ದಿನಾಂಕ 30/09/2025 ರಂದು ಬಿ.ಎಸ್ ಜಯರಾಮ್ ಅಧ್ಯಕ್ಷರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಇವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯ ನಡಾವಳಿ.
ಸ್ವಾಗತ: ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಮೂಡಿಗೆರೆ ರವರು ಹಾಜರಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರುಗಳಿಗೆ ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳಿಗೆ ಸ್ವಾಗತ ಕೋರಿದರು.
ಶ್ರೀ ಎಸ್.ಎಲ್. ಭೈರಪ್ಪ ಹಿರಿಯ ಸಾಹಿತಿಗಳು ನಿಧನರಾದ ಹಿನ್ನಲೆಯಲ್ಲಿ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಬಿ.ಎಸ್. ಜಯರಾಮ್ ಮಾನ್ಯ ಅಧ್ಯಕ್ಷರು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರುಗಳಿಗೆ ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳಿಗೆ ಸ್ವಾಗತ ಕೋರಿದರು.
ತಾಲ್ಲೂಕಿನಲ್ಲಿ ಅನರ್ಹ ಬಿ.ಪಿ.ಎಲ್. ಕಾರ್ಡ್ಗಳು ರದ್ದುಗೊಂಡಿರುವುದರಿಂದ ಸಾರ್ವಜನಿಕರಿಗೆ ಗೊಂದಲ ಉಂಟಾಗಿದ್ದು, ಈ ಬಗ್ಗೆ ಸಭೆಗೆ ಮಾಹಿತಿ ನೀಡುವಂತೆ ಆಹಾರ ಶಿರಸ್ತೇದಾರರಿಗೆ ತಿಳಿಸಿದರು.
ಅನ್ನಭಾಗ್ಯ ಯೋಜನೆ:
ಆಹಾರ ಶಿರಸ್ತೇದಾರರು ಸಭೆಗೆ ಪ್ರಗತಿ ವರದಿ ಮಂಡಿಸಿದರು. ಚಿಕ್ಕಮಗಳೂರು ಜಿಲ್ಲೆಯಾದ್ಯಂತ 12000 ಅನರ್ಹ ಬಿ.ಪಿ.ಎಲ್. ಕಾರ್ಡ್ಗಳು ಪತ್ತೆಯಾಗಿರುತ್ತದೆ. ಮೂಡಿಗೆರೆ ತಾಲ್ಲೂಕಿನಲ್ಲಿ 1394 ಅನರ್ಹ ಬಿ.ಪಿ.ಎಲ್. ಕಾರ್ಡ್ ಗಳು ಪತ್ತೆಯಾಗಿದ್ದು, 100 ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ. ಬಿ.ಪಿ.ಎಲ್. ಕಾರ್ಡ್ ಮಾನದಂಡದ ಪ್ರಕಾರ ವಾರ್ಷಿಕ ಆದಾಯ ರೂ. 1.20 ಲಕ್ಷ ಒಳಗೆ ಇರಬೇಕು. ಪಡಿತರ ಚೀಟಿಯಲ್ಲಿ ಹೆಸರು ಇರುವವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಅವರ ಆದಾಯ ತಿಂಗಳಿಗೆ ರೂ.50000 ಇರುವುದರಿಂದ ಬಿ.ಪಿ.ಎಲ್. ಕಾರ್ಡ್ ರದ್ದುಗೊಂಡಿರುವುದಾಗಿ ತಿಳಿಸಿದರು. ಹಾಗೂ 30*40 ಅಳತೆ ಸೈಟ್ ಹೊಂದಿದ್ದಲ್ಲಿ, 4 ಚಕ್ರದ ವಾಹನಗಳಿಗೆ ವೈಟ್ ಬೋರ್ಡ್ ಇದ್ದಲ್ಲಿ, ಮೈಕ್ರೊ ಫೈನಾನ್ಸ್ನಿಂದ ಸಾಲ ಪಡೆದುಕೊಂಡಿರುವುದರಿಂದ ಅವರ ಬಿ.ಪಿ.ಎಲ್. ಕಾರ್ಡ್ಗಳು ರದ್ದುಗೊಂಡಿರುವುದಾಗಿ ಸಭೆಗೆ ಮಾಹಿತಿ ನೀಡಿದರು.
