ಮೂಡಿಗೆರೆ ಟಿಎಪಿಸಿಎಂಸ್ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಪಟ್ಟಣದ ರೈತಭವನದಲ್ಲಿ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಬಿಜೆಪಿ ಜೆಡಿಎಸ್ ಮೈತ್ರಿಕೂಟದ ಎಂ.ಎಲ್.ಕಲ್ಲೇಶ್, ಉಪಾಧ್ಯಕ್ಷರಾಗಿ ಕೆ.ಬಿ.ಗಣೇಶ್ ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಎ.ಎಂ.ಜ್ಯೋತಿಲಕ್ಷ್ಮಿ ಕರ್ತವ್ಯ ನಿರ್ವಹಿಸಿದರು.
ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಂ.ಆರ್.ಜಗದೀಶ್ ಮಾತನಾಡಿ, ಕಳೆದ ಅವಧಿಯಲ್ಲಿ ರೈತರು ಬಿಜೆಪಿಗೆ ಅಧಿಕಾರ ಕೊಟ್ಟಿದ್ದರು. ಉತ್ತಮ ಆಡಳಿತ ನೀಡಿದ್ದರಿಂದ ಹಾಗೂ ಎನ್ಡಿಎ ಯನ್ನು ಬೆಂಬಲಿಸುವ ಸಲುವಾಗಿ ಮತ್ತೆ ಅಧಿಕಾರ ಕೊಟ್ಟಿದ್ದಾರೆ. ಮುಂದಿನ ಅವದಿಯಲ್ಲಿ ಕೂಡ ನಮ್ಮದೇ ಆಡಳಿತ ಬರಬೇಕು. ಇದಕ್ಕೆ ರೈತರಿಗೆ ಬೇಕಾದ ಅಗತ್ಯ ಕಾರ್ಯವನ್ನು ಸಂಸ್ಥೆಯಿಂದ ಮಾಡಬೇಕೆಂದು ಸಲಹೆ ನೀಡಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಾಳೂರು ಲಕ್ಷ್ಮಣ್ಗೌಡ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಹೊಂದಾಣಿಕೆಯಿಂದ ಎಲ್ಲಾ ಮುಖಂಡರು ಕಾರ್ಯಕರ್ತರು ಶ್ರಮಿಸಿದ್ದರಿಂದ ಭರ್ಜರಿ ಗೆಲುವು ಸಿಕ್ಕಿದೆ. ಮುಂದೆ ಬರುವ ಗ್ರಾ.ಪಂ, ತಾ.ಪಂ, ಜಿ.ಪಂ ಸೇರಿದಂತೆ ಎಲ್ಲಾ ಚುನಾವಣೆ ಎನ್ಡಿಎ ಮೂಲಕ ಗೆಲುವು ಸಾಧಿಸೋಣ ಎಂದು ಹೇಳಿದರು.
ನೂತನ ಅಧ್ಯಕ್ಷ ಎಂ.ಎಲ್.ಕಲ್ಲೇಶ್ ಮಾತನಾಡಿ, ತಾನು ಇಲ್ಲಿ 5 ಬಾರಿ ನಿರ್ದೇಶಕರಾಗಿದ್ದು, ಈಗ ಅಧ್ಯಕ್ಷರಾಗುವ ಅವಕಾಶ ಸಿಕ್ಕಿದೆ. ಈಗಾಗಲೇ ಸುಮಾರು ನಾಲ್ಕೂವರೆ ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನೀಲಿ ನಕ್ಷೆ ತಯಾರಿಸಲಾಗಿದೆ. ಜತೆಗೆ ರೈತರಿಗೆ ಬೇಕಾದ ಎಲ್ಲಾ ಅನುಕೂಲತೆ ಮಾಡಿಕೊಡಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಸಂಸ್ಥೆ ನಿರ್ದೇಶಕರಾದ ವಿ.ಕೆ.ಶಿವೇಗೌಡ, ಪಿ.ಜಿ.ಅನುಕುಮಾರ್, ಟಿ.ಎಂ.ಗಜೇಂದ್ರ, ರಂಜನ್ ಅಜಿತ್ಕುಮಾರ್, ಜಿ.ಎಂ.ಪ್ರಸನ್ನಕುಮಾರ್, ಎಂ.ಎಸ್.ಪ್ರಸನ್ನ, ಟಿ.ಎ.ಶೇಖರ್ ಬಂಗೇರ, ಎಂ.ಕೆ.ಚಂದ್ರೇಶ್, ರಮೇಶ್, ಬಿ.ಎಲ್.ವಿದ್ಯಾ, ಎಸ್.ಸಿ.ಪುಟ್ಟಮ್ಮ, ಸೇರಿದಂತೆ ವಿವಿಧ ಪಕ್ಷ ಹಾಗೂ ರೈತ ಸಂಘಟನೆ ಮುಖಂಡರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
ನೂತನ ಅಧ್ಯಕ್ಷ ಎಂ.ಎಲ್. ಕಲ್ಲೇಶ್ ಅವರು ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ ಗ್ರಾಮದವರಾಗಿದ್ದು ಹಿರಿಯ ಸಹಕಾರಿ ಮತ್ತು ರಾಜಕೀಯ ಮುಖಂಡರಾಗಿದ್ದಾರೆ. ರಾಜಕೀಯವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡು ಪಕ್ಷದ ತಾಲ್ಲೂಕು ಅಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಮಾಕೋನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ, ಹಾಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಡಿಗೆರೆ ಟಿಎಪಿಸಿಎಂಎಸ್ ಗೆ ಐದನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿ ಪ್ರಸ್ತುತ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರನ್ನು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅಭಿನಂದಿಸಿದರು
*****



