ಮೂಡಿಗೆರೆ ಸರ್ವೆ ಇಲಾಖೆ ಸೂಪರ್ ವೈಸರ್ ಯಿಂದಾಗಿ ರೈತರ ಯಾವುದೇ ಕೆಲಸವಾಗುತ್ತಿಲ್ಲ. ಪ್ರತಿಭಟಿಸಿದರೂ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಸೂಪರ್ವೈಸರ್ ಅವರೇ ಸರ್ವೆ ಇಲಾಖೆಯ ಗೌರವ ಉಳಿಸಿ ರೈತರ ಕೆಲಸ ಮಾಡಿಕೊಡುವಂತೆ ನಾಮಫಲಕ ಹಿಡಿದು ಶುಕ್ರವಾರ ರೈತಸಂಘದ ಮುಖಂಡರು ವಿನೂತನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಂಜುನಾಥಗೌಡ ಮಾತನಾಡಿ, ಪೋಡಿ ಮುಕ್ತ ತಾಲೂಕಿಗಾಗಿ ಬಾಕಿ ಇರುವ ಪ್ರಕರಣಗಳನ್ನು ಕೂಡಲೇ ಇತ್ಯರ್ಥ ಪಡಿಸುವಂತೆ ಕಳೆದ ತಿಂಗಳುಇ ನೇಗಿಲು, ನೊಗ ಹೊತ್ತು, ತಮಟೆ ಬಾರಿಸುವ ಮೂಲಕ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ತಹಸೀಲ್ದಾರ್ ಎಸ್.ಅಶ್ವಿನಿ ಅವರು ಹಾಗೂ ಭೂಮಾಪನಾ ಇಲಾಖೆಯ ಅಧಿಕಾರಿಯೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ತಿಂಗಳು ಕಳೆದರೂ ಯಾವ ಕೆಲಸವೂ ಮುಂದುವರೆದಿಲ್ಲ ಎಂದು ದೂರಿದರು.
ನಂತರ ಸರ್ವೆ ಇಲಾಖೆ ಸ್ಥಳದಲ್ಲೆ ಮೊಕ್ಕಾಂ ಹೂಡುವುದಾಗಿ ತಿಳಿಸಿದಾಗ ಸೋಮವಾರ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆಗೆ ವಿರಾಮ ಹಾಕಲಾಯಿತು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಪುಟ್ಟಸ್ವಾಮೇಗೌಡ, ಕೆಲ್ಲೂರು ಚಂದ್ರೇಗೌಡ, ಕುಂದೂರು ಚಂದ್ರೇಗೌಡ ಉಪಸ್ಥಿತರಿದ್ದರು.