ವಿವಾಹವಾಗಿ ಹೋದ ಹೆಣ್ಣುಮಗಳ ಹೆಸರು ಕಾರ್ಡ್ನಲ್ಲಿ ಇದ್ದಲ್ಲಿ, ಅವರ ಆದಾಯವನ್ನು ಪರಿಗಣಿಸಿ ಬಿ.ಪಿ.ಎಲ್. ಕಾರ್ಡ್ ರದ್ದುಪಡಿಸಲಾಗಿರುತ್ತದೆ. ಅಂತವರು ಕಾರ್ಡ್ ನಲ್ಲಿ ಹೆಣ್ಣುಮಗಳ ಹೆಸರು ಡೀಲೀಟ್ ಮಾಡಿಸಿ, 1 ಕೆ.ಜಿ. ಅಕ್ಕಿಗೆ ದಂಡದ ಮೊತ್ತ ರೂ.36 ಪಾವತಿಸಿ ಕಾರ್ಡ್ ಉಳಿಸಿಕೊಳ್ಳಬಹುದಾಗಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಬಿ.ಎಸ್. ಜಯರಾಮ್ ಮಾನ್ಯ ಅಧ್ಯಕ್ಷರು ಮಾತನಾಡುತ್ತಾ, ನ್ಯಾಯಬೆಲೆ ಅಂಗಡಿಯಲ್ಲಿ ಬಿ.ಪಿ.ಎಲ್. ಕಾರ್ಡ್ ರದ್ದುಪಡಿಸಿರುವ ಮಾನದಂಡಗಳ ಫಲಕ ಹಾಕುವಂತೆ ಹಾಗೂ ಅನರ್ಹ ಫಲಾನುಭವಿಗಳು ಸ್ವಯಂ ಪ್ರೇರಿತವಾಗಿ ಕಾರ್ಡ್ಗಳನ್ನು ಹಿಂದಿರುಗಿಸುವಂತೆ ಸೂಚನಾ ಫಲಕವನ್ನು ಹಾಕುವಂತೆ ಆಹಾರ ಶಿರಸ್ತೇದಾರರಿಗೆ ಸೂಚಿಸಿದರು.
ಭರತ್ ಹಾಗೂ ಶ್ರೀನಿವಾಸ್ ಸದಸ್ಯರುಗಳು ಮಲೆನಾಡು ಪ್ರದೇಶದಲ್ಲಿ 2 ಹೆಕ್ಟೇರ್ ಜಮೀನು ಹೊಂದಿರುವವರ, 4 ಚಕ್ರ ವಾಹನ ಹೊಂದಿರುವವರ ಹಾಗೂ ಮೈಕ್ರೊ ಫೈನಾನ್ಸ್ ನಿಂದ ಸಾಲವನ್ನು ಪಡೆದವರ ಬಿ.ಪಿ.ಎಲ್. ಕಾರ್ಡ್ ಗಳನ್ನು ರದ್ದುಪಡಿಸಬಾರದೆಂದು ಕ್ರಮವಹಿಸಲು ಸಭೆಯಲ್ಲಿ ಕೋರಿದರು.
