ಚಿಕ್ಕಮಗಳೂರು ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕೊಲ್ಕತ್ತಾ ಮೂಲದ ರುದ್ರ, ಆಂಧ್ರ ಪ್ರದೇಶದ ಅದೋನಿಯ ವೀರ ಶೇಖರ್, ತುಮಕೂರಿನ ವಿನಿ ಹಾಗೂ ಸ್ಥಳೀಯ ನಿವಾಸಿ ಹನುಮಂತ ಎಂದು ಗುರುತಿಸಲಾಗಿದೆ.
ಇವರೆಲ್ಲ ಸೇರಿ ಜನವರಿ 20 ರಂದು ನಗರದ ಪೇಜ್ ತ್ರೀ (ಹಿಂದಿನ ಪ್ರೀತಂ ಬಾರ್) ನಲ್ಲಿ ತೇಜಸ್ವಿಯವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು.
ಈ ಸಂಬಂಧ ಮೃತರ ಸಹೋದರ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣದ ದಾಖಲಿಸಿಕೊಂಡು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ನಾವೇ ಕೊಲೆ ಮಾಡಿದ್ದು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಮೃತ ತೇಜಸ್ವಿಯವರು ಚಿಕ್ಕಮಗಳೂರು ನಲ್ಲೂರು ಗೇಟ್ ಬಳಿ ಬಾರ್ ಹೊಂದಿದ್ದು, ತನ್ನ ಬಾರ್ ಬಂದ್ ಮಾಡಿದ್ದ ನಂತರ ಮಾರ್ಕೇಟ್ ರಸ್ತೆಯಲ್ಲಿ ಇರುವ ಪೇಜ್ ತ್ರೀ ಬಾರ್ ನಲ್ಲಿ ಮದ್ಯಪಾನ ಮಾಡಲು ಹೋಗುತ್ತಿದ್ದರು ಎನ್ನಲಾಗಿದೆ.



