ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆ ಹಾವಳಿ ಮತ್ತು ಕಾಡುಪ್ರಾಣಿಗಳ ಹಾವಳಿ ತಡೆಯಲು ಶಾಶ್ವತ ಯೋಜನೆಗಳನ್ನು ರೂಪಿಸಬೇಕು ಎಂದು ಹಸಿರು ಸೇನೆ ಜಿಲ್ಲಾ ಸಂಚಾಲಕ ಡಿ.ಎಸ್. ರಮೇಶ್ ಗೌಡ ದಾರದಹಳ್ಳಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಕಾಡಾನೆ ಹಾವಳಿ ಪರಿಹಾರ ಮಾಡಲು ಆನೆ ಕಾರಿಡಾರ್, ಆನೆ ಬೀಡಾರವನ್ನು ಪ್ರಾರಂಭಿಸುವಂತೆ ಈ ಹಿಂದೆ ಒತ್ತಾಯಿಸಲಾಗಿತ್ತು ಈಗ ತರೀಕರೆ ತಾಲ್ಲೂಕಿನ ತಣಿಗೆಬೈಲು ಆರಣ್ಯದ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್ ಮಾಡಲು ಸೂಕ್ತ ಸ್ಥಳ ಆಗಿದೆ ಎಂದು ಇತ್ತೀಚೆಗೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ತಿಳಿಸಿರುತ್ತಾರೆ ಆದ್ದರಿಂದ ಈ ಕೆಲಸ ಆದಷ್ಟು ಬೇಗ ಮಾಡಿ ಮುಗಿಸಲು ರಾಜ್ಯ ಸರ್ಕಾರ ಇದಕ್ಕೆ ಬೇಕಾದ ಹಣದ ಸಂಪನ್ಮೂಲಗಳನ್ನು ಒದಗಿಸಿಕೊಟ್ಟು ಬೇಗನೆ ಆನೆ ಕಾರಿಡಾರ್ ಕೆಲಸ ಕಾರ್ಯಗಳನ್ನು ಮುಂದುವರಿಸಬೇಕೆಂದು ಒತ್ತಾಯಿಸಿದ್ಧಾರೆ.
ಕಾಡಾನೆ, ಕಾಡುಕೋಣ ಮುಂತಾದ ಪ್ರಾಣಿಗಳಿಂದ ರೈತರು ಅಪಾರ ಬೆಳೆನಷ್ಟ ಮತ್ತು ಜೀವಹಾನಿ ಅನುಭವಿಸುತ್ತಿದ್ದಾರೆ. ಇದರಿಂದ ಮಲೆನಾಡಿನ ಜನರ ಜೀವನ ದುಸ್ತರವಾಗಿದೆ. ಸರ್ಕಾರ ಈ ಬಗ್ಗೆ ಶಾಶ್ವತ ಪರಿಹಾರಕ್ಕೆ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕು ಎಂದು ರಮೇಶ್ ಗೌಡ ಆಗ್ರಹಿಸಿದ್ದಾರೆ.
ಹಾಗೆಯೇ ನಿರಂತರ ಮಳೆಯಿಂದ ರೈತರು ಬೆಳೆನಷ್ಟ ಅನುಭವಿಸುತ್ತಿದ್ದು, ಸರ್ಕಾರ ರೈತರ ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.