ಗೃಹಜ್ಯೋತಿ ಯೋಜನೆ:
ಇಲಾಖಾಧಿಕಾರಿಗಳು ಗೃಹಜ್ಯೋತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 22242 ಗೃಹಜ್ಯೋತಿ ಫಲಾನುಭವಿಗಳು ಇದ್ದು, ಸರ್ಕಾರದಿಂದ ರೂ. 9560746 ಅನುದಾನ ಬಿಡುಗಡೆಯಾಗಿರುತ್ತದೆ. ಹಾಗೂ ಸರ್ಕಾರದ ಆದೇಶದಂತೆ 128 ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಹಾಗೂ ಅಂಗನವಾಡಿ ಕೇಂದ್ರಗಳನ್ನು ಗೃಹಜ್ಯೋತಿ ಯೋಜನೆಗೆ ಒಳಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಗೃಹಜ್ಯೋತಿ ಯೋಜನೆಯಲ್ಲಿ ಅಧಿಕ ವಿದ್ಯುತ್ ಬಳಸಿರುವ ಫಲಾನುಭವಿಗಳ ಸಂಖ್ಯೆ 6927 ಇದ್ದು, ರೂ. 291892 ಬಿಲ್ ಪಾವತಿಸಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಮನೆಗೆ ಇ-ಸ್ವತ್ತು ಇಲ್ಲದಿದ್ದಲ್ಲಿ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಿಲ್ಲವೆಂದು ಗ್ರಾಮ ಪಂಚಾಯಿತಿಯಿಂದ NOC ತಂದಲ್ಲಿ ವಿದ್ಯುತ್ ಸಂಪರ್ಕ ನೀಡುವುದಾಗಿ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಬಿ.ಎಸ್. ಜಯರಾಮ್ ಅಧ್ಯಕ್ಷರು ಮಾತನಾಡುತ್ತಾ, ಇ-ಸ್ವತ್ತು ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಇ-ಸ್ವತ್ತು ನೀಡಿದ ಕೂಡಲೇ ವಿದ್ಯುತ್ ಸಂಪರ್ಕ ನೀಡುವಂತೆ ಅಧಿಕಾರಿಯವರಿಗೆ ಸೂಚಿಸಿದರು.
ಯುವನಿಧಿ ಯೋಜನೆ: ಬಿ.ಎಸ್. ಜಯರಾಮ್ ಮಾನ್ಯ ಅಧ್ಯಕ್ಷರು ಮಾತನಾಡುತ್ತಾ, ಪದವಿ ಪಡೆದ 3077 ವಿಧ್ಯಾರ್ಥಿಗಳು ಹಾಗೂ ಡಿಪ್ಲೊಮೋ 39 ವಿಧ್ಯಾರ್ಥಿಗಳು ಯುವನಿಧಿ ಯೋಜನೆಯ ಸದುಪಯೋಗ ಪಡೆಯುತ್ತಿದ್ದು, ಸರ್ಕಾರದಿಂದ ರೂ.9289500/- ಅನುದಾನ ಪಾವತಿಯಾಗಿರುತ್ತದೆ. ಯುವನಿಧಿ ಫಲಾನುಭವಿಗಳು ಕೌಶಾಲ್ಯಾಭಿವೃದ್ದಿ ತರಭೇತಿಗೆ ಕಡ್ಡಾಯವಾಗಿ ಹಾಜರಾಗಬೇಕು. ಹಾಜರಾಗದಿದ್ದಲ್ಲಿ ಅವರನ್ನು ಯೋಜನೆಯಿಂದ ಕೈ ಬಿಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ಈ ಯೋಜನೆಯ ಫಲಾನುಭವಿಗಳಿಗೆ ವಿದೇಶದಲ್ಲಿ ತರಭೇತಿ ನೀಡುವ ವ್ಯವಸ್ಥೆ ಇರುವುದಾಗಿ ಮಾಹಿತಿ ನೀಡಿದರು.
ಶಕ್ತಿ ಯೋಜನೆ:
ಇಲಾಖಾಧಿಕಾರಿಗಳು ಶಕ್ತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಸೆಪ್ಟೆಂಬರ್-2025 ರ ಮಾಹೆಯಲ್ಲಿ 273930 ಫಲಾನುಭವಿಗಳು ಪ್ರಯಾಣಿಸಿದ್ದು, ರೂ.12886336 ಸರ್ಕಾರದಿಂದ ಅನುದಾನ ಬಿಡುಗಡೆಯಾಗಿರುವುದಾಗಿ ಸಭೆಗೆ ತಿಳಿಸಿದರು.
