾಗಿದೆ, ಪ್ರಥಮ ಹಂತದಲ್ಲಿ 1704 ಜನರಿಗೆ ಸಾಲ ನೀಡಲಾಗಿದ್ದು 619 ಫಲಾನುಭವಿಗಳಿಗೆ ಇಂದು ಅಂಚೆ ಇಲಾಖೆ ಮೂಲಕ ಟೂಲ್ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದರು.
ಉಳಿದ 5803 ಫಲಾನುಭವಿಗಳಿಗೆ ಕಿಟ್ ಹಾಗೂ ಸಾಲ ಸೌಲಭ್ಯವನ್ನು ತ್ವರಿತವಾಗಿ ವಿತರಿಸುವಂತೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ, ಎಸ್.ಎಲ್ ಬೋಜೇಗೌಡ, ಬಿಜೆಪಿ ರೈತ ಮೋರ್ಚಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಸಿ ಕಲ್ಮರುಡಪ್ಪ, ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್, ಉಪಾಧ್ಯಕ್ಷೆ ಅನುಮಧುಕರ್ ಪೌರಾಯುಕ್ತ ಬಿ.ಸಿ ಬಸವರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಫಲಾನುಭವಿಗಳು ಭಾಗವಹಿಸಿದ್ದರು.



