ಕಳಸ ತಾಲ್ಲೂಕಿನ ಮರಸಣಿಗೆ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ತಿಂಗಳ ಗೌರವಧನವನ್ನುಭಾರತೀಯ ಸೇನೆಯ ಯೋಧನಿಗೆ ನೀಡಿ ಸನ್ಮಾನಿಸಿ ಮಾದರಿಯಾಗಿದ್ದಾರೆ.
ಇತ್ತೀಚೆಗೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸರಳವಾದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಯೋಧ ರಾಜಪ್ಪ ದಂಪತಿಗಳನ್ನ ಗೌರವಿಸಲಾಯಿತು.
ಕಳಸ ಹಳುವಳ್ಳಿ ಮೂಲದ ರಾಜಪ್ಪನವರು ಇತ್ತೀಚೆಗೆ ನಡೆದ ಅಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಗಾಯಗೊಂಡು ಸ್ವಗ್ರಾಮಕ್ಕೆ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾ. ಪಂ.ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷ ಮೋಹನ್, ಸದಸ್ಯರಾದ ವಿಶ್ವನಾಥ್, ವಿಜಯ ಗೌಡ, ವಿನ್ಸೆಂಟ್, ಗುಲಾಬಿ, ಪೌಲಿನ, ಪಿಡಿಒ ಸುಪ್ರಿಯಾ, ಶಾಲಾ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಇದ್ದರು.
ಕಳಸ ತಾಲೂಕಿನ ಹಳ್ಳುವಳ್ಳಿಯ ಯೋಧ ರಾಜಪ್ಪ ಅವರು ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ, ಗಾಯಗೊಂಡಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ವೈದ್ಯಕೀಯ ರಜೆಯ ಮೇರೆಗೆ ಹುಟ್ಟೂರಿಗೆ ಆಗಮಿಸಿದ್ದಾರೆ. ಅವರು ಊರಿಗೆ ಬಂದಿಳಿಯುತ್ತಿದ್ದಂತೆ ಕಳಸ ಪಟ್ಟಣದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಅವರಿಗೆ ಅದ್ದೂರಿಯಾಗಿ ಸ್ವಾಗತಿಸಿ, ಸನ್ಮಾನ ಮಾಡಿದ್ದರು. ಇದೀಗ ಮರಸಣಿಗೆ ಗ್ರಾ.ಪಂ. ಸದಸ್ಯರು ತಮ್ಮ ಒಂದು ತಿಂಗಳ ಗೌರವಧನವನ್ನು ಯೋಧರಿಗೆ ನೀಡುವ ಮೂಲಕ ತಮ್ಮ ದೇಶಪ್ರೇಮ ಮೆರೆದಿದ್ದಾರೆ.



