ಮಲೆನಾಡು ಭಾಗದಲ್ಲಿ ಹೊರರಾಜ್ಯಗಳ ವಲಸೆ ಕಾರ್ಮಿಕರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕಾಗಿದ್ದು, ಅಕ್ರಮ ಬಾಂಗ್ಲಾ ವಲಸಿಗರು ಕಂಡು ಬಂದರೆ ಸಂಬಂಧಿಸಿದ ಇಲಾಖೆಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ಹೇಳಿದರು.
ಅವರು ಸೋಮವಾರ ಮೂಡಿಗೆರೆ ಜೇಸಿಐ ಭವನದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮಕ್ಕೆ ಆಗ್ರಹಿಸಲು ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಕಾಫಿ ತೋಟಗಳ ನಿರ್ವಹಣೆಗೆ ವಲಸೆ ಕಾರ್ಮಿಕರ ಅನಿವಾರ್ಯತೆಯಿದೆ. ಆದರೆ ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಹಳಷ್ಟು ಮಂದಿ ಬಾಂಗ್ಲಾದೇಶದ ನುಸುಳುಕೋರರು ಆಗಮಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇಂತಹ ನುಸುಳುಕೋರರಿಂದ ಈಗಾಗಲೇ ಮಲೆನಾಡು ಭಾಗದಲ್ಲಿ ಬಹಳಷ್ಟು ಸಮಸ್ಯೆಗಳು ಸೃಷ್ಟಿಯಾಗಿವೆ. ದರೋಡೆ, ಕೊಲೆ, ಗೋಹತ್ಯೆಯಂತಹ, ಮಾದಕವಸ್ತುಗಳ ಮಾರಾಟದಂತಹ ಅಕ್ರಮ ಚಟುವಟಿಕೆ ಪ್ರಕರಣಗಲು ದಾಖಲಾಗುತ್ತಿವೆ. ಇದರ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಕಾಫಿ ಎಸ್ಟೇಟ್ ಗಳಲ್ಲಿ ಇರುವ ವಲಸೆ ಕಾರ್ಮಿಕರ ಬಗ್ಗೆ ಮಾಲೀಕರು ಎಚ್ಚರಿಕೆಯಿಂದ ಇರಬೇಕು, ಅವರ ದಾಖಲೆಗಳನ್ನು ಪರಿಶೀಲಿಸಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಮಾತನಾಡಿ ; ಕಾಫಿ ಎಸ್ಟೇಟ್ ಗಳಲ್ಲಿ ಬರುವ ಕಾರ್ಮಿಕರ ಸಮಗ್ರ ಮಾಹಿತಿ ಮತ್ತು ದಾಖಲೀಕರಣಕ್ಕಾಗಿ ಈ ಹಿಂದೆ ಚಿಕ್ಕಮಗಳೂರು ಎಸ್ಪಿಯಾಗಿದ್ದ ಉಮಾ ಪ್ರಶಾಂತ್ ಅವರ ಕಾಲದಲ್ಲಿ ಆಪ್ ಒಂದನ್ನು ಅಭಿವೃದ್ಧಿಪಡಿಸಲಾಗಿತ್ತು. ಅದರಲ್ಲಿ ಕಾರ್ಮಿಕವ ವಿವರಗಳನ್ನು ಅಪ್ಲೋಡ್ ಮಾಡಲು ಅವಕಾಶವಿತ್ತು. ಆದರೆ ಅದೀಗ ನೆನೆಗುದಿಗೆ ಬಿದ್ದಿದೆ. ಜಿಲ್ಲೆಗೆ ನೂತನವಾಗಿ ಬಂದಿರುವ ಎಸ್ಪಿಯವರು ಇದರ ಬಗ್ಗೆ ಕ್ರಮ ವಹಿಸಿ ಆಪ್ ಮೂಲಕ ವಲಸೆ ಕಾರ್ಮಿಕರ ಸುರಕ್ಷಿತ ನಿರ್ವಹಣೆಗೆ ಅವಕಾಶ ಮಾಡಿಕೊಡಬೇಕು ಎಂದರು.

ಮೂಡಿಗೆರೆ ಟೈಲರ್ ಸಂಘದ ಗೌರವಾಧ್ಯಕ್ಷ ಶಿವೇಗೌಡ ಮಾತನಾಡಿ ಮೂಡಿಗೆರೆ ಪಟ್ಟಣದ ಬಿಳಗುಳ ಭಾಗದಲ್ಲಿ ವಲಸೆ ಕಾರ್ಮಿಕರ ಉಪಟಳ ಹೆಚ್ಚಾಗಿದೆ. ಇಲ್ಲಿ ಸಣ್ಣ ಸಣ್ಣ ಬಾಡಿಗೆ ಮನೆಗಳನ್ನು ಪಡೆದು ಒಂದೇ ಮನೆಯಲ್ಲಿ ಹತ್ತಾರು ಜನರು ವಾಸ ಮಾಡುತ್ತಿದ್ದಾರೆ. ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ಪೊಲೀಸ್ ಇಲಾಖೆ ಕ್ರಮ ವಹಿಸಬೇಕು. ಬಾಡಿಗೆಗೆ ಮನೆಗಳನ್ನು ನೀಡುವಾಗ ಸೂಕ್ತ ನಿಯಮಗಳನ್ನು ಪಾಲನೆ ಮಾಡುವಂತೆ ಮನೆ ಮಾಲೀಕರಿಗೆ ಸೂಚನೆ ನೀಡಬೇಕು ಎಂದರು.
