ಚಿಕ್ಕಮಗಳೂರು ನಗರದ ಐ.ಜಿ.ರಸ್ತೆಯಲ್ಲಿರುವ ಮಥಾಯಿಸ್ ಟವರ್ನಿಂದ ಎನ್.ಎಂ.ಸಿ. ವೃತ್ತದವರೆಗೆ ರಸ್ತೆಯ ಎರಡೂ ಬದಿಯಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಅನ್ನು 100 ಅಡಿ ಅಂತರದಲ್ಲಿ ಮತ್ತು ನಾಲ್ಕು ಚಕ್ರದ ವಾಹನಗಳನ್ನು 200 ಅಡಿಗಳ ಅಂತರದಲ್ಲಿ ನಿಲುಗಡೆ ಮಾಡುವಂತೆ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಐ.ಜಿ.ರಸ್ತೆಯ ಒಂದು ಬದಿಯಲ್ಲಿ ದ್ವಿಚಕ್ರ ವಾಹನ ಮತ್ತು ಇನ್ನೊಂದು ಬದಿಯಲ್ಲಿ ನಾಲ್ಕು ಚಕ್ರದ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿತ್ತು. ಈ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ವಿಭಜಕ ನಿರ್ಮಿಸಿರುವುದರಿಂದ ವಾಹನಗಳನ್ನು ಯು ಟರ್ನ್ ಮಾಡುವಾಗ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಮಥಾಯಿಸ್ ಟವರ್ನಿಂದ ಎನ್.ಎಂ.ಸಿ. ವೃತ್ತದವರೆಗೆ ರಸ್ತೆಯ ಎರಡೂ ಬದಿಯಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಅನ್ನು 100 ಅಡಿ ಅಂತರದಲ್ಲಿ ಮತ್ತು ನಾಲ್ಕು ಚಕ್ರದ ವಾಹನಗಳನ್ನು 200 ಅಡಿಗಳ ಅಂತರದಲ್ಲಿ ನಿಲುಗಡೆ ಮಾಡಲು ಸಾರ್ವಜನಿಕರಿಂದ ಕೋರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಗತ್ಯ ಸಾರ್ವಜನಿಕ ಫಲಕಗಳನ್ನು ಅಳವಡಿಸಿ ವಾಹನಗಳ ನಿಲುಗಡೆಗೆ ಪ್ರಾಯೋಗಿಕ ಅವಕಾಶ ಮಾಡಿಕೊಡಲಾಗಿತ್ತು. ಇದರಿಂದ ಸುಗಮ ಸಂಚಾರಕ್ಕೆ ಅವಕಾಶವಾಗಿದ್ದು, ಸಾರ್ವಜನಿಕರಿಂದಲೂ ಸರ್ವಾನುಮತದ ಒಪ್ಪಿಗೆ ದೊರಕಿದೆ.
ಸಾರ್ವಜನಿಕ ಅಭಿಪ್ರಾಯದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ನೀಡಿದ ಪ್ರಸ್ತಾವನೆಯನ್ನು ಆಧರಿಸಿ ನಗರದ ಐ.ಜಿ.ರಸ್ತೆಯಲ್ಲಿ ಸಾರ್ವಜನಿಕ ಹಾಗೂ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.




