ಬಾಂಗ್ಲಾದೇಶದ ಅಕ್ರಮ ವಲಸಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನುಬಾಹಿರವಾಗಿ ಮನೆ ಬಾಡಿಗೆ ನೀಡುವ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಬಿಜೆಪಿ ಆಲ್ದೂರು ಮಂಡಲದ ಕಾರ್ಯಕರ್ತರು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳನ್ನ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಬಾಂಗ್ಲಾದೇಶದ ಅಕ್ರಮ ವಲಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಾಂಗ್ಲಾ ವಲಸಿಗರು ಅಸ್ಸಾಂ ನವರೆಂದು ಹೇಳಿಕೊಂಡು ಸುಳ್ಳು ದಾಖಲಾತಿ ನೀಡಿ ಮಲೆನಾಡು ಭಾಗದಲ್ಲಿ ವಾಸವಿದ್ದು ಇಂತಹವರನ್ನು ಪತ್ತೆ ಹಚ್ಚಿ ಹೊರಹಾಕಬೇಕು ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಚಿಕ್ಕಮಗಳೂರು, ಹಾಸನ, ಕೊಡಗು ಭಾಗದ ಕಾಫಿ ತೋಟಗಳಲ್ಲಿ ಅಕ್ರಮ ವಲಸಿಗರು ಕೆಲಸ ಮಾಡುತ್ತಿದ್ದು ಪೊಲೀಸ್ ಇಲಾಖೆಯವರು ಇಂತಹ ಕೆಲಸಗಾರರ ವಿವರಗಳನ್ನು ಕೇಳಿದಾಗ ಬಹುತೇಕ ಕಾಫಿ ಬೆಳೆಗಾರರು ಇಲಾಖೆಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಸಕಲೇಶಪುರ, ಆಲೂರು, ಮೂಡಿಗೆರೆ, ಬೇಲೂರು ಮುಂತಾದ ಕಾಫಿ ಬೆಳೆಯುವ ಪ್ರದೇಶಗಳಿಗೆ ಹೊಂದಿಕೊಂಡಿರುವ ನಗರ ಮತ್ತು ಪಟ್ಟಣಗಳಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿರುವ ಬಾಂಗ್ಲಾದೇಶಿಗರ ಸಂಖ್ಯೆ ಹೆಚ್ಚುತ್ತಿದೆ. ಇದು ಮಲೆನಾಡು ಭಾಗಕ್ಕೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ತೊಂದರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸುಳ್ಳು ದಾಖಲಾತಿ ಆಧಾರ್ ಕಾರ್ಡ್ ಸೃಷ್ಟಿಸಿ ಮನೆ ಬಾಡಿಗೆ ಪಡೆದು ದುರುಪಯೋಗ ಪಡಿಸಿಕೊಂಡು ಕಾನೂನುಬಾಹಿರ ಚಟುವಟಿಕೆ, ಕೊಲೆ, ದರೋಡೆಯಂತಹ ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತದೆ. ಇತ್ತೀಚೆಗೆ ಅರೇಹಳ್ಳಿ ನಡೆದ ಘಟನೆಗಳು ಪ್ರತ್ಯೇಕ ಉದಾಹರಣೆಯಾಗಿದೆ ಎಂದರು. ಹಾಗಾಗಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಾಗೆ ಬಾಂಗ್ಲಾ ವಲಸಿಗರಿಂದ ಮಲೆನಾಡು ಪ್ರದೇಶದಲ್ಲಿ ಅಶಾಂತಿಗೆ ಕಾರಣವಾಗಬಹುದು. ಅಕ್ರಮ ವಲಸಿಗರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕಾನೂನುಬಾಹಿರವಾಗಿ ಯಾರೂ ಮನೆ ಬಾಡಿಗೆ ನೀಡಬಾರದು ಎಂದು ಬಿಜೆಪಿ ಆಲ್ಲೂರು ಮಂಡಲದ ಕಾರ್ಯಕರ್ತರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಿಥುನ್ ಗೌಡ ಹಳಿಯೂರು, ಹೋಬಳಿ ಕಾರ್ಯದರ್ಶಿ ಆತ್ಮೀಕ್, ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರತಿಭಾ ನವೀನ್, ಜಿಲ್ಲಾ ಕಾರ್ಯದರ್ಶಿ ಚಂಪಾ ಜಗದೀಶ್, ಹೋಬಳಿ ಅಧ್ಯಕ್ಷ ನಾಗೇಶ್, ಮಂಡಲ ಉಪಾಧ್ಯಕ್ಷೆ ಭವ್ಯ ನಟೇಶ್, ಮಂಡಲ ಅಧ್ಯಕ್ಷ ರವೀಂದ್ರ, ಸೇರಿದಂತೆ ಅನೇಕರು ಹಾಜರಿದ್ದರು