ವಿಶ್ವಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಸುದೇವ್ ಗುತ್ತಿ ಮಾತನಾಡಿ ;ಇತ್ತೀಚೆಗೆ ಮೂಡಿಗೆರೆ ಸಂತೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ನಾವು ಯಾರ ಮೇಲೂ ಹಲ್ಲೆ ಮಾಡಿಲ್ಲ, ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿಯೇ ಕಾರ್ಯಕ್ರಮ ರೂಪಿಸಿದ್ದೆವು, ಆದರೆ ಪೊಲೀಸರು ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಿದ್ದಾರೆ. ನಾವು ಯಾವುದೇ ಮತದವರ ವಿರುದ್ಧವಲ್ಲ, ಬಾಂಗ್ಲಾ ನುಸುಳುಕೋರರಿಂದ ಮುಂದಿನ ದಿನಗಳಲ್ಲಿ ಎಲ್ಲಾ ಜನಾಂಗದವರಿಗೂ ಸಮಸ್ಯೆ ಕಟ್ಟಿಟ್ಟ ಬುತ್ತಿ, ಮಲೆನಾಡಿನ ನೆಮ್ಮದಿ ಮತ್ತು ದೇಶದ ಹಿತದೃಷ್ಟಿಯಿಂದ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಮತ್ತು ಸರ್ಕಾರ ಈ ಬಗ್ಗೆ ಕಾಲಮಿತಿಯೊಳಗೆ ಕಠಿಣ ಕ್ರಮ ವಹಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಮೂಡಿಗೆರೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು. ಈ ಹೋರಾಟ ಜಿಲ್ಲೆ ಮತ್ತು ರಾಜ್ಯಮಟ್ಟಕ್ಕೆ ವ್ಯಾಪಿಸಲಿದ್ದು, ಇದಕ್ಕೆ ಎಲ್ಲಾ ಸಂಘ ಸಂಸ್ಥೆಗಳು, ಜನಾಂಗದವರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಮೂಡಿಗೆರೆ ಸೀನಿಯರ್ ಛೇಂಬರ್ ಪದಾಧಿಕಾರಿ ಬಿ.ಎನ್. ಮನಮೋಹನ್, ರೈತ ಸಂಘದ ಮುಖಂಡ ಬಿ.ಸಿ.ದಯಾಕರ್, ಹಿರಿಯ ಮುಖಂಡ ಎಂ.ಆರ್.ಜಗದೀಶ್, ಛಲವಾದಿ ಮಹಾಸಭಾದ ಮಂಜುನಾಥ್ ಬೆಟ್ಟಗೆರೆ, ಆಟೋ ಸಂಘದ ಯು.ಬಿ. ನಾಗೇಶ್, ಕೆಂಪೇಗೌಡ ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಬ್ರಿಜೇಶ್ ಕಡಿದಾಳು, ಪತ್ರಕರ್ತ ಪ್ರಸನ್ನ ಗೌಡಹಳ್ಳಿ, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಸಾಲುಮರ, ಹೋಂ ಸ್ಟೇ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕೆಸವಳಲು, ವಿಹಿಂಪ ಕಾರ್ಯದರ್ಶಿ ಪ್ರಶಾಂತ್ ಹಂಡುಗುಳಿ, ವಿಹಿಂಪ ಉಪಾಧ್ಯಕ್ಷ ಅಭಿಲಾಷ್ ಉಗ್ಗೆಹಳ್ಳಿ, ಭಜರಂಗದಳ ಸಂಯೋಜಕ ಸಂತೋಷ ಶುಭ ನಗರ, ಮೂಡಿಗೆರೆ ಜೇಸಿಐ ಅಧ್ಯಕ್ಷ ಸುನಿಲ್ ಶೆಟ್ಟಿ, ಸವಿತಾ ಸಮಾಜದ ಅಧ್ಯಕ್ಷ ಮಹೇಶ್, ಬಿಜೆಪಿ ತಾಲ್ಲೂಕು ಕಾರ್ಯದರ್ಶಿ ಪ್ರಶಾಂತ್ ಬಿಳಗುಳ, ಸುಜಾತ, ಚಂದ್ರಾವತಿ ಬಿಳಗುಳ ಮುಂತಾದವರು ಇದ್ದರು.