ಶ್ರೀ ಅರುಣ್ ಮಾನ್ಯ ಸದಸ್ಯರು ಮಾತನಾಡುತ್ತಾ, ಮೂಡಿಗೆರೆಯಿಂದ ಗುತ್ತಿಗೆ ಹೋಗುವ ಬಸ್ ಪ್ರಯಾಣಿಕರನ್ನು ಗುತ್ತಿಯಿಂದ ಸ್ವಲ್ಪ ದೂರದಲ್ಲಿ ಇಳಿಸಿ, ಹೆಸಗೋಡು ಗ್ರಾಮಕ್ಕೆ ಹೋಗಿ ವಾಪಸ್ ಬಂದು ಗುತ್ತಿಯಲ್ಲಿ ಪುನಃ ಪ್ರಯಾಣಿಕರನ್ನು ಹತ್ತಿಸಿಕೊಂಡು ಗುತ್ತಿ ಗ್ರಾಮಕ್ಕೆ ಹೋಗುತ್ತಿದ್ದು, ಮೊದಲು ಗುತ್ತಿ ಗ್ರಾಮಕ್ಕೆ ಹೋಗಿ ನಂತರ ಹೆಸಗೋಡು ಗ್ರಾಮಕ್ಕೆ ಹೋಗುವಂತೆ ಕ್ರಮವಹಿಸಲು ಸಾರಿಗೆ ಇಲಾಖೆ ಅಧಿಕಾರಿಯವರಿಗೆ ತಿಳಿಸಿದರು.
ಮೂಡಿಗೆರೆಯಿಂದ ಬೆಂಗಳೂರಿಗೆ ರಾಜಹಂಸ. ಪಲ್ಲಕ್ಕಿ ಯಂತಹ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಖಾಸಗಿ ಬಸ್ ಗಳು ದುಪ್ಪಟ್ಟು ದರ ವಿಧಿಸುತ್ತಿದ್ದು ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದಾಗಿ ಸಭೆಯಲ್ಲಿ ಚರ್ಚಿಸಲಾಯಿತು. ಕೂಡಲೇ ಮೂಡಿಗೆರೆಯಿಂದ ಬೆಂಗಳೂರಿಗೆ ರಾಜಹಂಸ, ಪಲ್ಲಕ್ಕಿ, ಸ್ಲೀಪರ್ ಕೋಚ್ ಬಸ್ ವ್ಯವಸ್ಥೆ ಮಾಡುವಂತೆ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಗೃಹಲಕ್ಷ್ಮಿ ಯೋಜನೆ:
ಇಲಾಖಾಧಿಕಾರಿಗಳು ಗೃಹಲಕ್ಷ್ಮಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 29543 ಗೃಹಲಕ್ಷ್ಮಿ ಫಲಾನುಭವಿಗಳು ಇದ್ದು, ಇದರಲ್ಲಿ 29106 ಫಲಾನುಭವಿಗಳಿಗೆ ಯೋಜನೆಯ ಹಣ ಬರುತ್ತಿರುವುದಾಗಿ ಹಾಗೂ ಯೋಜನೆಯಿಂದ ಬಾಕಿ ಉಳಿದ ರೇಷನ್ ಕಾರ್ಡ್ NPCI 38, IT/GST 210, ತಿದ್ದುಪಡಿ/ಮರಣ 189 ಒಟ್ಟು 437 ರೇಷನ್ ಕಾರ್ಡ್ ಇದ್ದು,
ಐಟಿ/ಜಿ.ಎಸ್.ಟಿ. ಸಮಸ್ಯೆಯಿಂದ ಉಳಿದ ಫಲಾನುಭವಿಗಳನ್ನು ಗೃಹಲಕ್ಷ್ಮಿ ಯೋಜನೆಗೆ ಒಳಪಡಿಸಲು ತೊಂದರೆಯಾಗುತ್ತಿರುವುದಾಗಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಐಟಿ/ಜಿ.ಎಸ್.ಟಿ. ಪಾವತಿಸುವವರಿಗೆ ಸೂಕ್ತ ಹಿಂಬರಹ ನೀಡುವಂತೆ ಸೂಚನೆ ನೀಡಿರುವುದಾಗಿ
ಸಭೆಗೆ ಮಾಹಿತಿ ನೀಡಿದರು.
ಇತರೆ ವಿಷಯಗಳು:
ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಜಿಲ್ಲಾ ಮಟ್ಟದಲ್ಲಿ ನಡೆಸಲು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾನ್ಯ ಅಧ್ಯಕ್ಷರು ಸಭೆಗೆ ತಿಳಿಸಿದರು.
ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಅಧ್ಯಕ್ಷರು ಸದಸ್ಯ ಕಾರ್ಯದರ್ಶಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.



