ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಪೈಪ್ಲೈನ್ಗಾಗಿ ಪಟ್ಟಣದ ಅಡ್ಯಂತಾಯ ರಂಗಮಂದಿರದಿಂದ ಪೊಲೀಸ್ ಠಾಣೆವರೆಗೆ ತೋಡಿರುವ ಚರಂಡಿಯಿಂದ ವಾಹನಗಳು ಗುಂಡಿಗೆ ಬಿದ್ದು, ಜಖಂಗೊಳ್ಳುತ್ತಿರುವುದರಿಂದ ವಾಹನ ಸವಾರರು ಪ.ಪಂ. ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನಾಧ್ಯಂತ ಈಗಾಗಲೇ ಜೆಜೆಎಂ ಕಾಮಗಾರಿಯಿಂದ ಗುಂಡಿಗಳಿಗೆ ವಾಹನಗಳು ಬೀಳುತ್ತಿದ್ದರೆ, ಇದೀಗ ಪಟ್ಟಣದ ರಸ್ತೆ ಬದಿ ಅಮೃತ್ ಯೋಜನೆಯಲ್ಲಿ ಪೈಪ್ಲೈನ್ ಅಳವಡಿಸಲು ಭಾನುವಾರ ಪಟ್ಟಣದ ಟ್ಯಾಕ್ಸಿ ಸ್ಟಾಂಡ್ನಿಂದ ಪೊಲೀಸ್ ಠಾಣೆವರೆಗೆ ಸುಮಾರು 800 ಮೀಟರ್ ಗುಂಡಿ ತೋಡಲಾಗಿತ್ತು. ಅದನ್ನು ಸರಿಯಾಗಿ ಮುಚ್ಚಿಲ್ಲ. ಅಲ್ಲದೇ ಇಂತಹ ಕಾಮಗಾರಿ ಮಳೆಯಲ್ಲಿ ನಡೆಸಿದರೆ ಉಂಟಾಗುವ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಎಂಜಿನಿಯರ್ ಹಾಗೂ ಗುತ್ತಿಗೆದಾರರ ಯಡವಟ್ಟಿನಿಂದ ವಾಹನಗಳು ನಿತ್ಯ ಗುಂಡಿಗೆ ಬಿದ್ದು ಜಖಂಗೊಳ್ಳುವಂತಾಗಿದೆ.
ಈಗಾಗಲೇ ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆಯಿಂದಾಗಿ ವಾಹನಗಳ ನಿಲುಗಡೆಗೆ ತೊಡಕುಂಟಾಗಿದೆ. ಈಗ ಗುಂಡಿ ತೋಡಿರುವ ಸ್ಥಳದಲ್ಲಿ ನಿತ್ಯ 50ಕ್ಕೂ ಅಧಿಕ ವಾಹನ ನಿಲುಗಡೆಯಾಗುತ್ತಿತ್ತು. ಇದೀಗ ಗುಂಡಿ ತೋಡಿದ್ದರಿಂದ ವಾಹನ ಪಾರ್ಕಿಂಗ್ಗೆ ಸಮಸ್ಯೆ ಎದುರಾಗಿದೆ. ಅಲ್ಲದೇ ಮಣ್ಣು ಗಟ್ಟಿಯಾಗಿದೆ ಎಂದು ಪಾರ್ಕಿಂಗ್ ಮಾಡಲು ಹೋದ ವಾಹನಗಳೆಲ್ಲೇ ಗುಂಡಿಗೆ ಬಿದ್ದು, ಜಖಂಗೊಳ್ಳುತ್ತಿದೆ. ಇಂತಹ ಅವೈಜ್ಞಾನಿಕ ಕಾಮಗಾರಿ ನಡೆಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



